ಇದೆಂಥ ಧರ್ಮ ಸಂಕಟದ ಸನ್ನಿವೇಶ ಎದುರಾಗಿದೆ ನೋಡಿ. ಇತ್ತ ನಾವು ಧಾರವಾಡ, ಗದಗ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಕುಡಿಯವ ನೀರಿಗಾಗಿ ಮಹದಾಯಿ ತಿರುವು ಯೋಜನೆ ಜಾರಿಯಾಗಬೇಕು ಎಂದು ಚಳವಳಿ ನಡೆಸುತ್ತಿದ್ದೇವೆ. ಅತ್ತ ಎತ್ತಿನಹೊಳೆ ಯೋಜನೆ ವಿಷಯದಲ್ಲಿ ಕರಾವಳಿ, ಬಯಲುಸೀಮೆ ಮತ್ತು ಪಶ್ಚಿಮಘಟ್ಟದ ಜನತೆ ಪರಸ್ಪರ ಬಡಿದಾಡುವ ಸನ್ನಿವೇಶ ನಿರ್ಮಾಣವಾಗಿದೆ. ಎತ್ತಿನಹೊಳೆ ತಿರುವು ಯೋಜನೆಯಲ್ಲ, ಅನುಷ್ಠಾನವಾಗಬೇಕಿರುವುದು ನೇತ್ರಾವತಿ ತಿರುವು ಯೋಜನೆ ಎಂದು ಬಯಲುಸೀಮೆಯ ಜನರು ಪಟ್ಟು ಹಿಡಿದಿದ್ದರೆ, ನೇತ್ರಾವತಿಗೆ ಕೈ ಇಟ್ಟರೆ ಪ್ರತ್ಯೇಕ ತುಳುನಾಡು ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರು ಬುಸುಗುಡುತ್ತಿದ್ದಾರೆ. ಅಷ್ಟೇನು ರಾಜಕೀಯ ಶಕ್ತಿ ಇಲ್ಲದ ಪಶ್ಚಿಮಘಟ್ಟ ಭಾಗಕ್ಕೆ ಸೇರುವ ಸಕಲೇಶಪುರದ ಜನತೆ ಇಡೀ ಯೋಜನೆಯಿಂದ ಈ ಭಾಗದ ಜನರಿಗೆ, ಕಾಡಿಗೆ, ಜೀವಸಂಕುಲಕ್ಕೆ ಆಗುವ ಸಮಸ್ಯೆಯ ಬಗ್ಗೆ ಮಾತನಾಡುತ್ತಿದ್ದಾರೆ.
ಬಯಲು ಸೀಮೆಯ ಜನರ ಕುಡಿಯುವ ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ತುಮಕೂರು ಮತ್ತು ಹಾಸನ ಜಿಲ್ಲೆಯ ಕೆಲವು ಭಾಗಗಳಲ್ಲಿ ಹನಿ ನೀರಿಗಾಗಿ ಜನರು ಪರದಾಡುವ ಸ್ಥಿತಿ ಇದೆ. ಕೆಲವು ಜಿಲ್ಲೆಗಳಲ್ಲಂತೂ ಸಾವಿರಾರು ಅಡಿ ಕೊರೆದರೂ ಭೂಮಿಯಲ್ಲಿ ನೀರು ಹುಟ್ಟುತ್ತಿಲ್ಲ. ಕೆರೆಗಳನ್ನು ಹಾಳುಗೆಡವಿದ್ದು, ಮಳೆ ನೀರು ಸಂಗ್ರಹಕ್ಕೆ ಸರಿಯಾದ ವ್ಯವಸ್ಥೆ ಮಾಡದೇ ಹೋಗಿದ್ದು ಇತ್ಯಾದಿ ಕಾರಣಗಳಿಂದಾಗಿ ಈ ಜಿಲ್ಲೆಗಳ ಜೀವಜಲವೇ ಬತ್ತಿಹೋಗಿದೆ. ಅಲ್ಪಸ್ವಲ್ಪ ನೀರು ಸಿಕ್ಕರೂ ಅದರಲ್ಲಿನ ಫ್ಲೋರೈಡ್ ಅಂಶದಿಂದಾಗಿ ಫ್ಲೋರೋಸಿಸ್ ಖಾಯಿಲೆ ಬಂದು, ಜನಸಾಮಾನ್ಯರ ಬದುಕು ನರಕವಾಗಿ ಹೋಗಿದೆ.
ಈ ಭಾಗದ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಹೋದಾಗಲೂ ಅಲ್ಲಿನ ಜನರ ಬವಣೆಗಳನ್ನು ನಾನು ಕೇಳಿದ್ದೇನೆ. ನಮಗೆ ನೀರೊಂದನ್ನು ಕೊಟ್ಟುಬಿಡಿ, ಹೇಗೋ ಬದುಕು ಸಾಗಿಸುತ್ತೇವೆ ಎಂದು ಅವರು ನೊಂದು ನುಡಿಯುತ್ತಾರೆ. ಚೆನ್ನಾಗಿ ಮಳೆಯಾದ ವರ್ಷಗಳಲ್ಲಿ ಕುಡಿಯಲು ಅಲ್ಪಸ್ವಲ್ಪ ನೀರಾದರೂ ಸಿಗುತ್ತದೆ. ಆದರೆ ದುರದೃಷ್ಟವೆಂದರೆ ಈ ಜಿಲ್ಲೆಗಳು ಸದಾ ಬರಪೀಡಿತವಾಗಿಯೇ ಇರುತ್ತವೆ. ಕಾಲಕಾಲಕ್ಕೆ ಮಳೆಯಾಗುತ್ತದೆ ಎಂದು ನಿರೀಕ್ಷೆಯೂ ಮಾಡದಂಥ ದುರ್ಬರ ಸಂದರ್ಭ ಇದಾಗಿದೆ.
ಇಂಥ ಸಂದರ್ಭದಲ್ಲಿ ಈ ಜಿಲ್ಲೆಗಳ ಜನರ ದಾಹ ಇಂಗಿಸಲು ಮುಂದಾಗಬೇಕಾದ್ದು ಯಾವುದೇ ನಾಗರಿಕ ಸಮಾಜದ ಕರ್ತವ್ಯ. ಈ ಭೂಮಂಡಲದಲ್ಲಿ ಅನಿವಾರ್ಯವಾಗಿ ನಾವು ಒಪ್ಪಿಕೊಂಡಿರುವ ಸೂತ್ರ ‘ಮೊದಲು ಮನುಷ್ಯ’ ಎಂಬುದೇ ಆಗಿದೆ. ಇದು ಎಷ್ಟು ಸರಿ, ಎಷ್ಟು ತಪ್ಪು ಎಂಬ ವಿಶ್ಲೇಷಣೆಗೆ ಕಾಲ ಇದಲ್ಲ. ಸಂಕಷ್ಟದಲ್ಲಿರುವ ಜನರ ಬೆನ್ನಿಗೆ ನಿಲ್ಲಬೇಕು ಎಂಬುದೇ ಮಾನವೀಯ ನಿಲುವು.
ಈ ಹಿನ್ನೆಲೆಯಲ್ಲಿ ಈ ಬರಪೀಡಿತ ಜಿಲ್ಲೆಗಳಿಗೆ ಪಶ್ಚಿಮಘಟ್ಟಗಳಲ್ಲಿ ಹರಿಯುವ ನದಿಗಳನ್ನು ಪೂರ್ವಾಭಿಮುಖವಾಗಿ ತಿರುಗಿಸುವ ಯೋಜನೆಗಳನ್ನು ಪ್ರಸ್ತಾಪಿಸಿದ್ದು ಪರಮಶಿವಯ್ಯನವರ ವರದಿ. ಪರಮಶಿವಯ್ಯನವರು ಕೇವಲ ಪಶ್ಚಿಮಘಟ್ಟದ ನದಿಗಳನ್ನು ತಿರುಗಿಸುವ ಪ್ರಸ್ತಾಪವನ್ನಷ್ಟೇ ಅಲ್ಲದೆ, ರಾಜ್ಯದ ವಿವಿಧ ಭಾಗಗಳಲ್ಲಿ ಮಾಡಬಹುದಾದ ನದಿ ತಿರುವು ಯೋಜನೆಗಳ ಕುರಿತು ಸಮಗ್ರ ವರದಿ ನೀಡಿದ್ದರು. ಈ ವರದಿ ಬಂದನಂತರ ಬಯಲುಸೀಮೆಯ ಜನರು, ಸಂಘಟನೆಗಳು ನೇತ್ರಾವತಿ ನದಿ ತಿರುವು ಯೋಜನೆ ಜಾರಿಗೆ ತಂದು ತಮ್ಮ ಜಿಲ್ಲೆಗಳಲ್ಲಿ ಕುಡಿಯುವ ನೀರು ಯೋಜನೆ ಮತ್ತು ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವಂತೆ ಆಗ್ರಹಿಸುತ್ತಲೇ ಇದ್ದಾರೆ.
ನೇತ್ರಾವತಿ ತಿರುವು ಯೋಜನೆಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ನಾಗರಿಕರು, ರಾಜಕಾರಣಿಗಳು, ಸಂಘಟನೆಗಳು ಮತ್ತು ಪರಿಸರವಾದಿಗಳಿಂದ ತೀವ್ರ ವಿರೋಧ ಬಂದ ಹಿನ್ನೆಲೆಯಲ್ಲಿ ನೇತ್ರಾವತಿ ತಿರುವ ಯೋಜನೆಯ ಒಂದು ಭಾಗವಾಗಿ ಎತ್ತಿನಹೊಳೆ ತಿರುವು ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಹಿಂದೆ ಇದ್ದ ಬಿಜೆಪಿ ಸರ್ಕಾರವೇ ಎತ್ತಿನಹೊಳೆ ಯೋಜನೆಗೆ ಹಸಿರು ನಿಶಾನೆ ತೋರಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಯೋಜನೆಯನ್ನು ಆರಂಭಗೊಳಿಸಿದೆ. ಇದಕ್ಕಾಗಿ ಸಾವಿರದ ಮುನ್ನೂರು ಕೋಟಿ ರುಪಾಯಿಗಳನ್ನು ಬಜೆಟ್ನಲ್ಲಿ ಎತ್ತಿಡಲಾಗಿದೆ.
ಎತ್ತಿನಹೊಳೆ ಯೋಜನೆಯ ಸಾಧಕಬಾಧಕಗಳ ಬಗ್ಗೆ ಚರ್ಚೆ ನಡೆಸುವ ಮುನ್ನ, ಈ ಎತ್ತಿನಹೊಳೆ ಯೋಜನೆ ಎಂದರೇನು ಎಂಬುದನ್ನು ಮೊದಲು ಗಮನಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನದಿಯಾದ ನೇತ್ರಾವತಿಗೆ ಇರುವ ಹಲವು ಉಪನದಿಗಳಲ್ಲಿ ಎತ್ತಿನಹೊಳೆಯೂ ಒಂದು. ಹಾಗೆ ನೋಡಿದರೆ ಎತ್ತಿನಹೊಳೆಯು ನೇರವಾಗಿ ನೇತ್ರಾವತಿಯನ್ನು ಸೇರುವುದಿಲ್ಲ. ಅದು ಕೆಂಪುಹೊಳೆಯನ್ನು ಸೇರಿ ನಂತರ ನೇತ್ರಾವತಿಯನ್ನು ಕೂಡುತ್ತದೆ. ಎತ್ತಿನಹೊಳೆಯನ್ನು ಸ್ಥಳೀಯರು ಹೊಳೆಯೆಂದು ಕರೆಯುವುದಿಲ್ಲ. ಅದು ಎತ್ತಿನಹಳ್ಳ. ಸಕಲೇಶಪುರ ತಾಲ್ಲೂಕಿನ ಮೂರ್ಕಣ್ಣು ಗುಡ್ಡದ ಬಳಿ ಸಣ್ಣ ತೊರೆಯಾಗಿ ಹುಟ್ಟುವ ಈ ಹಳ್ಳ ಆರು ಕಿ.ಮೀ ದೂರ ಹರಿದು ಕೆಂಪುಹೊಳೆಯನ್ನು ಸೇರುತ್ತದೆ.
ಸುಮಾರು ೧೦ ಚದರ ಕಿಮೀ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ನೀರನ್ನು ಹೆಗ್ಗದ್ದೆ ಮತ್ತು ಕಾಡುಮನೆಗಳಲ್ಲಿ ತಲಾ ಎರಡು ಚೆಕ್ ಡ್ಯಾಂ ಮತ್ತು ಕೆಂಕೇರಿಹಳ್ಳದಲ್ಲಿ ಒಂದು ಚೆಕ್ ಡ್ಯಾಂಗಳಲ್ಲಿ ಸಂಗ್ರಹಿಸಿ ಲಿಫ್ಟ್ ಮಾಡುವ ಮೊದಲ ಹಂತದ ಯೋಜನೆಯ ಕೆಲಸಗಳು ಈಗ ನಡೆಯುತ್ತಿವೆ. ಆದರೆ ವಿಶೇಷವೆಂದರೆ ಈ ಭಾಗದಲ್ಲಿ ಆಗುತ್ತಿರುವ ವಾರ್ಷಿಕ ಮಳೆಯ ಅಂದಾಜು ಹಾಕಿದರೆ ಇಲ್ಲಿ ಸಂಗ್ರಹವಾಗುವ ನೀರು ಏಳೆಂಟು ಟಿಎಂಸಿ ದಾಟುವುದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಎತ್ತಿನಹೊಳೆ ಮಾತ್ರವಲ್ಲದೆ ಕಾಡುಮನೆಹೊಳೆ, ಹೊಂಗಡಹಳ್ಳ, ಕೆಂಕೇರಿಹಳ್ಳಗಳ ನೀರನ್ನೂ ಸೇರಿಸಿದರೂ ಲಭ್ಯವಾಗುವ ನೀರಿನ ಪ್ರಮಾಣ ಒಂಭತ್ತು ಟಿಎಂಸಿ ದಾಟುವುದಿಲ್ಲ ಎಂಬ ಅಂದಾಜಿದೆ. ಆದರೆ ಯೋಜನೆಯ ಆರಂಭದಲ್ಲಿ ಮುಖ್ಯಮಂತ್ರಿಗಳು ಯೋಜನೆಯಿಂದ ೨೪ ಟಿಎಂಸಿ ನೀರು ಲಭ್ಯವಾಗುತ್ತದೆ ಎಂದು ಘೋಷಿಸಿದ್ದರು. ಸರ್ಕಾರದ ಡಿಪಿಆರ್ನಲ್ಲಿ ೨೨ ಟಿಎಂಸಿ ನೀರಿನ ಯೋಜನೆ ಎಂದೇ ಉಲ್ಲೇಖಿಸಲಾಗಿದೆ. ಹಾಗಿದ್ದರೆ ನಿಜವಾಗಿಯೂ ಸರ್ಕಾರದ ಉದ್ದೇಶವೇನು? ಯೋಜನಾವರದಿಯನ್ನು ಗಮನಿಸಿದರೆ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಮತ್ತು ಹಾಸನ ಜಿಲ್ಲೆಗಳಿಗೆ ನೀರು ಕೊಡಬೇಕಾಗುತ್ತದೆ. ಇದನ್ನು ಸರ್ಕಾರ ಮೇಲಿಂದ ಮೇಲೆ ಕುಡಿಯುವ ನೀರಿನ ಯೋಜನೆ ಎಂದು ಹೇಳುತ್ತಿದ್ದರೂ ದಾಖಲೆಗಳು ಹೇಳುತ್ತಿರುವುದೇ ಬೇರೆ, ಈ ನೀರನ್ನು ನೀರಾವರಿ ಮತ್ತು ಜಲವಿದ್ಯುತ್ ಯೋಜನೆಗಳಿಗೂ ಬಳಸಿಕೊಳ್ಳುವ ಲೆಕ್ಕಾಚಾರ ಸರ್ಕಾರಕ್ಕಿದೆ. ಡಿಪಿಆರ್ ಪ್ರಕಾರ ಕೋಲಾರ, ಚಿಕ್ಕಬಳ್ಳಾಪುರಕ್ಕೆ ೨೦೪೪ ಇಸವಿ ತನಕ ಸರಾಸರಿ ೫ ಟಿಎಂಸಿ ನೀರು ಮಾತ್ರ ಸರಬರಾಜು ಮಾಡಲಾಗುವುದು ಎಂದು ನಮೂದಿಸಲಾಗಿದ್ದರೆ, ರಾಮನಗರ ಜಿಲ್ಲೆಯೊಂದಕ್ಕೆ ೧೩ ಟಿಎಂಸಿಗೂ ಹೆಚ್ಚು ನೀರು ಹರಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ. ಅದರರ್ಥ ಇದು ಕುಡಿಯುವ ನೀರು ಯೋಜನೆ ಮಾತ್ರವಲ್ಲ ಎಂಬುದನ್ನು ಗಮನಿಸಬೇಕು.
ಇಂಥ ಸನ್ನಿವೇಶದಲ್ಲಿ ಸರ್ಕಾರ ಏನು ಮಾಡಬೇಕು? ಮೊಟ್ಟ ಮೊದಲು ಪಶ್ಚಿಮಘಟ್ಟ, ಕರಾವಳಿ ಮತ್ತು ಬಯಲು ಸೀಮೆಯ ಜನರಲ್ಲಿ ಉದ್ಭವಿಸಿರುವ ಅನುಮಾನಗಳನ್ನು ಬಗೆಹರಿಸುವ ಕೆಲಸವನ್ನು ಮಾಡಬೇಕಿದೆ. ಇದು ಕೇವಲ ಎತ್ತಿನಹೊಳೆ ಯೋಜನೆಯೋ ಅಥವಾ ನೇತ್ರಾವತಿ ತಿರುವು ಯೋಜನೆಯೋ ಎಂಬುದನ್ನು ಸ್ಪಷ್ಟಪಡಿಸಬೇಕು. ಇದು ಕುಡಿಯುವ ನೀರಿನ ಯೋಜನೆಯೋ ಅಥವಾ ಶಾಶ್ವತ ನೀರಾವರಿ ಯೋಜನೆಯೋ ಎಂಬ ಪ್ರಶ್ನೆಗೆ ಉತ್ತರ ಕೊಡಬೇಕಿದೆ. ಇಂಥ ಬೃಹತ್ ಯೋಜನೆಗಳ ವಿಷಯದಲ್ಲಿ ಸರ್ಕಾರ ಕದ್ದುಮುಚ್ಚಿ ಏನನ್ನೂ ಮಾಡದೆ, ಪಾರದರ್ಶಕವಾಗಿರಬೇಕು. ಈ ಯೋಜನೆಗೆ ಎಷ್ಟು ಅರಣ್ಯ ಭೂಮಿ, ಖಾಸಗಿ ಭೂಮಿಯನ್ನು ವಶಪಡಿಸಿಕೊಳ್ಳಲಾಗುವುದು ಎಂಬುದನ್ನು ಪಾರದರ್ಶಕವಾಗಿ ಜನತೆಯ ಮುಂದೆ ಬಿಡಿಸಿಡಬೇಕು. ಆಗುವ ಹಾನಿಯನ್ನು ತುಂಬಿಕೊಡುವ ನಿಟ್ಟಿನಲ್ಲಿ ಸರ್ಕಾರ ಏನೇನು ಕ್ರಮ ಕೈಗೊಳ್ಳಲಿದೆ ಮತ್ತು ನಷ್ಟಕ್ಕೀಡಾಗುವ ಜನರಿಗೆ ಯಾವ ರೀತಿಯ ಪರಿಹಾರೋಪಾಯಗಳನ್ನು ಕಲ್ಪಿಸಿಕೊಡಲಿದೆ ಎಂಬುದನ್ನು ಸ್ಪಷ್ಟಪಡಿಸಬೇಕು.
ಈಗೀಗ ಎಲ್ಲ ಅಭಿವೃದ್ಧಿ ಕಾರ್ಯಗಳಲ್ಲೂ ರಾಜಕೀಯ ನುಸುಳಿಬಿಡುತ್ತದೆ. ಎತ್ತಿನಹೊಳೆ ವಿಷಯದಲ್ಲಿ ರಾಜಕಾರಣಿಗಳ ಭಿನ್ನ ಭಿನ್ನ ವೇಷವನ್ನು ನಾವು ಗಮನಿಸುತ್ತಿದ್ದೇವೆ. ಒಂದೇ ಪಕ್ಷದ ಹಲವು ನಾಯಕರು ಯೋಜನೆ ವಿಷಯದಲ್ಲಿ ಭಿನ್ನಭಿನ್ನ ನಿಲುವುಗಳನ್ನು ತಾಳಿದ್ದಾರೆ. ಚಿಕ್ಕಬಳ್ಳಾಪುರವನ್ನು ತಮ್ಮ ಕ್ಷೇತ್ರವನ್ನಾಗಿ ಮಾಡಿಕೊಂಡಿರುವ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯಿಲಿಯವರಿಗೆ ಎತ್ತಿನಹೊಳೆ ಯೋಜನೆ ಸಾಕಾರವಾಗಬೇಕಿದೆ. ಇನ್ನೊಂದೆಡೆ ಅವರದೇ ಪಕ್ಷದ ಹಿರಿಯ ಮುಖಂಡ, ಮತ್ತೋರ್ವ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಬಿಜೆಪಿಯಲ್ಲೂ ಹಾಗೆ, ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗಲೇ ಎತ್ತಿನಹೊಳೆ ಯೋಜನೆಗೆ ಅನುಮತಿ ದೊರೆತಿತ್ತು. ಈಗಲೂ ಅವರು ಯೋಜನೆ ಪರವಾಗಿದ್ದಾರೆ. ಆದರೆ ದಕ್ಷಿಣ ಕನ್ನಡದ ಸಂಸದರು ಸೇರಿದಂತೆ ಆ ಜಿಲ್ಲೆಯ ಬಿಜೆಪಿ ಮುಖಂಡರು ಯೋಜನೆಯನ್ನು ವಿರೋಧಿಸುತ್ತಿದ್ದಾರೆ.
ಇಂಥ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಎಲ್ಲರನ್ನೂ ಒಂದು ವೇದಿಕೆಗೆ ತಂದು ಗಂಭೀರ ಚರ್ಚೆಗೆ ಅನುವು ಮಾಡಿಕೊಡಬೇಕಿದೆ. ಹೇಳಿ ಕೇಳಿ ಇದು ಹದಿಮೂರು ಸಾವಿರ ಕೋಟಿ ರುಪಾಯಿಗಳ ಯೋಜನೆ. ಇತರ ಯೋಜನೆಗಳ ಇತಿಹಾಸವನ್ನು ಗಮನಿಸಿದರೆ ಈ ಯೋಜನೆ ಪೂರ್ಣವಾಗುವ ಹೊತ್ತಿಗೆ ಇಪ್ಪತ್ತು ಮೂವತ್ತು ಸಾವಿರ ಕೋಟಿ ರುಪಾಯಿಗಳ ಗಡಿ ದಾಟುವ ಎಲ್ಲ ಸಾಧ್ಯತೆಗಳೂ ಇವೆ. ಇಂಥ ಬೃಹತ್ ಯೋಜನೆ ಜಾರಿಯಾಗುವ ಪ್ರದೇಶದಲ್ಲೇ ಜನರ ಜತೆ ಸರ್ಕಾರ ಸಂವಹನ ನಡೆಸದಿದ್ದರೆ ಹೇಗೆ? ಯೋಜನೆಯಿಂದ ಭೂಮಿ ಕಳೆದುಕೊಳ್ಳುವ, ನಷ್ಟ ಅನುಭವಿಸುವ, ಸ್ಥಳಾಂತರಗೊಳ್ಳುವ, ಬೇರೆ ಬೇರೆ ರೀತಿಯ ಪ್ರತ್ಯಕ್ಷ, ಪರೋಕ್ಷ ಸಮಸ್ಯೆಗಳನ್ನು ಎದುರಿಸುವ ಜನರ ಜತೆ ಸಂವಾದ ನಡೆಸಿ, ಅವರ ಅನುಮಾನಗಳನ್ನು ಬಗೆಹರಿಸದಿದ್ದರೆ ಹೇಗೆ?
ಬಯಲುಸೀಮೆಯ ಜನರ ದಾಹ ಇಂಗಿಸಲು ಪಶ್ಚಿಮಘಟ್ಟವನ್ನು ವಿನಾಶಗೊಳಿಸದೇ ನದಿ ತಿರುವು ಯೋಜನೆ ಜಾರಿಯಾಗಬೇಕು. ಈಗ ಕೈಗೆತ್ತಿಕೊಂಡಿರುವ ಯೋಜನೆ ಕೇವಲ ಕುಡಿಯುವ ನೀರಿನ ಯೋಜನೆಯಾದರೆ ಯಾರೂ ಸಹ ತೀವ್ರ ಸ್ವರೂಪದ ಪ್ರತಿರೋಧ ತೋರಿಸುವುದಿಲ್ಲ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಎತ್ತಿನಹೊಳೆ ಯೋಜನೆ ಈಗ ಪಶ್ಚಿಮಘಟ್ಟ, ಕರಾವಳಿ ಮತ್ತು ಬಯಲು ಸೀಮೆಯ ಜನರಿಗೆ ಭಾವನಾತ್ಮಕ ವಿಷಯವಾಗಿ ಬದಲಾಗಿ ಹೋಗಿದೆ. ಸರ್ಕಾರ ಮನಸು ಮನಸುಗಳನ್ನು ಕಟ್ಟುವ ಕೆಲಸವನ್ನು ಮೊದಲು ಮಾಡಬೇಕು, ಆಮೇಲೆ ಅಣೆಕಟ್ಟುಗಳು ತನ್ನಿಂತಾನೇ ನಿರ್ಮಾಣವಾಗುತ್ತವೆ. ತನ್ಮೂಲಕವಾದರೂ ಬಯಲು ಸೀಮೆಯಲ್ಲಿ ಬಾಯಾರಿ ನೊಂದಿರುವ ಜನತೆಗೆ ಕುಡಿಯುವ ನೀರು ಸಿಗುವಂತಾಗಲಿ.
-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
ಬಯಲು ಸೀಮೆಯ ಜನರ ಕುಡಿಯುವ ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ತುಮಕೂರು ಮತ್ತು ಹಾಸನ ಜಿಲ್ಲೆಯ ಕೆಲವು ಭಾಗಗಳಲ್ಲಿ ಹನಿ ನೀರಿಗಾಗಿ ಜನರು ಪರದಾಡುವ ಸ್ಥಿತಿ ಇದೆ. ಕೆಲವು ಜಿಲ್ಲೆಗಳಲ್ಲಂತೂ ಸಾವಿರಾರು ಅಡಿ ಕೊರೆದರೂ ಭೂಮಿಯಲ್ಲಿ ನೀರು ಹುಟ್ಟುತ್ತಿಲ್ಲ. ಕೆರೆಗಳನ್ನು ಹಾಳುಗೆಡವಿದ್ದು, ಮಳೆ ನೀರು ಸಂಗ್ರಹಕ್ಕೆ ಸರಿಯಾದ ವ್ಯವಸ್ಥೆ ಮಾಡದೇ ಹೋಗಿದ್ದು ಇತ್ಯಾದಿ ಕಾರಣಗಳಿಂದಾಗಿ ಈ ಜಿಲ್ಲೆಗಳ ಜೀವಜಲವೇ ಬತ್ತಿಹೋಗಿದೆ. ಅಲ್ಪಸ್ವಲ್ಪ ನೀರು ಸಿಕ್ಕರೂ ಅದರಲ್ಲಿನ ಫ್ಲೋರೈಡ್ ಅಂಶದಿಂದಾಗಿ ಫ್ಲೋರೋಸಿಸ್ ಖಾಯಿಲೆ ಬಂದು, ಜನಸಾಮಾನ್ಯರ ಬದುಕು ನರಕವಾಗಿ ಹೋಗಿದೆ.
ಈ ಭಾಗದ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಹೋದಾಗಲೂ ಅಲ್ಲಿನ ಜನರ ಬವಣೆಗಳನ್ನು ನಾನು ಕೇಳಿದ್ದೇನೆ. ನಮಗೆ ನೀರೊಂದನ್ನು ಕೊಟ್ಟುಬಿಡಿ, ಹೇಗೋ ಬದುಕು ಸಾಗಿಸುತ್ತೇವೆ ಎಂದು ಅವರು ನೊಂದು ನುಡಿಯುತ್ತಾರೆ. ಚೆನ್ನಾಗಿ ಮಳೆಯಾದ ವರ್ಷಗಳಲ್ಲಿ ಕುಡಿಯಲು ಅಲ್ಪಸ್ವಲ್ಪ ನೀರಾದರೂ ಸಿಗುತ್ತದೆ. ಆದರೆ ದುರದೃಷ್ಟವೆಂದರೆ ಈ ಜಿಲ್ಲೆಗಳು ಸದಾ ಬರಪೀಡಿತವಾಗಿಯೇ ಇರುತ್ತವೆ. ಕಾಲಕಾಲಕ್ಕೆ ಮಳೆಯಾಗುತ್ತದೆ ಎಂದು ನಿರೀಕ್ಷೆಯೂ ಮಾಡದಂಥ ದುರ್ಬರ ಸಂದರ್ಭ ಇದಾಗಿದೆ.
ಇಂಥ ಸಂದರ್ಭದಲ್ಲಿ ಈ ಜಿಲ್ಲೆಗಳ ಜನರ ದಾಹ ಇಂಗಿಸಲು ಮುಂದಾಗಬೇಕಾದ್ದು ಯಾವುದೇ ನಾಗರಿಕ ಸಮಾಜದ ಕರ್ತವ್ಯ. ಈ ಭೂಮಂಡಲದಲ್ಲಿ ಅನಿವಾರ್ಯವಾಗಿ ನಾವು ಒಪ್ಪಿಕೊಂಡಿರುವ ಸೂತ್ರ ‘ಮೊದಲು ಮನುಷ್ಯ’ ಎಂಬುದೇ ಆಗಿದೆ. ಇದು ಎಷ್ಟು ಸರಿ, ಎಷ್ಟು ತಪ್ಪು ಎಂಬ ವಿಶ್ಲೇಷಣೆಗೆ ಕಾಲ ಇದಲ್ಲ. ಸಂಕಷ್ಟದಲ್ಲಿರುವ ಜನರ ಬೆನ್ನಿಗೆ ನಿಲ್ಲಬೇಕು ಎಂಬುದೇ ಮಾನವೀಯ ನಿಲುವು.
ಈ ಹಿನ್ನೆಲೆಯಲ್ಲಿ ಈ ಬರಪೀಡಿತ ಜಿಲ್ಲೆಗಳಿಗೆ ಪಶ್ಚಿಮಘಟ್ಟಗಳಲ್ಲಿ ಹರಿಯುವ ನದಿಗಳನ್ನು ಪೂರ್ವಾಭಿಮುಖವಾಗಿ ತಿರುಗಿಸುವ ಯೋಜನೆಗಳನ್ನು ಪ್ರಸ್ತಾಪಿಸಿದ್ದು ಪರಮಶಿವಯ್ಯನವರ ವರದಿ. ಪರಮಶಿವಯ್ಯನವರು ಕೇವಲ ಪಶ್ಚಿಮಘಟ್ಟದ ನದಿಗಳನ್ನು ತಿರುಗಿಸುವ ಪ್ರಸ್ತಾಪವನ್ನಷ್ಟೇ ಅಲ್ಲದೆ, ರಾಜ್ಯದ ವಿವಿಧ ಭಾಗಗಳಲ್ಲಿ ಮಾಡಬಹುದಾದ ನದಿ ತಿರುವು ಯೋಜನೆಗಳ ಕುರಿತು ಸಮಗ್ರ ವರದಿ ನೀಡಿದ್ದರು. ಈ ವರದಿ ಬಂದನಂತರ ಬಯಲುಸೀಮೆಯ ಜನರು, ಸಂಘಟನೆಗಳು ನೇತ್ರಾವತಿ ನದಿ ತಿರುವು ಯೋಜನೆ ಜಾರಿಗೆ ತಂದು ತಮ್ಮ ಜಿಲ್ಲೆಗಳಲ್ಲಿ ಕುಡಿಯುವ ನೀರು ಯೋಜನೆ ಮತ್ತು ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವಂತೆ ಆಗ್ರಹಿಸುತ್ತಲೇ ಇದ್ದಾರೆ.

ಎತ್ತಿನಹೊಳೆ ಯೋಜನೆಯ ಸಾಧಕಬಾಧಕಗಳ ಬಗ್ಗೆ ಚರ್ಚೆ ನಡೆಸುವ ಮುನ್ನ, ಈ ಎತ್ತಿನಹೊಳೆ ಯೋಜನೆ ಎಂದರೇನು ಎಂಬುದನ್ನು ಮೊದಲು ಗಮನಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನದಿಯಾದ ನೇತ್ರಾವತಿಗೆ ಇರುವ ಹಲವು ಉಪನದಿಗಳಲ್ಲಿ ಎತ್ತಿನಹೊಳೆಯೂ ಒಂದು. ಹಾಗೆ ನೋಡಿದರೆ ಎತ್ತಿನಹೊಳೆಯು ನೇರವಾಗಿ ನೇತ್ರಾವತಿಯನ್ನು ಸೇರುವುದಿಲ್ಲ. ಅದು ಕೆಂಪುಹೊಳೆಯನ್ನು ಸೇರಿ ನಂತರ ನೇತ್ರಾವತಿಯನ್ನು ಕೂಡುತ್ತದೆ. ಎತ್ತಿನಹೊಳೆಯನ್ನು ಸ್ಥಳೀಯರು ಹೊಳೆಯೆಂದು ಕರೆಯುವುದಿಲ್ಲ. ಅದು ಎತ್ತಿನಹಳ್ಳ. ಸಕಲೇಶಪುರ ತಾಲ್ಲೂಕಿನ ಮೂರ್ಕಣ್ಣು ಗುಡ್ಡದ ಬಳಿ ಸಣ್ಣ ತೊರೆಯಾಗಿ ಹುಟ್ಟುವ ಈ ಹಳ್ಳ ಆರು ಕಿ.ಮೀ ದೂರ ಹರಿದು ಕೆಂಪುಹೊಳೆಯನ್ನು ಸೇರುತ್ತದೆ.
ಸುಮಾರು ೧೦ ಚದರ ಕಿಮೀ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ನೀರನ್ನು ಹೆಗ್ಗದ್ದೆ ಮತ್ತು ಕಾಡುಮನೆಗಳಲ್ಲಿ ತಲಾ ಎರಡು ಚೆಕ್ ಡ್ಯಾಂ ಮತ್ತು ಕೆಂಕೇರಿಹಳ್ಳದಲ್ಲಿ ಒಂದು ಚೆಕ್ ಡ್ಯಾಂಗಳಲ್ಲಿ ಸಂಗ್ರಹಿಸಿ ಲಿಫ್ಟ್ ಮಾಡುವ ಮೊದಲ ಹಂತದ ಯೋಜನೆಯ ಕೆಲಸಗಳು ಈಗ ನಡೆಯುತ್ತಿವೆ. ಆದರೆ ವಿಶೇಷವೆಂದರೆ ಈ ಭಾಗದಲ್ಲಿ ಆಗುತ್ತಿರುವ ವಾರ್ಷಿಕ ಮಳೆಯ ಅಂದಾಜು ಹಾಕಿದರೆ ಇಲ್ಲಿ ಸಂಗ್ರಹವಾಗುವ ನೀರು ಏಳೆಂಟು ಟಿಎಂಸಿ ದಾಟುವುದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಎತ್ತಿನಹೊಳೆ ಮಾತ್ರವಲ್ಲದೆ ಕಾಡುಮನೆಹೊಳೆ, ಹೊಂಗಡಹಳ್ಳ, ಕೆಂಕೇರಿಹಳ್ಳಗಳ ನೀರನ್ನೂ ಸೇರಿಸಿದರೂ ಲಭ್ಯವಾಗುವ ನೀರಿನ ಪ್ರಮಾಣ ಒಂಭತ್ತು ಟಿಎಂಸಿ ದಾಟುವುದಿಲ್ಲ ಎಂಬ ಅಂದಾಜಿದೆ. ಆದರೆ ಯೋಜನೆಯ ಆರಂಭದಲ್ಲಿ ಮುಖ್ಯಮಂತ್ರಿಗಳು ಯೋಜನೆಯಿಂದ ೨೪ ಟಿಎಂಸಿ ನೀರು ಲಭ್ಯವಾಗುತ್ತದೆ ಎಂದು ಘೋಷಿಸಿದ್ದರು. ಸರ್ಕಾರದ ಡಿಪಿಆರ್ನಲ್ಲಿ ೨೨ ಟಿಎಂಸಿ ನೀರಿನ ಯೋಜನೆ ಎಂದೇ ಉಲ್ಲೇಖಿಸಲಾಗಿದೆ. ಹಾಗಿದ್ದರೆ ನಿಜವಾಗಿಯೂ ಸರ್ಕಾರದ ಉದ್ದೇಶವೇನು? ಯೋಜನಾವರದಿಯನ್ನು ಗಮನಿಸಿದರೆ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಮತ್ತು ಹಾಸನ ಜಿಲ್ಲೆಗಳಿಗೆ ನೀರು ಕೊಡಬೇಕಾಗುತ್ತದೆ. ಇದನ್ನು ಸರ್ಕಾರ ಮೇಲಿಂದ ಮೇಲೆ ಕುಡಿಯುವ ನೀರಿನ ಯೋಜನೆ ಎಂದು ಹೇಳುತ್ತಿದ್ದರೂ ದಾಖಲೆಗಳು ಹೇಳುತ್ತಿರುವುದೇ ಬೇರೆ, ಈ ನೀರನ್ನು ನೀರಾವರಿ ಮತ್ತು ಜಲವಿದ್ಯುತ್ ಯೋಜನೆಗಳಿಗೂ ಬಳಸಿಕೊಳ್ಳುವ ಲೆಕ್ಕಾಚಾರ ಸರ್ಕಾರಕ್ಕಿದೆ. ಡಿಪಿಆರ್ ಪ್ರಕಾರ ಕೋಲಾರ, ಚಿಕ್ಕಬಳ್ಳಾಪುರಕ್ಕೆ ೨೦೪೪ ಇಸವಿ ತನಕ ಸರಾಸರಿ ೫ ಟಿಎಂಸಿ ನೀರು ಮಾತ್ರ ಸರಬರಾಜು ಮಾಡಲಾಗುವುದು ಎಂದು ನಮೂದಿಸಲಾಗಿದ್ದರೆ, ರಾಮನಗರ ಜಿಲ್ಲೆಯೊಂದಕ್ಕೆ ೧೩ ಟಿಎಂಸಿಗೂ ಹೆಚ್ಚು ನೀರು ಹರಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ. ಅದರರ್ಥ ಇದು ಕುಡಿಯುವ ನೀರು ಯೋಜನೆ ಮಾತ್ರವಲ್ಲ ಎಂಬುದನ್ನು ಗಮನಿಸಬೇಕು.
ಇಂಥ ಸನ್ನಿವೇಶದಲ್ಲಿ ಸರ್ಕಾರ ಏನು ಮಾಡಬೇಕು? ಮೊಟ್ಟ ಮೊದಲು ಪಶ್ಚಿಮಘಟ್ಟ, ಕರಾವಳಿ ಮತ್ತು ಬಯಲು ಸೀಮೆಯ ಜನರಲ್ಲಿ ಉದ್ಭವಿಸಿರುವ ಅನುಮಾನಗಳನ್ನು ಬಗೆಹರಿಸುವ ಕೆಲಸವನ್ನು ಮಾಡಬೇಕಿದೆ. ಇದು ಕೇವಲ ಎತ್ತಿನಹೊಳೆ ಯೋಜನೆಯೋ ಅಥವಾ ನೇತ್ರಾವತಿ ತಿರುವು ಯೋಜನೆಯೋ ಎಂಬುದನ್ನು ಸ್ಪಷ್ಟಪಡಿಸಬೇಕು. ಇದು ಕುಡಿಯುವ ನೀರಿನ ಯೋಜನೆಯೋ ಅಥವಾ ಶಾಶ್ವತ ನೀರಾವರಿ ಯೋಜನೆಯೋ ಎಂಬ ಪ್ರಶ್ನೆಗೆ ಉತ್ತರ ಕೊಡಬೇಕಿದೆ. ಇಂಥ ಬೃಹತ್ ಯೋಜನೆಗಳ ವಿಷಯದಲ್ಲಿ ಸರ್ಕಾರ ಕದ್ದುಮುಚ್ಚಿ ಏನನ್ನೂ ಮಾಡದೆ, ಪಾರದರ್ಶಕವಾಗಿರಬೇಕು. ಈ ಯೋಜನೆಗೆ ಎಷ್ಟು ಅರಣ್ಯ ಭೂಮಿ, ಖಾಸಗಿ ಭೂಮಿಯನ್ನು ವಶಪಡಿಸಿಕೊಳ್ಳಲಾಗುವುದು ಎಂಬುದನ್ನು ಪಾರದರ್ಶಕವಾಗಿ ಜನತೆಯ ಮುಂದೆ ಬಿಡಿಸಿಡಬೇಕು. ಆಗುವ ಹಾನಿಯನ್ನು ತುಂಬಿಕೊಡುವ ನಿಟ್ಟಿನಲ್ಲಿ ಸರ್ಕಾರ ಏನೇನು ಕ್ರಮ ಕೈಗೊಳ್ಳಲಿದೆ ಮತ್ತು ನಷ್ಟಕ್ಕೀಡಾಗುವ ಜನರಿಗೆ ಯಾವ ರೀತಿಯ ಪರಿಹಾರೋಪಾಯಗಳನ್ನು ಕಲ್ಪಿಸಿಕೊಡಲಿದೆ ಎಂಬುದನ್ನು ಸ್ಪಷ್ಟಪಡಿಸಬೇಕು.
ಈಗೀಗ ಎಲ್ಲ ಅಭಿವೃದ್ಧಿ ಕಾರ್ಯಗಳಲ್ಲೂ ರಾಜಕೀಯ ನುಸುಳಿಬಿಡುತ್ತದೆ. ಎತ್ತಿನಹೊಳೆ ವಿಷಯದಲ್ಲಿ ರಾಜಕಾರಣಿಗಳ ಭಿನ್ನ ಭಿನ್ನ ವೇಷವನ್ನು ನಾವು ಗಮನಿಸುತ್ತಿದ್ದೇವೆ. ಒಂದೇ ಪಕ್ಷದ ಹಲವು ನಾಯಕರು ಯೋಜನೆ ವಿಷಯದಲ್ಲಿ ಭಿನ್ನಭಿನ್ನ ನಿಲುವುಗಳನ್ನು ತಾಳಿದ್ದಾರೆ. ಚಿಕ್ಕಬಳ್ಳಾಪುರವನ್ನು ತಮ್ಮ ಕ್ಷೇತ್ರವನ್ನಾಗಿ ಮಾಡಿಕೊಂಡಿರುವ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯಿಲಿಯವರಿಗೆ ಎತ್ತಿನಹೊಳೆ ಯೋಜನೆ ಸಾಕಾರವಾಗಬೇಕಿದೆ. ಇನ್ನೊಂದೆಡೆ ಅವರದೇ ಪಕ್ಷದ ಹಿರಿಯ ಮುಖಂಡ, ಮತ್ತೋರ್ವ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಬಿಜೆಪಿಯಲ್ಲೂ ಹಾಗೆ, ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗಲೇ ಎತ್ತಿನಹೊಳೆ ಯೋಜನೆಗೆ ಅನುಮತಿ ದೊರೆತಿತ್ತು. ಈಗಲೂ ಅವರು ಯೋಜನೆ ಪರವಾಗಿದ್ದಾರೆ. ಆದರೆ ದಕ್ಷಿಣ ಕನ್ನಡದ ಸಂಸದರು ಸೇರಿದಂತೆ ಆ ಜಿಲ್ಲೆಯ ಬಿಜೆಪಿ ಮುಖಂಡರು ಯೋಜನೆಯನ್ನು ವಿರೋಧಿಸುತ್ತಿದ್ದಾರೆ.
ಇಂಥ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಎಲ್ಲರನ್ನೂ ಒಂದು ವೇದಿಕೆಗೆ ತಂದು ಗಂಭೀರ ಚರ್ಚೆಗೆ ಅನುವು ಮಾಡಿಕೊಡಬೇಕಿದೆ. ಹೇಳಿ ಕೇಳಿ ಇದು ಹದಿಮೂರು ಸಾವಿರ ಕೋಟಿ ರುಪಾಯಿಗಳ ಯೋಜನೆ. ಇತರ ಯೋಜನೆಗಳ ಇತಿಹಾಸವನ್ನು ಗಮನಿಸಿದರೆ ಈ ಯೋಜನೆ ಪೂರ್ಣವಾಗುವ ಹೊತ್ತಿಗೆ ಇಪ್ಪತ್ತು ಮೂವತ್ತು ಸಾವಿರ ಕೋಟಿ ರುಪಾಯಿಗಳ ಗಡಿ ದಾಟುವ ಎಲ್ಲ ಸಾಧ್ಯತೆಗಳೂ ಇವೆ. ಇಂಥ ಬೃಹತ್ ಯೋಜನೆ ಜಾರಿಯಾಗುವ ಪ್ರದೇಶದಲ್ಲೇ ಜನರ ಜತೆ ಸರ್ಕಾರ ಸಂವಹನ ನಡೆಸದಿದ್ದರೆ ಹೇಗೆ? ಯೋಜನೆಯಿಂದ ಭೂಮಿ ಕಳೆದುಕೊಳ್ಳುವ, ನಷ್ಟ ಅನುಭವಿಸುವ, ಸ್ಥಳಾಂತರಗೊಳ್ಳುವ, ಬೇರೆ ಬೇರೆ ರೀತಿಯ ಪ್ರತ್ಯಕ್ಷ, ಪರೋಕ್ಷ ಸಮಸ್ಯೆಗಳನ್ನು ಎದುರಿಸುವ ಜನರ ಜತೆ ಸಂವಾದ ನಡೆಸಿ, ಅವರ ಅನುಮಾನಗಳನ್ನು ಬಗೆಹರಿಸದಿದ್ದರೆ ಹೇಗೆ?
ಬಯಲುಸೀಮೆಯ ಜನರ ದಾಹ ಇಂಗಿಸಲು ಪಶ್ಚಿಮಘಟ್ಟವನ್ನು ವಿನಾಶಗೊಳಿಸದೇ ನದಿ ತಿರುವು ಯೋಜನೆ ಜಾರಿಯಾಗಬೇಕು. ಈಗ ಕೈಗೆತ್ತಿಕೊಂಡಿರುವ ಯೋಜನೆ ಕೇವಲ ಕುಡಿಯುವ ನೀರಿನ ಯೋಜನೆಯಾದರೆ ಯಾರೂ ಸಹ ತೀವ್ರ ಸ್ವರೂಪದ ಪ್ರತಿರೋಧ ತೋರಿಸುವುದಿಲ್ಲ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಎತ್ತಿನಹೊಳೆ ಯೋಜನೆ ಈಗ ಪಶ್ಚಿಮಘಟ್ಟ, ಕರಾವಳಿ ಮತ್ತು ಬಯಲು ಸೀಮೆಯ ಜನರಿಗೆ ಭಾವನಾತ್ಮಕ ವಿಷಯವಾಗಿ ಬದಲಾಗಿ ಹೋಗಿದೆ. ಸರ್ಕಾರ ಮನಸು ಮನಸುಗಳನ್ನು ಕಟ್ಟುವ ಕೆಲಸವನ್ನು ಮೊದಲು ಮಾಡಬೇಕು, ಆಮೇಲೆ ಅಣೆಕಟ್ಟುಗಳು ತನ್ನಿಂತಾನೇ ನಿರ್ಮಾಣವಾಗುತ್ತವೆ. ತನ್ಮೂಲಕವಾದರೂ ಬಯಲು ಸೀಮೆಯಲ್ಲಿ ಬಾಯಾರಿ ನೊಂದಿರುವ ಜನತೆಗೆ ಕುಡಿಯುವ ನೀರು ಸಿಗುವಂತಾಗಲಿ.
-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ