Monday, 7 December 2015

ಚಳವಳಿಗಾರರನ್ನು ಬಲಿಹಾಕುವ ದುಷ್ಟತನವೇಕೆ?

ಈ ಲೇಖನವನ್ನು ಆರಂಭ ಮಾಡುವ ಮೊದಲೇ ನಾನು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ನಾವು, ಚಳವಳಿಗಾರರು ಪೊಲೀಸರು ಹೂಡುವ ಮೊಕದ್ದಮೆಗಳಿಗೆ, ಜೈಲುವಾಸಕ್ಕೆ ಹೆದರುವವರಲ್ಲ. ಅಷ್ಟು ಮಾತ್ರ ಯಾಕೆ, ಪೊಲೀಸರ ಲಾಠಿ ಏಟು, ಬೂಟಿನ ಏಟು ತಿಂದವರು ನಾವು. ಅದಕ್ಕೂ ನಾವು ಭೀತಿ ಪಡುವುದಿಲ್ಲ. ಪದೇ ಪದೇ ನಾನು ಒಂದು ಮಾತನ್ನು ಹೇಳುತ್ತಿರುತ್ತೇನೆ; ಮೈಯಲ್ಲಿ ಕೊನೆಯ ಹನಿ ರಕ್ತ ಇರುವವರೆಗೂ ನೆಲಕ್ಕಾಗಿ, ನಾಡು-ನುಡಿಗಾಗಿ ಹೋರಾಟ ಮಾಡಿ ಈ ಸ್ವರ್ಗಭೂಮಿಯಲ್ಲಿ ಪ್ರಾಣ ಬಿಡುತ್ತೇವೆಯೇ ಹೊರತು ಹೆದರಿ ಹಿಂದಕ್ಕೆ ಹೋಗುವ ಪ್ರಶ್ನೆಯೇ ಇಲ್ಲ.

ಚಳವಳಿ ಎಂದರೇನೇ ಪ್ರಭುತ್ವವನ್ನು ಎದುರುಹಾಕಿಕೊಳ್ಳುವ ಪ್ರಕ್ರಿಯೆ. ಯಾವುದೇ ಪ್ರಭುತ್ವವೂ ತನ್ನನ್ನು, ತನ್ನ ನಿಲುವನ್ನು ವಿರೋಧಿಸುವವರೆಡೆಗೆ ಒಂದು ಬಗ್ಗೆಯ ಅಸಹನೆಯನ್ನು ಇಟ್ಟುಕೊಂಡಿರುತ್ತದೆ. ಅದು ರಾಜಪ್ರಭುತ್ವವಾದರೂ ಸರಿ, ಪ್ರಜಾಪ್ರಭುತ್ವವಾದರೂ ಸರಿ ಅಥವಾ ಮಿಲಿಟರಿ ಆಡಳಿತವಾದರೂ ಕೂಡ. ಮಿಕ್ಕೆಲ್ಲ ರಾಜಕೀಯ ವ್ಯವಸ್ಥೆಗಳಿಗಿಂತ ಪ್ರಜಾಪ್ರಭುತ್ವ ಮೇಲು. ಯಾಕೆಂದರೆ ಇತರೆ ಆಡಳಿತ ವ್ಯವಸ್ಥೆಗಳ ಹಾಗೆ ಪ್ರಜಾಪ್ರಭುತ್ವದಲ್ಲಿ ಜನರ ಹೋರಾಟವನ್ನು ಅಷ್ಟು ಸುಲಭವಾಗಿ ಹತ್ತಿಕ್ಕಲು ಸಾಧ್ಯವಿರುವುದಿಲ್ಲ.

ಆದರೆ ಎಷ್ಟೋ ಸಂದರ್ಭಗಳಲ್ಲಿ ಆಳುವ ಸ್ಥಾನದಲ್ಲಿ ಕುಳಿತುಕೊಂಡ ರಾಜಕಾರಣಿಗಳು ಸರ್ವಾಧಿಕಾರಿಗಳ ಹಾಗೆಯೇ ವರ್ತಿಸುತ್ತಾರೆ. ತಮಗೆ ದಕ್ಕಿದ ಅಧಿಕಾರ ಶಾಶ್ವತವೆಂಬ ಭ್ರಮೆಯಲ್ಲೇ ಇರುತ್ತಾರೆ. ತಮ್ಮ ವಿರುದ್ಧ ಕೇಳಿಬರುವ ಯಾವುದೇ ಧ್ವನಿಯನ್ನು ಹತ್ತಿಕ್ಕುವ ದುಷ್ಟತನವನ್ನು ಕಾರ್ಯವನ್ನು ನಡೆಸುತ್ತಲೇ ಇರುತ್ತಾರೆ.

ದುರದೃಷ್ಟವೆಂದರೆ ಕನ್ನಡ ಚಳವಳಿಗಾರರನ್ನು ಸಹ ಸರ್ಕಾರಗಳು ತಮ್ಮ ಶತ್ರುಗಳೆಂದೇ ಪರಿಗಣಿಸುತ್ತ ಬಂದಿರುವುದು. ನಾವು ನಾಡು-ನುಡಿಗಾಗಿ ಹೋರಾಡುತ್ತ ಬಂದವರು. ಒಂದು ಸರ್ಕಾರವಾಗಿ ಅವರು ನಮ್ಮ ಹೋರಾಟವನ್ನು ಬೆಂಬಲಿಸುವುದು ಬೇಡ, ಆದರೆ ಚಳವಳಿಯನ್ನು ಹತ್ತಿಕ್ಕುತ್ತಲೇ ಹೋದರೆ ಅದಕ್ಕೇನು ಅರ್ಥ? ಎಷ್ಟೋ ಸಂದರ್ಭಗಳಲ್ಲಿ ಸರ್ಕಾರದಿಂದ ಸಾಧ್ಯವಾಗದ ಕೆಲಸವನ್ನು ಕನ್ನಡ ಚಳವಳಿಗಾರರು ಮಾಡಿದ್ದಾರೆ. ಆದರೂ ಕನ್ನಡ ಚಳವಳಿಯನ್ನೇ ಹತ್ತಿಕ್ಕುವ ಪ್ರಯತ್ನಗಳು ಯಾಕೆ ಮಾಡಲಾಗುತ್ತದೆ?

ಬೇರೆ ಕನ್ನಡ ಸಂಘಟನೆಗಳ ವಿಷಯ ಹಾಗಿರಲಿ, ನಾನು ಕರ್ನಾಟಕ ರಕ್ಷಣಾ ವೇದಿಕೆಗೆ ಸಂಬಂಧಿಸಿದಂತೆ ಇಡೀ ರಾಜ್ಯದಲ್ಲಿ ಹೂಡಲಾಗಿರುವ ಮೊಕದ್ದಮೆಗಳ ಸಂಖ್ಯೆಯನ್ನು ಹೇಳಿದರೆ ಯಾರಿಗಾದರೂ ಗಾಬರಿಯಾಗುತ್ತದೆ. ನನ್ನ ಮತ್ತು ನನ್ನ ಕಾರ್ಯಕರ್ತರ ಮೇಲೆ ಹೂಡಲಾಗಿರುವ ಒಟ್ಟು ಮೊಕದ್ದಮೆಗಳ ಸಂಖ್ಯೆ ಸಾವಿರದ ಇನ್ನೂರನ್ನು ಮೀರುತ್ತದೆ ಎಂದರೆ ನೀವು ನಂಬಲೇಬೇಕು. ನನ್ನ ಮೇಲೆ ನನ್ನ ಗಮನದಲ್ಲಿ ಇರುವ ಮೊಕದ್ದಮೆಗಳ ಸಂಖ್ಯೆಯೇ ಸುಮಾರು ನಲವತ್ತೆಂಟು. ಪೊಲೀಸರು ನಮ್ಮ ಮಹಿಳಾ ಕಾರ್ಯಕರ್ತೆಯರನ್ನೂ ಬಿಟ್ಟಿಲ್ಲ. ಅವರ ಮೇಲೂ ಸಾಕಷ್ಟು ಮೊಕದ್ದಮೆಗಳನ್ನು ಹೂಡಲಾಗಿದೆ.
ಇದೆಲ್ಲ ಯಾವ ರೀತಿಯ ಮೊಕದ್ದಮೆಗಳು? ಯಾವುದೋ ಚಳವಳಿಗೆ ನಾವು ಅನುಮತಿ ಪಡೆದಿರುವುದಿಲ್ಲ, ಚಳವಳಿಯ ಸಂದರ್ಭದಲ್ಲಿ ರಸ್ತೆ ತಡೆ ಮಾಡಿರುತ್ತೇವೆ, ಇನ್ನೆಲ್ಲೋ ಪೊಲೀಸರ ನೀತಿ ನಿಯಮಾವಳಿಗಳನ್ನು ಪಾಲಿಸಿರುವುದಿಲ್ಲ. ಇಂಥ ಸಂದರ್ಭದಲ್ಲಿ ನಮ್ಮ ಮೇಲೆ ಮೊಕದ್ದಮೆಗಳನ್ನು ಹೂಡಲಾಗಿರುತ್ತದೆ. ಕೆಲವೊಮ್ಮೆ ಎಲ್ಲ ನಿಯಮಗಳನ್ನು ಪಾಲಿಸಿಯೇ ಚಳವಳಿ ನಡೆಸಿದ್ದರೂ ನಮ್ಮ ಮೇಲೆ ಮೊಕದ್ದಮೆಗಳನ್ನು ಹೂಡಲಾಗಿರುತ್ತದೆ. ಎಷ್ಟೋ ಸಂದರ್ಭದಲ್ಲಿ ನಮ್ಮ ಮೇಲೆ ಮೊಕದ್ದಮೆ ಹೂಡಿರುವುದು ಗೊತ್ತಾಗಿರುವುದೇ ಇಲ್ಲ. ಪೊಲೀಸರು ನಮ್ಮ ಮನೆಯ ಬಾಗಿಲಿಗೆ ವಾರಂಟ್ ತಂದಾಗಲೇ ನಮ್ಮ ಮೇಲೆ ಮೊಕದ್ದಮೆ ಹೂಡಲಾಗಿದೆ ಎಂಬುದು ಗೊತ್ತಾಗುತ್ತದೆ.

ಕೆಲವು ಸಂದರ್ಭಗಳಲ್ಲಿ ನಾವು ಸರ್ಕಾರದ ವಿರುದ್ಧ ತೊಡೆ ತಟ್ಟಿ ನಿಂತಾಗ, ನಮ್ಮನ್ನು ಹಣಿಯಲು ಇಂಥ ಚಳವಳಿಗಳ ಸಂದರ್ಭವನ್ನೇ ಬಳಸಿಕೊಳ್ಳಲಾಗುತ್ತದೆ. ನಾವು ಕಂಡು ಕೇಳರಿಯದ ಸೆಕ್ಷನ್‌ಗಳನ್ನು ನಮ್ಮ ಮೇಲೆ ಹೇರಲಾಗುತ್ತದೆ. ನಮ್ಮ ಎಷ್ಟೋ ಕಾರ್ಯಕರ್ತರ ಮೇಲೆ ಪೊಲೀಸರು ಗೂಂಡಾ ಕಾಯ್ದೆ ತೆರೆದಿದ್ದಾರೆ. ಇವರ್‍ಯಾರೂ ಸಮಾಜಘಾತಕ ಚಟುವಟಿಕೆ ನಡೆಸಿದವರಲ್ಲ, ಚಳವಳಿಯ ಮೊಕದ್ದಮೆಗಳನ್ನು ಬಿಟ್ಟರೆ ಬೇರೆ ಯಾವ ರೀತಿಯ ಕ್ರಿಮಿನಲ್ ಕೇಸುಗಳಲ್ಲೂ ಇದ್ದವರಲ್ಲ, ಆದರೂ ಇವರ ಮೇಲೆ ಗೂಂಡಾ ಕಾಯ್ದೆಯನ್ನು ಹೂಡಲಾಗಿದೆ.

ನಮ್ಮ ದೇಶದಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಯಾವತ್ತಿಗೂ ಸುರಕ್ಷಿತರು. ಒಂದು ಪಕ್ಷದ ಅಧಿಕಾರವಿದ್ದಾಗ ಇನ್ನೊಂದು ಪಕ್ಷದ ಕಾರ್ಯಕರ್ತರ ಮೇಲೆ ಮೊಕದ್ದಮೆಗಳನ್ನು ಹೂಡಲಾಗಿರುತ್ತದೆ. ಆ ಇನ್ನೊಂದು ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ತನ್ನ ಕಾರ್ಯಕರ್ತರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುತ್ತದೆ. ಬಳ್ಳಾರಿಯಲ್ಲಿ ಗಡಿರೇಖೆಯನ್ನೇ ಬದಲಾಯಿಸಿ ನೂರಾರು ಕೋಟಿ ರೂ. ಗಣಿ ಸಂಪತ್ತನ್ನು ಲೂಟಿ ಮಾಡಿದವರ ಮೇಲೆ ಇದ್ದ ಕೇಸ್‌ಗಳನ್ನು ಹಿಂದೆ ಇದ್ದ ಬಿಜೆಪಿ ಸರ್ಕಾರ ಹಿಂದಕ್ಕೆ ಪಡೆಯಿತು. ಮಸೀದಿ, ಚರ್ಚ್‌ಗಳ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳ ಮೇಲೆ ಇದ್ದ ಕೇಸುಗಳನ್ನು ವಾಪಾಸು ತಗೊಂಡಿತು. ಆದರೆ ಯಾರು ಎಷ್ಟೇ ಹೇಳಿದರೂ ಕನ್ನಡಕ್ಕಾಗಿ ಹೋರಾಟ ಮಾಡಿದವರ ಮೇಲೆ ಇದ್ದ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಿಲ್ಲ.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮಾಡಿದ್ದೂ ಅದೇ ಕೆಲಸವನ್ನೇ. ತನಗೆ ಬೇಕಾದವರ ಮೇಲಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆಯಿತು. ಕಣ್ಣೊರೆಸಲು ಒಂದಷ್ಟು ರೈತರ ಮೇಲಿನ ಪ್ರಕರಣಗಳನ್ನೂ ಹಿಂದಕ್ಕೆ ಪಡೆಯಲಾಯಿತು. ಇತ್ತೀಚಿಗೆ ಕೋಮು ಗಲಭೆಗಳಲ್ಲಿ ಪಾಲ್ಗೊಂಡಿದ್ದ ಪಿಎಫ್‌ಐ ಎಂಬ ಸಂಘಟನೆಯ ಕಾರ್ಯಕರ್ತರ ಮೇಲಿದ್ದ ಮೊಕದ್ದಮೆಗಳನ್ನೂ ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಿತು.

ತಿರುವಳ್ಳುವರ್ ಪ್ರತಿಮೆ ಅನಾವರಣದ ಸಂದರ್ಭದಲ್ಲಿ ರಾತ್ರೋರಾತ್ರಿ ೧೮೦ ಕಾರ್ಯಕರ್ತರನ್ನು ಬಂಧಿಸಿದ್ದರು. ಬೆಂಗಳೂರಿನ ಒಟ್ಟು ೧೧ ಪೊಲೀಸ್ ಠಾಣೆಗಳಲ್ಲಿ ನನ್ನ ಮೇಲೆ ಕೇಸುಗಳನ್ನು ಹಾಕಲಾಯಿತು. ತಮಾಷೆ ನೋಡಿ, ಬೆಂಗಳೂರಿನಲ್ಲಿರುವ ನನ್ನ ಮೇಲೆ ಬೆಳಗಾವಿಯಲ್ಲಿ, ರಾಯಚೂರಿನಲ್ಲಿ ನಡೆದ ಪ್ರತಿಭಟನೆಯಲ್ಲೂ ಎ-೧ ಮಾಡಿ ಪ್ರಕರಣ ಹೂಡಲಾಯಿತು. ರೈಲ್ವೆ ಹೋರಾಟದ ಸಂದರ್ಭದಲ್ಲೂ ಅಷ್ಟೆ, ನಮ್ಮ ಕಾರ್ಯಕರ್ತರ ತಲೆಯ ಮೇಲೆ ಬಿದ್ದ ಮೊಕದ್ದಮೆಗಳಿಗೆ ಲೆಕ್ಕವೇ ಇಲ್ಲ. ನಾವು ದಿನಬೆಳಗಾದರೆ ಸಾಕು, ನ್ಯಾಯಾಲಯಗಳಲ್ಲಿ ಕೈಕಟ್ಟಿ ನಿಂತುಕೊಳ್ಳಬೇಕು. ಇನ್ನೆಷ್ಟು ದಿನ ಈ ಚಿತ್ರಹಿಂಸೆಯನ್ನು ಸಹಿಸಿಕೊಳ್ಳಬೇಕು? ಅಷ್ಟಕ್ಕೂ ನಾವೇನು ಕೊಲೆಗಡುಕರೇ? ದರೋಡೆಕೋರರೇ? ಸಮಾಜಘಾತಕರೇ?

ಮೊಕದ್ದಮೆಗಳ ಕಾರಣಕ್ಕೆ ನಾವು ಕೋರ್ಟು ಅಲೆದು ಅಲೆದು ಸಾಕಾಗಿದ್ದೇವೆ. ಬರೀ ನಮ್ಮ ಸಮಯ, ಶ್ರಮವಷ್ಟೇ ಇದರಿಂದ ವ್ಯಯವಾಗುತ್ತಿಲ್ಲ. ವಕೀಲರಿಗೆ ಫೀಜು ನೀಡಬೇಕಲ್ಲವೇ? ಅದರ ಖರ್ಚು ಯಾರು ನೋಡಿಕೊಳ್ಳುವುದು? ಚಳವಳಿಗಳ ಕೇಸುಗಳನ್ನು ನಿರ್ವಹಿಸಲೆಂದೇ ನಾವು ವಕೀಲರ ತಂಡವೊಂದನ್ನು ನೇಮಕ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಎಷ್ಟೋ ಕಾರ್ಯಕರ್ತರಿಗೆ ವಕೀಲರ ಫೀಜು ಕೊಡುವ ಶಕ್ತಿಯೂ ಇರುವುದಿಲ್ಲ. ಕೇಸು ನಡೆಸದಿದ್ದರೆ ಜೈಲು ಪಾಲಾಗಬೇಕು. ಇಂಥ ಪರಿಸ್ಥಿತಿಯಲ್ಲಿ ನಮ್ಮ ಕಾರ್ಯಕರ್ತರ ನೆರವಿಗೆ ಇನ್ಯಾರು ನಿಲ್ಲಲು ಸಾಧ್ಯ, ನಾವೇ ನಿಲ್ಲಬೇಕು. ತಿಂಗಳಿಗೆ ಲಕ್ಷಾಂತರ ರುಪಾಯಿಗಳನ್ನು ಹೊಂದಿಸುವುದಾದರೂ ಹೇಗೆ?

ನಮ್ಮ ಪ್ರಭುತ್ವದ ತಂತ್ರಗಳೇ ಹಾಗೆ. ಚಳವಳಿಗಾರರು ಕೋರ್ಟು, ಜೈಲು ಅಲೆಯುವಂತೆ ಮಾಡಿದರೆ ಅವರಿಂದ ತೊಂದರೆ ಕಡಿಮೆ. ಅವರ ಚಳವಳಿಗಳೂ ಸತ್ತು ಹೋಗುತ್ತವೆ. ಹೀಗಾಗಿ ಅವರ ಮೇಲೆ ಸುಳ್ಳು ಮೊಕದ್ದಮೆಯಾದರೂ ಸರಿ, ಮೊಕದ್ದಮೆಗಳನ್ನು ಹಾಕುತ್ತಲೇ ಇರಿ ಎಂಬ ಸೂಚನೆಗಳು ಪೊಲೀಸರಿಗೆ ಇರುತ್ತವೆ. ಹೀಗಾಗಿ ನಾಡಿನ ಎಲ್ಲ ಪೊಲೀಸ್ ಠಾಣೆಗಳಲ್ಲೂ ಚಳವಳಿಗಾರರ ಮೇಲೆ ಮೇಲಿಂದ ಮೇಲೆ ಮೊಕದ್ದಮೆಗಳು ದಾಖಲಾಗುತ್ತವೆ.

ಇವೆಲ್ಲ ಸರಿಯಲ್ಲವೆಂಬುದು ನಮ್ಮ ರಾಜಕಾರಣಿಗಳಿಗೂ ಚೆನ್ನಾಗಿ ಗೊತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸುವ ಎಷ್ಟೋ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜನಪ್ರತಿನಿಧಿಗಳು, ರಾಜಕಾರಣಿಗಳು ರಕ್ಷಣಾ ವೇದಿಕೆ ಕಾರ್ಯಕರ್ತರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಹೇಳುತ್ತಿರುತ್ತಾರೆ. ಬೇರೆ ಯಾರೂ ಬೇಡ, ನಮ್ಮ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಿಂದೆ ವಿರೋಧಪಕ್ಷದ ನಾಯಕರಾಗಿದ್ದ ಕರವೇ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತ, ಇವರ ಮೇಲಿರುವ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಿರಿ ಎಂದು ಆಗಿನ ಗೃಹ ಸಚಿವ ಆರ್.ಅಶೋಕ್ ಅವರಿಗೆ ಹೇಳಿದ್ದರು. ಇವತ್ತು ಸಿದ್ಧರಾಮಯ್ಯ ಅವರ ಸರ್ಕಾರವೇ ಅಸ್ತಿತ್ವದಲ್ಲಿದೆ, ಆದರೂ ನಮ್ಮ ಮೇಲಿನ ಮೊಕದ್ದಮೆಗಳು ಹಾಗೆಯೇ ಇವೆ. ಈಗ ವಿರೋಧಪಕ್ಷದಲ್ಲಿರುವವರು ನಮ್ಮ ಪರವಾಗಿ ಮಾತನಾಡುತ್ತಾರೆ, ಮುಂದೆ ಅಧಿಕಾರಕ್ಕೆ ಬಂದಾಗ ಅವರೂ ಸಹ ಸುಮ್ಮನಾಗುತ್ತಾರೆ. ತಮ್ಮ ಕಾರ್ಯಕರ್ತರು ಮತ್ತು ಪರಿವಾರದವರ ಮೇಲಿನ ಕೇಸುಗಳನ್ನು ಮಾತ್ರ ಹಿಂದಕ್ಕೆ ಪಡೆಯುತ್ತಾರೆ. ಇದೇ ಪರಿಪಾಠ ಮುಂದುವರೆಯುತ್ತ ಸಾಗುತ್ತದೆ.

ನಾವು ಯಾವುದೇ ತರಹದ ಕ್ರಿಮಿನಲ್ ಚಟುವಟಿಕೆ ನಡೆಸಿದ್ದರೆ ಸರ್ಕಾರ ಒಂದಲ್ಲ ಹತ್ತು ಮೊಕದ್ದಮೆಗಳನ್ನು ಹೂಡಲಿ, ಜೈಲಿಗೆ ಕಳುಹಿಸಲಿ. ಆದರೆ ಚಳವಳಿ ಮಾಡಿದರೆಂಬ ಕಾರಣಕ್ಕೆ ಹತ್ತಾರು ಮೊಕದ್ದಮೆಗಳನ್ನು ಹಾಕಿ ಹಿಂಸೆ ನೀಡುತ್ತ ಹೋದರೆ ರಾಜ್ಯದಲ್ಲಿ ಚಳವಳಿಗಳು ಸತ್ತೇ ಹೋಗುತ್ತವೆ. ಪ್ರತಿರೋಧದ ಧ್ವನಿಗಳು, ಭಿನ್ನ ಧ್ವನಿಗಳು ಅಡಗಿಹೋದರೆ ಪ್ರಭುತ್ವಕ್ಕೆ ಬಹಳ ಸಂತೋಷ. ಆದರೆ ಅದು ಪರಿಪೂರ್ಣವಾದ ಪ್ರಜಾಪ್ರಭುತ್ವವಾಗಲಾರದು. ಪ್ರಜಾಪ್ರಭುತ್ವದಲ್ಲಿ ಭಿನ್ನಧ್ವನಿಗಳಿಗೆ ಎಂದೆಂದಿಗೂ ಅವಕಾಶವಿರಲೇಬೇಕು. ಅದರಲ್ಲೂ ನಾಡು ನುಡಿಗಾಗಿ ನಡೆಸುವ ಚಳವಳಿಗಳನ್ನು ಸರ್ಕಾರವೇ ಬಲಿಹಾಕಿದರೆ ಮುಂದೆ ಈ ನಾಡು ನಮ್ಮ ಕೈ ತಪ್ಪಿ ಹೋಗುತ್ತದೆ. ಆ ಎಚ್ಚರವೂ ನಮ್ಮನ್ನು ಆಳುವ ಸರ್ಕಾರಕ್ಕೆ ಇರಬೇಕಾಗುತ್ತದೆ.

ಹಿಂದೆಯೂ ನಾನು ಈ ವಿಷಯವನ್ನು ಹಲವು ಸಂದರ್ಭಗಳಲ್ಲಿ ಹೇಳಿದ್ದುಂಟು. ನ್ಯಾಯಾಧೀಶರಿಗೆ ಇರುವ ಮಾನವೀಯತೆ, ಕನ್ನಡ ಕಾಳಜಿ ನಮ್ಮನಾಳುವ ನಾಯಕರಿಗೆ ಇಲ್ಲ. ಕೆಲ ನ್ಯಾಯಾಧೀಶರು ಕೇಳ್ತಾರೆ: ‘ಏನ್ರೀ ನಾರಾಯಣಗೌಡ್ರೇ, ದಿನಾ ಬಂದು ಕೋರ್ಟ್‌ನಲ್ಲಿ ನಿಂತುಕೊಳ್ಳುತ್ತೀರಲ್ಲ. ನಿಮಗೆ ಅಂತ ಒಂದು ಬದುಕಿಲ್ಲವೇ. ಯಾಕಿಷ್ಟು ಕೇಸ್ ಹಾಕಿದ್ದಾರೆ?
ಒಬ್ಬ ನ್ಯಾಯಾಧೀಶರ ಟೇಬಲ್ ಮೇಲೆ ೨೦-೩೦ ಕೇಸ್ ಇರುತ್ತೆ. ಒಂದು ಕೋರ್ಟಿನಿಂದ ಇನ್ನೊಂದು ಕೋರ್ಟಿಗೆ ಓಡಾಡಬೇಕು. ಒಂದು ಕೋರ್ಟಿನಲ್ಲಿ ಕೇಸ್ ನಡೆಯುವಾಗ ಇನ್ನೊಂದು ಕೋರ್ಟಿಗೆ ಹೋಗದೆ ಇದ್ದರೆ ಬೇಲ್ ಕ್ಯಾನ್ಸಲ್ ಆಗಿರುತ್ತೆ. ಅಥವಾ ವಾರೆಂಟ್ ಆಗಿರುತ್ತೆ. ಪೊಲೀಸ್‌ನವರು ಮನೆಗೆ ಹುಡುಕಿಕೊಂಡು ಬರ್‍ತಾರೆ.

ನನ್ನ ಮೊಕದ್ದಮೆ ಸಂಬಂಧ ವಿಚಾರಣೆ ನಡೆಯುವಾಗ ಒಂದು ದಿನ ಒಬ್ಬ ಗೌರವಾನ್ವಿತ ನ್ಯಾಯಾಧೀಶರು ಇನ್ಸ್‌ಪೆಕ್ಟರ್ ಒಬ್ಬರನ್ನು ಗದರಿದ್ದರು: ದಿನಾ ಬೆಳಗಾದರೆ ಇವರು ಕೋರ್ಟಿಗೆ ಬರ್‍ತಾರೆ. ತಲೆ ಮರೆಸಿಕೊಂಡು ಹೋಗಿದ್ದಾರೆ ಅಂತ ಸುಳ್ಳು ಹೇಳ್ತಿರಲ್ರಿ. ನಿಮ್ಮಂಥ ಇನ್ಸ್‌ಪೆಕ್ಟರ್‌ಗಳನ್ನು ಹುಚ್ಚಾಸ್ಪತ್ರೆಗೆ ಕಳುಹಿಸಬೇಕು.

ಕಡೆಯದಾಗಿ ಒಂದು ತಮಾಷೆ ವಿಷಯ. ಒಬ್ಬ ಇನ್ಸ್‌ಪೆಕ್ಟರ್ ನನ್ನ ಮೇಲೆ ಐಪಿಸಿ ೫೩೦ನೇ ಕಲಂ ಅನ್ವಯ ಕೇಸು ಹಾಕಿದ್ದ. ಐಪಿಸಿಯಲ್ಲಿ ೫೩೦ನೇಯ ಸೆಕ್ಷನ್ನೇ ಇಲ್ಲ! ಯಾಕೆ ಅವನು ಇಲ್ಲದ ಸೆಕ್ಷನ್ ಹಾಕಿದ್ದನೋ ಏನೋ? ಪಾಪ, ಅವನಿಗೆ  ಯಾವ ಒತ್ತಡವಿತ್ತೋ ಏನೋ? ನ್ಯಾಯಾಧೀಶರು ಇದ್ಯಾವ ಸೆಕ್ಷನ್ ಹಾಕಿದ್ದೀರ್ರೀ ಎಂದು ದಬಾಯಿಸಿದಾಗ ಇನ್ಸ್ ಪೆಕ್ಟರ್ ಏನೋ ತಪ್ಪಾಗಿದೆ ಸ್ವಾಮಿ ಎಂದಿದ್ದರು.

ಚಳವಳಿಗಾರರನ್ನು ನಮ್ಮ ಸರ್ಕಾರಗಳು ಹೇಗೆ ನಡೆಸಿಕೊಳ್ಳುತ್ತವೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾಗಿಲ್ಲವೇನೋ? ಇಷ್ಟಾದರೂ ಕನ್ನಡ ನುಡಿ, ನಾಡು, ಪರಂಪರೆ, ಕನ್ನಡಿಗರ ಉದ್ಯೋಗಕ್ಕೆ ಧಕ್ಕೆಯಾದರೆ ನಾವು ಸುಮ್ಮನೆ ಕೂರುವವರಂತೂ ಅಲ್ಲ. ಸರ್ಕಾರ ಏನೇ ದರ್ಪ, ದಬ್ಬಾಳಿಕೆ ಪ್ರದರ್ಶಿಸಿದರೂ ನಾವು ಎದೆಗುಂದದೆ ಹೋರಾಡುತ್ತೇವೆ. ವಿಶೇಷವಾಗಿ ಕನ್ನಡ ಚಳವಳಿಯ ಕತ್ತುಹಿಚುಕಲು ನಾವಂತೂ ಬಿಡುವುದಿಲ್ಲ, ಕೊನೆ ಉಸಿರಿನವರೆಗೆ.

-ಟಿ.ಎ.ನಾರಾಯಣಗೌಡ,
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ಬೇಕಾಗಿದೆ



ಕನ್ನಡ ರಾಜ್ಯೋತ್ಸವ ಮಾಸ ಮುಗಿಯುತ್ತಿದೆ. ಈ ಸಂದರ್ಭದಲ್ಲಿ ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಸಾಕಷ್ಟಿವೆ. ನಮಗೆಲ್ಲ ಗೊತ್ತಿದೆ, ಕನ್ನಡ ಎನ್ನುವುದೇ ಒಂದು ದೇಶವಾಗಿತ್ತು. ಹತ್ತಾರು ರಾಜವಂಶಗಳು ಈ ಕನ್ನಡ ನಾಡನ್ನು ಕಟ್ಟಿ ಬೆಳೆಸಿದ್ದವು. ಸ್ವಾತಂತ್ರ್ಯ ಸಂಗ್ರಾಮದ ನಂತರ ಕನ್ನಡ ನಾಡು ಭಾರತ ಒಕ್ಕೂಟದಲ್ಲಿ ವಿಲೀನವಾಯಿತು. ವಿಲೀನವಾಗುವುದು ಎಂದರೆ ತನ್ನತನವನ್ನು ಕಳೆದುಕೊಂಡು ಪರಾಧೀನವಾಗುವುದಲ್ಲ. ತನ್ನ ಅಸ್ಮಿತೆಯನ್ನು ಉಳಿಸಿಕೊಂಡೇ ಈ ಒಕ್ಕೂಟದ ಹೆಮ್ಮೆಯ ಭಾಗವಾಗುವುದು.

ಆದರೆ ಹುಸಿ ರಾಷ್ಟ್ರೀಯತೆಯ ಹೆಸರಿನಲ್ಲಿ, ಏಕತ್ವವನ್ನು ಸಾರುವ ಹುನ್ನಾರದಲ್ಲಿ ಪ್ರಾದೇಶಿಕ ನುಡಿ, ಸಂಸ್ಕೃತಿಗಳ ಅಸ್ತಿತ್ವವನ್ನೇ ಕಡೆಗಣಿಸುತ್ತಿರುವ ಬೆಳವಣಿಗೆಗಳು ಸಾಲುಸಾಲಾಗಿ ನಡೆಯುತ್ತಿವೆ. ಬೇರೇನೂ ಬೇಡ, ಕನ್ನಡ ನಾಡು ತನ್ನದೇ ಒಂದು ಬಾವುಟವನ್ನು ಅಧಿಕೃತವಾಗಿ ಹೊಂದಲು ಸಾಧ್ಯವಾಗಿಲ್ಲ ಎಂಬುದೊಂದು ದೊಡ್ಡ ವ್ಯಂಗ್ಯ, ಒಕ್ಕೂಟ ವ್ಯವಸ್ಥೆಯ ಅಣಕ. ಕನ್ನಡ ನಾಡಿಗೊಂದು ಬಾವುಟವಿರಬೇಕು ಎಂದರೆ ರಾಷ್ಟ್ರಧ್ವಜವನ್ನು ತಿರಸ್ಕರಿಸಬೇಕು ಎಂದೇನೂ ಅಲ್ಲ, ಅಥವಾ ಆ ಧ್ವಜಕ್ಕಿಂತ ಎತ್ತರದ ಸ್ಥಾನಮಾನವನ್ನು ನಾಡಧ್ವಜಕ್ಕೆ ಕೊಡಬೇಕು ಎಂದೇನೂ ಅಲ್ಲ. ಭಾರತ ಒಕ್ಕೂಟದ ಎಲ್ಲ ರಾಜ್ಯಗಳು ತಮ್ಮದೇ ಆದ ನುಡಿ, ಸಂಸ್ಕೃತಿಗಳನ್ನು ಹೊಂದಿರುವಂತೆ ತಮ್ಮದೇ ಆದ ಗುರುತುಗಳನ್ನು, ಹೆಮ್ಮೆಯ ಪ್ರತೀಕಗಳನ್ನು ಹೊಂದಿರುವುದರಲ್ಲಿ ತಪ್ಪೇನಿದೆ? ಆದರೆ ಈ ಕೆಲಸ ಇದುವರೆಗೆ ಆಗಿಲ್ಲ ಎಂದರೆ ಬಹಳ ಮಂದಿಗೆ ಆಶ್ಚರ್ಯವಾಗಬಹುದು. ಹಾಗಿದ್ದರೆ ನಾವು ಬಳಸುತ್ತಿರುವ ಹರಿಶಿನ-ಕೆಂಪು ಬಣ್ಣದ ಧ್ವಜಕ್ಕೆ ಅಧಿಕೃತ ಮಾನ್ಯತೆಯಿಲ್ಲವೇ? ಯಾಕೆ ಅದನ್ನು ಕೊಡಲಾಗಿಲ್ಲ ಎಂಬ ಪ್ರಶ್ನೆಗಳೂ ಉದ್ಭವವಾಗಬಹುದು. ಇದಕ್ಕೆ ನಮ್ಮ ಧ್ವಜದ ಇತಿಹಾಸವನ್ನೊಮ್ಮೆ ಅವಲೋಕಿಸಿದರೆ ಒಂದಷ್ಟು ಉತ್ತರಗಳು ಸಿಗಬಹುದು.
ಕನ್ನಡಕ್ಕೆ, ಕರ್ನಾಟಕಕ್ಕೆ ಒಂದು ಧ್ವಜವನ್ನು ರೂಪಿಸಿಕೊಟ್ಟಿದ್ದು ಕರ್ನಾಟಕ ಸರ್ಕಾರವಲ್ಲ. ಸರ್ಕಾರ ನೇಮಿಸಿದ ಅಧಿಕಾರಿಗಳ ಸಮಿತಿಯೂ ಅಲ್ಲ, ಸರ್ಕಾರದ ಯಾವುದೇ ಇಲಾಖೆಯೂ ಅಲ್ಲ. ಕರ್ನಾಟಕ ಸರ್ಕಾರ ಇವತ್ತಿನವರೆಗೂ ನಮ್ಮೆ ಹೆಮ್ಮೆಯ ಹಳದಿ-ಕೆಂಪು ಬಾವುಟವನ್ನು ಅಧಿಕೃತ ನಾಡಧ್ವಜ ಎಂದು ಒಪ್ಪಿಕೊಂಡೇ ಇಲ್ಲ, ಅಧಿಕೃತ ಮಾನ್ಯತೆಯನ್ನೂ ನೀಡಿಲ್ಲ. ಕನ್ನಡ ಧ್ವಜ ನೀಡಿದ್ದು ಕನ್ನಡ ಚಳವಳಿಗಾರರು.

೧೯೬೬ರವರೆಗೆ ಕನ್ನಡಕ್ಕೊಂದು ನಿರ್ದಿಷ್ಟ ಬಾವುಟವೇ ಇರಲಿಲ್ಲ. ಕೆಲವರು ಭುವನೇಶ್ವರಿ ಚಿತ್ರವಿದ್ದ ಕೇಸರಿ ಬಣ್ಣದ ಬಾವುಟವನ್ನು ಬಳಸುತ್ತಿದ್ದರಾದರೂ ಅದನ್ನು ಒಪ್ಪಿಕೊಳ್ಳಲು ಹೆಚ್ಚುಮಂದಿ ತಯಾರಿರಲಿಲ್ಲ. ಕೇಸರಿ ಬಣ್ಣ ನಿರ್ದಿಷ್ಟ ಧಾರ್ಮಿಕತೆಯನ್ನು ಸಂಕೇತಿಸುವುದರಿಂದ ಅದು ಬೇಡ ಎಂಬುದು ಬಹಳಷ್ಟು ಮಂದಿಯ ಅಭಿಪ್ರಾಯವಾಗಿತ್ತು.
ಅರವತ್ತರ ದಶಕ ಕನ್ನಡ ಚಳವಳಿ ಮೊಳಕೆಯೊಡೆದ ಕಾಲಘಟ್ಟ. ಆಗ ಬೆಂಗಳೂರಿನಲ್ಲಿ ವಲಸಿಗ ತಮಿಳರ ಆಟಾಟೋಪಗಳು ಮಿತಿಮೀರಿದ್ದವು. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಅಬ್ಬರ ನಡೆಯುತ್ತಿತ್ತು. ಭಾಷಾ ದುರಭಿಮಾನಿ ತಮಿಳರು ಡಿಎಂಕೆ ಬಾವುಟವನ್ನೇ (ಕಪ್ಪು-ಕೆಂಪು ಬಣ್ಣ) ತಮಿಳು ಬಾವುಟದಂತೆ ಬಳಸುತ್ತಿದ್ದರು. ಕನ್ನಡಿಗರನ್ನು ಕೆಣಕಲೆಂದೇ ಎತ್ತರದ ಜಾಗದಲ್ಲಿ ದೊಡ್ಡ ದೊಡ್ಡ ಧ್ವಜಸ್ಥಂಭಗಳನ್ನು ನಿರ್ಮಿಸಿ ಡಿಎಂಕೆ ಬಾವುಟ ಏರಿಸುತ್ತಿದ್ದರು. ಬೆಂಗಳೂರು ಮಹಾನಗರಪಾಲಿಕೆಗೆ ಡಿಎಂಕೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ಆಯ್ಕೆಯಾಗಿ ಬರುತ್ತಿದ್ದರು. ಕನ್ನಡಿಗರ ಮೇಲೆ ಪ್ರತಿನಿತ್ಯ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿದ್ದವು.

ಇಂಥ ಸಂಕಷ್ಟದ ಕಾಲದಲ್ಲಿ ಮ.ರಾಮಮೂರ್ತಿ ವೀರಸೇನಾನಿಯಾಗಿ ಕನ್ನಡ ಚಳವಳಿಯ ನೇತೃತ್ವ ವಹಿಸಿಕೊಂಡಿದ್ದರು. ಹಲವೆಡೆ ಡಿಎಂಕೆ ಧ್ವಜಗಳನ್ನು ರಾಮಮೂರ್ತಿಯವರೇ ಮುಂದೆ ನಿಂತು ತೆರವುಗೊಳಿಸಿದರು. ಕನ್ನಡಕ್ಕೂ ಒಂದು ಧ್ವಜ ಬೇಕೇಬೇಕು ಎಂಬ ತೀರ್ಮಾನಕ್ಕೆ ರಾಮಮೂರ್ತಿ ಬಂದಿದ್ದರು. ಆಗ ಕ್ರಿಯಾಶೀಲರಾಗಿದ್ದ ಎಲ್ಲ ಕನ್ನಡ ಚಳವಳಿಗಾರರಿಗೂ ಕನ್ನಡ ಧ್ವಜದ ಅನಿವಾರ್ಯತೆ ಅರ್ಥವಾಗಿತ್ತು. ೧೯೬೬ರಲ್ಲಿ ಮೈಸೂರಿನ ಚೇಂಬರ್ ಆಫ್ ಕಾಮರ್‍ಸ್‌ನಲ್ಲಿ ಅಖಿಲ ಕರ್ನಾಟಕ ಕನ್ನಡಿಗರ ಬೃಹತ್ ಸಮಾವೇಶ ಮ.ರಾಮಮೂರ್ತಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕನ್ನಡ ಬಾವುಟ ರಚನೆಯೇ ಸಮಾವೇಶದ ಪ್ರಮುಖ ಉದ್ದೇಶವಾಗಿತ್ತು.

ತೆಳು ಹಳದಿ ಬಣ್ಣದ ಎರಡು ಮೂಲೆ ಇರುವ ಬಾವುಟ ರಚಿಸಲು ಸಮಾವೇಶ ತೀರ್ಮಾನಿಸಿತು. ಬಾವುಟದ ಮಧ್ಯಭಾಗದಲ್ಲಿ ಅಖಂಡ ಕರ್ನಾಟಕದ ಭೂಪಟವನ್ನು ಕೆಂಪುಬಣ್ಣದಲ್ಲಿ ಚಿತ್ರಿಸಲು ಮತ್ತು ಮಧ್ಯದಲ್ಲೆ ಬೆಳೆಯುತ್ತಿರುವ ಏಳು ಪೈರು (ತೆನೆಯ) ಚಿತ್ರ ಇರಿಸಲು ನಿರ್ಧರಿಸಲಾಯಿತು. ಹಳದಿ ಬಣ್ಣ ಶಾಂತಿಯ ಸಂಕೇತವಾಗಿ ಬಳಕೆಯಾಗಿತ್ತು. ಮಾತ್ರವಲ್ಲದೆ ಕರ್ನಾಟಕವು ಚಿನ್ನದ ನಾಡು ಎಂಬುದನ್ನು ಹೇಳುತ್ತಿತ್ತು. ಕೆಂಪು ಬಣ್ಣವು ಕರ್ನಾಟಕದಿಂದ ಹೊರಗೆ ಉಳಿದ ಕನ್ನಡ ಪ್ರದೇಶಗಳನ್ನು ಮತ್ತೆ ರಾಜ್ಯಕ್ಕೆ ಸೇರಿಸಿಕೊಳ್ಳುವ ಸಲುವಾಗಿ ನಡೆಸಬೇಕಾದ ಹೋರಾಟದ ಸಂಕೇತವಾಗಿತ್ತು. ಹಸಿರು ತೆನೆ ಸಮೃದ್ಧಿಯ ಸಂಕೇತವಾಗಿತ್ತು. ಏಳು ಸಾಮ್ರಾಜ್ಯಗಳು ಕನ್ನಡನಾಡನ್ನು ಆಳಿದ್ದರಿಂದ ಏಳು ತೆನೆಗಳನ್ನು ಇರಿಸಲಾಗಿತ್ತು. ಕನ್ನಡ ಪಕ್ಷ ಅಧಿಕಾರಕ್ಕೆ ಬಂದಮೇಲೆ ಎಂಟನೇ ತೆನೆಯನ್ನು ಇರಿಸುವ ನಿರ್ಧಾರವನ್ನೂ ಕೈಗೊಳ್ಳಲಾಗಿತ್ತು.
ಈ ಬಾವುಟ ಅಸ್ತಿತ್ವಕ್ಕೆ ಬಂದ ನಂತರ ನಾನಾರೀತಿಯ ಪ್ರತಿಕ್ರಿಯೆಗಳು ಬಂದವು. ಪ್ರಾಯೋಗಿಕವಾಗಿ ಈ ಬಾವುಟ ಬಳಕೆ ಕ್ಲಿಷ್ಟಕರವಾಗಿತ್ತು. ಸರಳವಾಗಿಲ್ಲದ ಬಾವುಟ ಜನರ ಬಳಕೆಗೆ ಬರುವುದಾದರೂ ಹೇಗೆ ಎಂಬುದು ಬಹಳಷ್ಟು ಮಂದಿಯ ಪ್ರಶ್ನೆಯಾಗಿತ್ತು. ಮ.ರಾಮಮೂರ್ತಿಯವರಿಗೂ ಇದು ಸಾರ್ವತ್ರಿಕ ಬಳಕೆಗೆ ಸರಿಹೊಂದದ ಬಾವುಟ ಎಂದು ಅನ್ನಿಸಿತ್ತು. ಈ ಕಾರಣದಿಂದ ಮತ್ತೊಂದು ಬಾವುಟವನ್ನು ರೂಪಿಸುವುದು ಅನಿವಾರ್ಯವಾಗಿತ್ತು. ಹೀಗಾಗಿ ಮ.ರಾಮಮೂರ್ತಿ ಮತ್ತೊಮ್ಮೆ ಎಲ್ಲ ಕನ್ನಡಚಳವಳಿಗಾರರ ಸಭೆ ಕರೆದರು.

ಅರಳಿಪೇಟೆಯಲ್ಲಿ ಮ.ರಾಮಮೂರ್ತಿಯವರು ಕರೆದ ಆ ಐತಿಹಾಸಿಕ ಸಭೆ ನಡೆದಿತ್ತು. ಸಭೆಯಲ್ಲಿ ಹಿರಿಯ ಕನ್ನಡ ಚಳವಳಿಗಾರರಾದ ಬೆ.ನಿ.ಈಶ್ವರಪ್ಪ, ಕ.ಮು.ಸಂಪಂಗಿ ರಾಮಯ್ಯ, ಮು.ಗೋವಿಂದರಾಜು ಮೊದಲಾದವರು ಭಾಗವಹಿಸಿದ್ದರು. ಸರಳವಾಗಿ ಹಳದಿ ಕೆಂಪು ಬಣ್ಣದ ನಾಲ್ಕುಮೂಲೆಗಳ ಬಾವುಟದ ಪ್ರಸ್ತಾಪವನ್ನು ರಾಮಮೂರ್ತಿಯವರು ಸಭೆಯ ಮುಂದಿಟ್ಟರು. ಸಭೆ ಸರ್ವಾನುಮತದಿಂದ ಈ ಪ್ರಸ್ತಾಪವನ್ನು ಅಂಗೀಕರಿಸಿತು. ಕಡೆಗೂ ಕನ್ನಡ ಬಾವುಟ ಮೈದಳೆದಿತ್ತು.
ಆದರೆ ಈ ಬಾವುಟವನ್ನೂ ಹಲವರು ಟೀಕಿಸಿದರು. ಹೊಸ ಬಾವುಟದ ವಿರುದ್ಧ ಕರಪತ್ರ ಚಳವಳಿಯನ್ನೂ ನಡೆಸಿದರು. ಆದರೆ ಕನ್ನಡದ ಜನತೆ ಮನಸಾರೆ ಈ ಬಾವುಟವನ್ನು ಒಪ್ಪಿಕೊಂಡಿದ್ದರು. ಹೀಗಾಗಿ ಮುಂದೆ ಗೊಂದಲಗಳಿಲ್ಲದಂತೆ ಈ ಬಾವುಟವೇ ಚಲಾವಣೆಗೆ ಬಂದಿತು.

ಹಾಗಿದ್ದರೆ ಕನ್ನಡ ಬಾವುಟ ಕರ್ನಾಟಕದ ಅಧಿಕೃತ ಬಾವುಟವೇ? ಅದಕ್ಕೆ ಸಾಂವಿಧಾನಿಕ ಮಾನ್ಯತೆ ಇದೆಯೇ? ಅದಕ್ಕೊಂದು ಧ್ವಜಸಂಹಿತೆಯೊಂದನ್ನು ರೂಪಿಸಲಾಗಿದೆಯೇ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡು ಹೊರಟರೆ ನಿರಾಶೆ ಮೂಡುತ್ತದೆ. ಇನ್ನೂ ಒಂದು ಖೇದವಾಗುವ ಸಂಗತಿಯೆಂದರೆ ಕನ್ನಡ ರಾಜ್ಯೋತ್ಸವವು ಹಿಂದೆ ಸರ್ಕಾರದ ಆಚರಣೆಯೂ ಆಗಿರಲಿಲ್ಲ. ಕರ್ನಾಟಕ ಏಕೀಕರಣಗೊಂಡಿದ್ದರೂ ಏಕೀಕರಣಗೊಂಡ ದಿನವನ್ನು ರಾಜ್ಯೋತ್ಸವವನ್ನಾಗಿ ಆಚರಿಸುವ ಪರಿಪಾಠವೇನೂ ಇರಲಿಲ್ಲ. ಇದನ್ನು ಗಮನಿಸಿದ ಮ.ರಾಮಮೂರ್ತಿಯವರೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ನಿರ್ಧಾರ ಮಾಡಿದರು. ೧೯೬೩ರ ನವೆಂಬರ್ ೧ರಂದು ರಾಜ್ಯೋತ್ಸವ ಆಚರಿಸಲು ನಿರ್ಧರಿಸಲಾಯಿತು. ಅಲ್ಲಿಯವರೆಗೆ ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವಗಳನ್ನಷ್ಟೇ ಸರ್ಕಾರ-ಸಂಘಸಂಸ್ಥೆಗಳು ಆಚರಿಸುತ್ತಿದ್ದವು. ಅದೇ ರೀತಿಯಲ್ಲಿ ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವ ಆಚರಿಸಲು ಮ.ರಾಮಮೂರ್ತಿ ಮತ್ತು ಕನ್ನಡ ಚಳವಳಿಗಾರರು ಅವತ್ತಿನಿಂದ ಇಂದಿನವರೆಗೆ ಲಕ್ಷಾಂತರ ಸಂಘಟನೆಗಳು ನಾಡಿನಾದ್ಯಂತ ಮತ್ತು ಜಗತ್ತಿನಾದ್ಯಂತ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿವೆ.
ನಂತರದ ವರ್ಷಗಳಲ್ಲಿ ನವೆಂಬರ್ ಒಂದರಂದು ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು ರಾಮಮೂರ್ತಿ ಸರ್ಕಾರಕ್ಕೆ ಬೇಡಿಕೆಯಿಟ್ಟರು. ಅದಕ್ಕಾಗಿ ಹೋರಾಟ ನಡೆಸಿದರು. ಅವರು ಸಂಪಾದಿಸುತ್ತಿದ್ದ ಕನ್ನಡ ಯುವಜನ ಪತ್ರಿಕೆಯಲ್ಲಿ ನಿರಂತರವಾಗಿ ಈ ಬಗ್ಗೆ ಬರೆದರು. ಸರ್ಕಾರ ಈ ಮನವಿಗೆ ಸ್ಪಂದಿಸದೇ ಇದ್ದ ನೇರವಾಗಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರನ್ನು ಟೀಕಿಸುವುದಕ್ಕೂ ಮ.ರಾಮಮೂರ್ತಿಯವರು ಹಿಂದೆ ಬೀಳಲಿಲ್ಲ. “ಕರ್ನಾಟಕದ ಶಿಲ್ಪಿಗಳೆಂದು ಕರೆಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರು ಕನ್ನಡದ ವಿಷಯದಲ್ಲಿ ಎಷ್ಟು ಅಭಿಮಾನಶೂನ್ಯರಾಗಿದ್ದರೆಂಬುದಕ್ಕೆ ರಾಜ್ಯೋತ್ಸವ ದಿನದಂದು ರಜಾ ಘೋಷಿಸದಿರುವುದೇ ಒಂದು ನಿದರ್ಶನವಾಗಿದೆ” ಎಂದು ಬಿರುನುಡಿಗಳನ್ನಾಡಿದ್ದರು.

ಕಡೆಗೂ ಸರ್ಕಾರ ಮಣಿಯಿತು. ಕನ್ನಡ ರಾಜ್ಯೋತ್ಸವದಂದು ರಜೆ ಘೋಷಣೆಯಾಯಿತು. ಸರ್ಕಾರವೇ ರಾಜ್ಯೋತ್ಸವ ಆಚರಣೆ ಆರಂಭಿಸಿತು. ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ರಾಷ್ಟ್ರಧ್ವಜವನ್ನಲ್ಲದೆ ಇತರೆ ಧ್ವಜವನ್ನು ಹಾರಿಸುವಂತಿಲ್ಲವಾದ್ದರಿಂದ ರಾಜ್ಯೋತ್ಸವದಂದು ರಾಷ್ಟ್ರಧ್ವಜಾರೋಹಣ ನಡೆಸಿ ನಂತರ ನಾಡಧ್ವಜ ಹಾರಿಸುವ ಪರಂಪರೆಯೊಂದು ಜಾರಿಗೆ ಬಂದಿತು.
ಕನ್ನಡದ ಹಳದಿ-ಕೆಂಪು ಬಣ್ಣವನ್ನು ಕನ್ನಡದ ಜನತೆ ಮನಪೂರ್ವಕವಾಗಿ ಒಪ್ಪಿಕೊಂಡರು. ಮ.ರಾಮಮೂರ್ತಿಯವರು ಕೊಟ್ಟ ಬಾವುಟವನ್ನು ಕನ್ನಡದ ಜನತೆಗೆ ತಲುಪಿಸುವ ಕೆಲಸವನ್ನು ಕನ್ನಡ ಚಳವಳಿಗಾರರು ನಡೆಸುತ್ತಲೇ ಬಂದರು. ಕರ್ನಾಟಕ ರಕ್ಷಣಾ ವೇದಿಕೆ ಆರಂಭಗೊಂಡ ನಂತರ ನಾವೂ ಸಹ ಕನ್ನಡದ ಬಾವುಟವನ್ನು ನಾವು ಬೀದರಿನಿಂದ ಹಿಡಿದು ಚಾಮರಾಜನಗರದವರೆಗೆ ಕೊಂಡೊಯ್ದೆವು. ಹಳದಿ-ಕೆಂಪು ಬಣ್ಣದ ಕನ್ನಡದ ಅಂಗವಸ್ತ್ರವನ್ನು (ಶಾಲು) ಮೊದಲು ಬಳಕೆಗೆ ತಂದಿದ್ದು ಕರ್ನಾಟಕ ರಕ್ಷಣಾ ವೇದಿಕೆ. ನಮ್ಮ ಲಕ್ಷಾಂತರ ಕಾರ್ಯಕರ್ತರು ಹೋರಾಟದ ಸಂದರ್ಭದಲ್ಲಿ ಇದೇ ಶಾಲನ್ನು ಬಳಸುತ್ತಾರೆ. ಕನ್ನಡ ಹೋರಾಟಕ್ಕೆ ಕೆಚ್ಚು ತುಂಬಿದ್ದು ಈ ಕನ್ನಡದಬಣ್ಣದ ಶಾಲು. ಕನ್ನಡ ದ್ರೋಹಿಗಳ ಎದೆ ನಡುಗಿಸುತ್ತಿರುವುದೂ ಇದೇ ಶಾಲು.

ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ ಎಂಬುದು ನಮ್ಮ ಘೋಷವಾಕ್ಯಗಳಲ್ಲಿ ಒಂದು. ಹಳದಿ ಬಣ್ಣ ನಮ್ಮ ವಿಶಾಲಹೃದಯದ ಸ್ನೇಹದ ಸಂಕೇತ. ಶಾಂತಿಯ ಸಂಕೇತ. ಆದರೆ ಸ್ನೇಹ-ಶಾಂತಿ ನಮ್ಮ ಹೇಡಿತನವಾಗಬಾರದು. ಕನ್ನಡಿಗರ ಆತ್ಮಾಭಿಮಾನ ಕೆರಳಿಸಿದರೆ ನಾವು ಸಮರಕ್ಕೆ, ಸಂಘರ್ಷಕ್ಕೂ ಸಿದ್ಧ. ಹೋರಾಟದ ಸಂಕೇತವಾಗಿ ಕೆಂಪು ಬಣ್ಣವಿದೆ.
ಈ ಹಿಂದೆ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ ರಾಜ್ಯೋತ್ಸವ ದಿನದಂದು ಕನ್ನಡ ಬಾವುಟ ಹಾರಿಸುವಂತಿಲ್ಲ ಎಂದು ಸರ್ಕಾರ ಆದೇಶವೊಂದನ್ನು ಹೊರಡಿಸಿದ್ದಾಗ ಇಡೀ ರಾಜ್ಯಾದ್ಯಂತ ಚಳವಳಿ ಸಂಘಟಿಸಿ, ಆ ಆದೇಶವನ್ನು ಹಿಂದಕ್ಕೆ ಪಡೆಯುವವರೆಗೆ ಆಂದೋಲನ ನಡೆಸಲಾಯಿತು. ನಂತರ ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ರಾಜ್ಯೋತ್ಸವದಂದು ಕಡ್ಡಾಯವಾಗಿ ಕನ್ನಡ ಧ್ವಜ ಹಾರಿಸುವಂತೆ ಆದೇಶ ಹೊರಡಿಸಿದ್ದರು. ಆದರೆ ಕನ್ನಡ ದ್ರೋಹಿಗಳು ಹೈಕೋರ್ಟ್‌ನಲ್ಲಿ ಸಲ್ಲಿಸಿದ ದಾವೆಯೊಂದರಿಂದಾಗಿ ಮುಂದೆ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರ ಕನ್ನಡ ಧ್ವಜಕ್ಕೆ ಯಾವ ಅಧಿಕೃತ ಮಾನ್ಯತೆಯೂ ಇಲ್ಲ ಎಂದು ಹೇಳುವುದರ ಜತೆಗೆ ಸದಾನಂದಗೌಡರ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ವಾಪಾಸು ಪಡೆಯಿತು.

ನ್ಯಾಯಾಲಯಗಳು ಇಂಥ ವಿಷಯಗಳಲ್ಲಿ ಮೂಗುತೂರಿಸುವುದು ಮೊದಲಿನಿಂದಲೂ ನಡೆದುಕೊಂಡೇ ಬಂದಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ಪರಿಣಾಮಕಾರಿಯಾದ ಕಾನೂನು ರೂಪಿಸಿ ಕನ್ನಡ ಧ್ಚಜಕ್ಕೆ ಅಧಿಕೃತ ಮಾನ್ಯತೆ ನೀಡುವುದರ ಜತೆಗೆ, ಧ್ವಜ ಸಂಹಿತೆಯನ್ನು ಜಾರಿಗೆ ತರಬೇಕಿದೆ. ಆ ಕೆಲಸ ಬೇಗ ಆಗಲಿ ಎಂದು ಆಶಿಸುವೆ.

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ