Monday, 7 December 2015

ಚಳವಳಿಗಾರರನ್ನು ಬಲಿಹಾಕುವ ದುಷ್ಟತನವೇಕೆ?

ಈ ಲೇಖನವನ್ನು ಆರಂಭ ಮಾಡುವ ಮೊದಲೇ ನಾನು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ನಾವು, ಚಳವಳಿಗಾರರು ಪೊಲೀಸರು ಹೂಡುವ ಮೊಕದ್ದಮೆಗಳಿಗೆ, ಜೈಲುವಾಸಕ್ಕೆ ಹೆದರುವವರಲ್ಲ. ಅಷ್ಟು ಮಾತ್ರ ಯಾಕೆ, ಪೊಲೀಸರ ಲಾಠಿ ಏಟು, ಬೂಟಿನ ಏಟು ತಿಂದವರು ನಾವು. ಅದಕ್ಕೂ ನಾವು ಭೀತಿ ಪಡುವುದಿಲ್ಲ. ಪದೇ ಪದೇ ನಾನು ಒಂದು ಮಾತನ್ನು ಹೇಳುತ್ತಿರುತ್ತೇನೆ; ಮೈಯಲ್ಲಿ ಕೊನೆಯ ಹನಿ ರಕ್ತ ಇರುವವರೆಗೂ ನೆಲಕ್ಕಾಗಿ, ನಾಡು-ನುಡಿಗಾಗಿ ಹೋರಾಟ ಮಾಡಿ ಈ ಸ್ವರ್ಗಭೂಮಿಯಲ್ಲಿ ಪ್ರಾಣ ಬಿಡುತ್ತೇವೆಯೇ ಹೊರತು ಹೆದರಿ ಹಿಂದಕ್ಕೆ ಹೋಗುವ ಪ್ರಶ್ನೆಯೇ ಇಲ್ಲ.

ಚಳವಳಿ ಎಂದರೇನೇ ಪ್ರಭುತ್ವವನ್ನು ಎದುರುಹಾಕಿಕೊಳ್ಳುವ ಪ್ರಕ್ರಿಯೆ. ಯಾವುದೇ ಪ್ರಭುತ್ವವೂ ತನ್ನನ್ನು, ತನ್ನ ನಿಲುವನ್ನು ವಿರೋಧಿಸುವವರೆಡೆಗೆ ಒಂದು ಬಗ್ಗೆಯ ಅಸಹನೆಯನ್ನು ಇಟ್ಟುಕೊಂಡಿರುತ್ತದೆ. ಅದು ರಾಜಪ್ರಭುತ್ವವಾದರೂ ಸರಿ, ಪ್ರಜಾಪ್ರಭುತ್ವವಾದರೂ ಸರಿ ಅಥವಾ ಮಿಲಿಟರಿ ಆಡಳಿತವಾದರೂ ಕೂಡ. ಮಿಕ್ಕೆಲ್ಲ ರಾಜಕೀಯ ವ್ಯವಸ್ಥೆಗಳಿಗಿಂತ ಪ್ರಜಾಪ್ರಭುತ್ವ ಮೇಲು. ಯಾಕೆಂದರೆ ಇತರೆ ಆಡಳಿತ ವ್ಯವಸ್ಥೆಗಳ ಹಾಗೆ ಪ್ರಜಾಪ್ರಭುತ್ವದಲ್ಲಿ ಜನರ ಹೋರಾಟವನ್ನು ಅಷ್ಟು ಸುಲಭವಾಗಿ ಹತ್ತಿಕ್ಕಲು ಸಾಧ್ಯವಿರುವುದಿಲ್ಲ.

ಆದರೆ ಎಷ್ಟೋ ಸಂದರ್ಭಗಳಲ್ಲಿ ಆಳುವ ಸ್ಥಾನದಲ್ಲಿ ಕುಳಿತುಕೊಂಡ ರಾಜಕಾರಣಿಗಳು ಸರ್ವಾಧಿಕಾರಿಗಳ ಹಾಗೆಯೇ ವರ್ತಿಸುತ್ತಾರೆ. ತಮಗೆ ದಕ್ಕಿದ ಅಧಿಕಾರ ಶಾಶ್ವತವೆಂಬ ಭ್ರಮೆಯಲ್ಲೇ ಇರುತ್ತಾರೆ. ತಮ್ಮ ವಿರುದ್ಧ ಕೇಳಿಬರುವ ಯಾವುದೇ ಧ್ವನಿಯನ್ನು ಹತ್ತಿಕ್ಕುವ ದುಷ್ಟತನವನ್ನು ಕಾರ್ಯವನ್ನು ನಡೆಸುತ್ತಲೇ ಇರುತ್ತಾರೆ.

ದುರದೃಷ್ಟವೆಂದರೆ ಕನ್ನಡ ಚಳವಳಿಗಾರರನ್ನು ಸಹ ಸರ್ಕಾರಗಳು ತಮ್ಮ ಶತ್ರುಗಳೆಂದೇ ಪರಿಗಣಿಸುತ್ತ ಬಂದಿರುವುದು. ನಾವು ನಾಡು-ನುಡಿಗಾಗಿ ಹೋರಾಡುತ್ತ ಬಂದವರು. ಒಂದು ಸರ್ಕಾರವಾಗಿ ಅವರು ನಮ್ಮ ಹೋರಾಟವನ್ನು ಬೆಂಬಲಿಸುವುದು ಬೇಡ, ಆದರೆ ಚಳವಳಿಯನ್ನು ಹತ್ತಿಕ್ಕುತ್ತಲೇ ಹೋದರೆ ಅದಕ್ಕೇನು ಅರ್ಥ? ಎಷ್ಟೋ ಸಂದರ್ಭಗಳಲ್ಲಿ ಸರ್ಕಾರದಿಂದ ಸಾಧ್ಯವಾಗದ ಕೆಲಸವನ್ನು ಕನ್ನಡ ಚಳವಳಿಗಾರರು ಮಾಡಿದ್ದಾರೆ. ಆದರೂ ಕನ್ನಡ ಚಳವಳಿಯನ್ನೇ ಹತ್ತಿಕ್ಕುವ ಪ್ರಯತ್ನಗಳು ಯಾಕೆ ಮಾಡಲಾಗುತ್ತದೆ?

ಬೇರೆ ಕನ್ನಡ ಸಂಘಟನೆಗಳ ವಿಷಯ ಹಾಗಿರಲಿ, ನಾನು ಕರ್ನಾಟಕ ರಕ್ಷಣಾ ವೇದಿಕೆಗೆ ಸಂಬಂಧಿಸಿದಂತೆ ಇಡೀ ರಾಜ್ಯದಲ್ಲಿ ಹೂಡಲಾಗಿರುವ ಮೊಕದ್ದಮೆಗಳ ಸಂಖ್ಯೆಯನ್ನು ಹೇಳಿದರೆ ಯಾರಿಗಾದರೂ ಗಾಬರಿಯಾಗುತ್ತದೆ. ನನ್ನ ಮತ್ತು ನನ್ನ ಕಾರ್ಯಕರ್ತರ ಮೇಲೆ ಹೂಡಲಾಗಿರುವ ಒಟ್ಟು ಮೊಕದ್ದಮೆಗಳ ಸಂಖ್ಯೆ ಸಾವಿರದ ಇನ್ನೂರನ್ನು ಮೀರುತ್ತದೆ ಎಂದರೆ ನೀವು ನಂಬಲೇಬೇಕು. ನನ್ನ ಮೇಲೆ ನನ್ನ ಗಮನದಲ್ಲಿ ಇರುವ ಮೊಕದ್ದಮೆಗಳ ಸಂಖ್ಯೆಯೇ ಸುಮಾರು ನಲವತ್ತೆಂಟು. ಪೊಲೀಸರು ನಮ್ಮ ಮಹಿಳಾ ಕಾರ್ಯಕರ್ತೆಯರನ್ನೂ ಬಿಟ್ಟಿಲ್ಲ. ಅವರ ಮೇಲೂ ಸಾಕಷ್ಟು ಮೊಕದ್ದಮೆಗಳನ್ನು ಹೂಡಲಾಗಿದೆ.
ಇದೆಲ್ಲ ಯಾವ ರೀತಿಯ ಮೊಕದ್ದಮೆಗಳು? ಯಾವುದೋ ಚಳವಳಿಗೆ ನಾವು ಅನುಮತಿ ಪಡೆದಿರುವುದಿಲ್ಲ, ಚಳವಳಿಯ ಸಂದರ್ಭದಲ್ಲಿ ರಸ್ತೆ ತಡೆ ಮಾಡಿರುತ್ತೇವೆ, ಇನ್ನೆಲ್ಲೋ ಪೊಲೀಸರ ನೀತಿ ನಿಯಮಾವಳಿಗಳನ್ನು ಪಾಲಿಸಿರುವುದಿಲ್ಲ. ಇಂಥ ಸಂದರ್ಭದಲ್ಲಿ ನಮ್ಮ ಮೇಲೆ ಮೊಕದ್ದಮೆಗಳನ್ನು ಹೂಡಲಾಗಿರುತ್ತದೆ. ಕೆಲವೊಮ್ಮೆ ಎಲ್ಲ ನಿಯಮಗಳನ್ನು ಪಾಲಿಸಿಯೇ ಚಳವಳಿ ನಡೆಸಿದ್ದರೂ ನಮ್ಮ ಮೇಲೆ ಮೊಕದ್ದಮೆಗಳನ್ನು ಹೂಡಲಾಗಿರುತ್ತದೆ. ಎಷ್ಟೋ ಸಂದರ್ಭದಲ್ಲಿ ನಮ್ಮ ಮೇಲೆ ಮೊಕದ್ದಮೆ ಹೂಡಿರುವುದು ಗೊತ್ತಾಗಿರುವುದೇ ಇಲ್ಲ. ಪೊಲೀಸರು ನಮ್ಮ ಮನೆಯ ಬಾಗಿಲಿಗೆ ವಾರಂಟ್ ತಂದಾಗಲೇ ನಮ್ಮ ಮೇಲೆ ಮೊಕದ್ದಮೆ ಹೂಡಲಾಗಿದೆ ಎಂಬುದು ಗೊತ್ತಾಗುತ್ತದೆ.

ಕೆಲವು ಸಂದರ್ಭಗಳಲ್ಲಿ ನಾವು ಸರ್ಕಾರದ ವಿರುದ್ಧ ತೊಡೆ ತಟ್ಟಿ ನಿಂತಾಗ, ನಮ್ಮನ್ನು ಹಣಿಯಲು ಇಂಥ ಚಳವಳಿಗಳ ಸಂದರ್ಭವನ್ನೇ ಬಳಸಿಕೊಳ್ಳಲಾಗುತ್ತದೆ. ನಾವು ಕಂಡು ಕೇಳರಿಯದ ಸೆಕ್ಷನ್‌ಗಳನ್ನು ನಮ್ಮ ಮೇಲೆ ಹೇರಲಾಗುತ್ತದೆ. ನಮ್ಮ ಎಷ್ಟೋ ಕಾರ್ಯಕರ್ತರ ಮೇಲೆ ಪೊಲೀಸರು ಗೂಂಡಾ ಕಾಯ್ದೆ ತೆರೆದಿದ್ದಾರೆ. ಇವರ್‍ಯಾರೂ ಸಮಾಜಘಾತಕ ಚಟುವಟಿಕೆ ನಡೆಸಿದವರಲ್ಲ, ಚಳವಳಿಯ ಮೊಕದ್ದಮೆಗಳನ್ನು ಬಿಟ್ಟರೆ ಬೇರೆ ಯಾವ ರೀತಿಯ ಕ್ರಿಮಿನಲ್ ಕೇಸುಗಳಲ್ಲೂ ಇದ್ದವರಲ್ಲ, ಆದರೂ ಇವರ ಮೇಲೆ ಗೂಂಡಾ ಕಾಯ್ದೆಯನ್ನು ಹೂಡಲಾಗಿದೆ.

ನಮ್ಮ ದೇಶದಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಯಾವತ್ತಿಗೂ ಸುರಕ್ಷಿತರು. ಒಂದು ಪಕ್ಷದ ಅಧಿಕಾರವಿದ್ದಾಗ ಇನ್ನೊಂದು ಪಕ್ಷದ ಕಾರ್ಯಕರ್ತರ ಮೇಲೆ ಮೊಕದ್ದಮೆಗಳನ್ನು ಹೂಡಲಾಗಿರುತ್ತದೆ. ಆ ಇನ್ನೊಂದು ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ತನ್ನ ಕಾರ್ಯಕರ್ತರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುತ್ತದೆ. ಬಳ್ಳಾರಿಯಲ್ಲಿ ಗಡಿರೇಖೆಯನ್ನೇ ಬದಲಾಯಿಸಿ ನೂರಾರು ಕೋಟಿ ರೂ. ಗಣಿ ಸಂಪತ್ತನ್ನು ಲೂಟಿ ಮಾಡಿದವರ ಮೇಲೆ ಇದ್ದ ಕೇಸ್‌ಗಳನ್ನು ಹಿಂದೆ ಇದ್ದ ಬಿಜೆಪಿ ಸರ್ಕಾರ ಹಿಂದಕ್ಕೆ ಪಡೆಯಿತು. ಮಸೀದಿ, ಚರ್ಚ್‌ಗಳ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳ ಮೇಲೆ ಇದ್ದ ಕೇಸುಗಳನ್ನು ವಾಪಾಸು ತಗೊಂಡಿತು. ಆದರೆ ಯಾರು ಎಷ್ಟೇ ಹೇಳಿದರೂ ಕನ್ನಡಕ್ಕಾಗಿ ಹೋರಾಟ ಮಾಡಿದವರ ಮೇಲೆ ಇದ್ದ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಿಲ್ಲ.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮಾಡಿದ್ದೂ ಅದೇ ಕೆಲಸವನ್ನೇ. ತನಗೆ ಬೇಕಾದವರ ಮೇಲಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆಯಿತು. ಕಣ್ಣೊರೆಸಲು ಒಂದಷ್ಟು ರೈತರ ಮೇಲಿನ ಪ್ರಕರಣಗಳನ್ನೂ ಹಿಂದಕ್ಕೆ ಪಡೆಯಲಾಯಿತು. ಇತ್ತೀಚಿಗೆ ಕೋಮು ಗಲಭೆಗಳಲ್ಲಿ ಪಾಲ್ಗೊಂಡಿದ್ದ ಪಿಎಫ್‌ಐ ಎಂಬ ಸಂಘಟನೆಯ ಕಾರ್ಯಕರ್ತರ ಮೇಲಿದ್ದ ಮೊಕದ್ದಮೆಗಳನ್ನೂ ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಿತು.

ತಿರುವಳ್ಳುವರ್ ಪ್ರತಿಮೆ ಅನಾವರಣದ ಸಂದರ್ಭದಲ್ಲಿ ರಾತ್ರೋರಾತ್ರಿ ೧೮೦ ಕಾರ್ಯಕರ್ತರನ್ನು ಬಂಧಿಸಿದ್ದರು. ಬೆಂಗಳೂರಿನ ಒಟ್ಟು ೧೧ ಪೊಲೀಸ್ ಠಾಣೆಗಳಲ್ಲಿ ನನ್ನ ಮೇಲೆ ಕೇಸುಗಳನ್ನು ಹಾಕಲಾಯಿತು. ತಮಾಷೆ ನೋಡಿ, ಬೆಂಗಳೂರಿನಲ್ಲಿರುವ ನನ್ನ ಮೇಲೆ ಬೆಳಗಾವಿಯಲ್ಲಿ, ರಾಯಚೂರಿನಲ್ಲಿ ನಡೆದ ಪ್ರತಿಭಟನೆಯಲ್ಲೂ ಎ-೧ ಮಾಡಿ ಪ್ರಕರಣ ಹೂಡಲಾಯಿತು. ರೈಲ್ವೆ ಹೋರಾಟದ ಸಂದರ್ಭದಲ್ಲೂ ಅಷ್ಟೆ, ನಮ್ಮ ಕಾರ್ಯಕರ್ತರ ತಲೆಯ ಮೇಲೆ ಬಿದ್ದ ಮೊಕದ್ದಮೆಗಳಿಗೆ ಲೆಕ್ಕವೇ ಇಲ್ಲ. ನಾವು ದಿನಬೆಳಗಾದರೆ ಸಾಕು, ನ್ಯಾಯಾಲಯಗಳಲ್ಲಿ ಕೈಕಟ್ಟಿ ನಿಂತುಕೊಳ್ಳಬೇಕು. ಇನ್ನೆಷ್ಟು ದಿನ ಈ ಚಿತ್ರಹಿಂಸೆಯನ್ನು ಸಹಿಸಿಕೊಳ್ಳಬೇಕು? ಅಷ್ಟಕ್ಕೂ ನಾವೇನು ಕೊಲೆಗಡುಕರೇ? ದರೋಡೆಕೋರರೇ? ಸಮಾಜಘಾತಕರೇ?

ಮೊಕದ್ದಮೆಗಳ ಕಾರಣಕ್ಕೆ ನಾವು ಕೋರ್ಟು ಅಲೆದು ಅಲೆದು ಸಾಕಾಗಿದ್ದೇವೆ. ಬರೀ ನಮ್ಮ ಸಮಯ, ಶ್ರಮವಷ್ಟೇ ಇದರಿಂದ ವ್ಯಯವಾಗುತ್ತಿಲ್ಲ. ವಕೀಲರಿಗೆ ಫೀಜು ನೀಡಬೇಕಲ್ಲವೇ? ಅದರ ಖರ್ಚು ಯಾರು ನೋಡಿಕೊಳ್ಳುವುದು? ಚಳವಳಿಗಳ ಕೇಸುಗಳನ್ನು ನಿರ್ವಹಿಸಲೆಂದೇ ನಾವು ವಕೀಲರ ತಂಡವೊಂದನ್ನು ನೇಮಕ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಎಷ್ಟೋ ಕಾರ್ಯಕರ್ತರಿಗೆ ವಕೀಲರ ಫೀಜು ಕೊಡುವ ಶಕ್ತಿಯೂ ಇರುವುದಿಲ್ಲ. ಕೇಸು ನಡೆಸದಿದ್ದರೆ ಜೈಲು ಪಾಲಾಗಬೇಕು. ಇಂಥ ಪರಿಸ್ಥಿತಿಯಲ್ಲಿ ನಮ್ಮ ಕಾರ್ಯಕರ್ತರ ನೆರವಿಗೆ ಇನ್ಯಾರು ನಿಲ್ಲಲು ಸಾಧ್ಯ, ನಾವೇ ನಿಲ್ಲಬೇಕು. ತಿಂಗಳಿಗೆ ಲಕ್ಷಾಂತರ ರುಪಾಯಿಗಳನ್ನು ಹೊಂದಿಸುವುದಾದರೂ ಹೇಗೆ?

ನಮ್ಮ ಪ್ರಭುತ್ವದ ತಂತ್ರಗಳೇ ಹಾಗೆ. ಚಳವಳಿಗಾರರು ಕೋರ್ಟು, ಜೈಲು ಅಲೆಯುವಂತೆ ಮಾಡಿದರೆ ಅವರಿಂದ ತೊಂದರೆ ಕಡಿಮೆ. ಅವರ ಚಳವಳಿಗಳೂ ಸತ್ತು ಹೋಗುತ್ತವೆ. ಹೀಗಾಗಿ ಅವರ ಮೇಲೆ ಸುಳ್ಳು ಮೊಕದ್ದಮೆಯಾದರೂ ಸರಿ, ಮೊಕದ್ದಮೆಗಳನ್ನು ಹಾಕುತ್ತಲೇ ಇರಿ ಎಂಬ ಸೂಚನೆಗಳು ಪೊಲೀಸರಿಗೆ ಇರುತ್ತವೆ. ಹೀಗಾಗಿ ನಾಡಿನ ಎಲ್ಲ ಪೊಲೀಸ್ ಠಾಣೆಗಳಲ್ಲೂ ಚಳವಳಿಗಾರರ ಮೇಲೆ ಮೇಲಿಂದ ಮೇಲೆ ಮೊಕದ್ದಮೆಗಳು ದಾಖಲಾಗುತ್ತವೆ.

ಇವೆಲ್ಲ ಸರಿಯಲ್ಲವೆಂಬುದು ನಮ್ಮ ರಾಜಕಾರಣಿಗಳಿಗೂ ಚೆನ್ನಾಗಿ ಗೊತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸುವ ಎಷ್ಟೋ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜನಪ್ರತಿನಿಧಿಗಳು, ರಾಜಕಾರಣಿಗಳು ರಕ್ಷಣಾ ವೇದಿಕೆ ಕಾರ್ಯಕರ್ತರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಹೇಳುತ್ತಿರುತ್ತಾರೆ. ಬೇರೆ ಯಾರೂ ಬೇಡ, ನಮ್ಮ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಿಂದೆ ವಿರೋಧಪಕ್ಷದ ನಾಯಕರಾಗಿದ್ದ ಕರವೇ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತ, ಇವರ ಮೇಲಿರುವ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಿರಿ ಎಂದು ಆಗಿನ ಗೃಹ ಸಚಿವ ಆರ್.ಅಶೋಕ್ ಅವರಿಗೆ ಹೇಳಿದ್ದರು. ಇವತ್ತು ಸಿದ್ಧರಾಮಯ್ಯ ಅವರ ಸರ್ಕಾರವೇ ಅಸ್ತಿತ್ವದಲ್ಲಿದೆ, ಆದರೂ ನಮ್ಮ ಮೇಲಿನ ಮೊಕದ್ದಮೆಗಳು ಹಾಗೆಯೇ ಇವೆ. ಈಗ ವಿರೋಧಪಕ್ಷದಲ್ಲಿರುವವರು ನಮ್ಮ ಪರವಾಗಿ ಮಾತನಾಡುತ್ತಾರೆ, ಮುಂದೆ ಅಧಿಕಾರಕ್ಕೆ ಬಂದಾಗ ಅವರೂ ಸಹ ಸುಮ್ಮನಾಗುತ್ತಾರೆ. ತಮ್ಮ ಕಾರ್ಯಕರ್ತರು ಮತ್ತು ಪರಿವಾರದವರ ಮೇಲಿನ ಕೇಸುಗಳನ್ನು ಮಾತ್ರ ಹಿಂದಕ್ಕೆ ಪಡೆಯುತ್ತಾರೆ. ಇದೇ ಪರಿಪಾಠ ಮುಂದುವರೆಯುತ್ತ ಸಾಗುತ್ತದೆ.

ನಾವು ಯಾವುದೇ ತರಹದ ಕ್ರಿಮಿನಲ್ ಚಟುವಟಿಕೆ ನಡೆಸಿದ್ದರೆ ಸರ್ಕಾರ ಒಂದಲ್ಲ ಹತ್ತು ಮೊಕದ್ದಮೆಗಳನ್ನು ಹೂಡಲಿ, ಜೈಲಿಗೆ ಕಳುಹಿಸಲಿ. ಆದರೆ ಚಳವಳಿ ಮಾಡಿದರೆಂಬ ಕಾರಣಕ್ಕೆ ಹತ್ತಾರು ಮೊಕದ್ದಮೆಗಳನ್ನು ಹಾಕಿ ಹಿಂಸೆ ನೀಡುತ್ತ ಹೋದರೆ ರಾಜ್ಯದಲ್ಲಿ ಚಳವಳಿಗಳು ಸತ್ತೇ ಹೋಗುತ್ತವೆ. ಪ್ರತಿರೋಧದ ಧ್ವನಿಗಳು, ಭಿನ್ನ ಧ್ವನಿಗಳು ಅಡಗಿಹೋದರೆ ಪ್ರಭುತ್ವಕ್ಕೆ ಬಹಳ ಸಂತೋಷ. ಆದರೆ ಅದು ಪರಿಪೂರ್ಣವಾದ ಪ್ರಜಾಪ್ರಭುತ್ವವಾಗಲಾರದು. ಪ್ರಜಾಪ್ರಭುತ್ವದಲ್ಲಿ ಭಿನ್ನಧ್ವನಿಗಳಿಗೆ ಎಂದೆಂದಿಗೂ ಅವಕಾಶವಿರಲೇಬೇಕು. ಅದರಲ್ಲೂ ನಾಡು ನುಡಿಗಾಗಿ ನಡೆಸುವ ಚಳವಳಿಗಳನ್ನು ಸರ್ಕಾರವೇ ಬಲಿಹಾಕಿದರೆ ಮುಂದೆ ಈ ನಾಡು ನಮ್ಮ ಕೈ ತಪ್ಪಿ ಹೋಗುತ್ತದೆ. ಆ ಎಚ್ಚರವೂ ನಮ್ಮನ್ನು ಆಳುವ ಸರ್ಕಾರಕ್ಕೆ ಇರಬೇಕಾಗುತ್ತದೆ.

ಹಿಂದೆಯೂ ನಾನು ಈ ವಿಷಯವನ್ನು ಹಲವು ಸಂದರ್ಭಗಳಲ್ಲಿ ಹೇಳಿದ್ದುಂಟು. ನ್ಯಾಯಾಧೀಶರಿಗೆ ಇರುವ ಮಾನವೀಯತೆ, ಕನ್ನಡ ಕಾಳಜಿ ನಮ್ಮನಾಳುವ ನಾಯಕರಿಗೆ ಇಲ್ಲ. ಕೆಲ ನ್ಯಾಯಾಧೀಶರು ಕೇಳ್ತಾರೆ: ‘ಏನ್ರೀ ನಾರಾಯಣಗೌಡ್ರೇ, ದಿನಾ ಬಂದು ಕೋರ್ಟ್‌ನಲ್ಲಿ ನಿಂತುಕೊಳ್ಳುತ್ತೀರಲ್ಲ. ನಿಮಗೆ ಅಂತ ಒಂದು ಬದುಕಿಲ್ಲವೇ. ಯಾಕಿಷ್ಟು ಕೇಸ್ ಹಾಕಿದ್ದಾರೆ?
ಒಬ್ಬ ನ್ಯಾಯಾಧೀಶರ ಟೇಬಲ್ ಮೇಲೆ ೨೦-೩೦ ಕೇಸ್ ಇರುತ್ತೆ. ಒಂದು ಕೋರ್ಟಿನಿಂದ ಇನ್ನೊಂದು ಕೋರ್ಟಿಗೆ ಓಡಾಡಬೇಕು. ಒಂದು ಕೋರ್ಟಿನಲ್ಲಿ ಕೇಸ್ ನಡೆಯುವಾಗ ಇನ್ನೊಂದು ಕೋರ್ಟಿಗೆ ಹೋಗದೆ ಇದ್ದರೆ ಬೇಲ್ ಕ್ಯಾನ್ಸಲ್ ಆಗಿರುತ್ತೆ. ಅಥವಾ ವಾರೆಂಟ್ ಆಗಿರುತ್ತೆ. ಪೊಲೀಸ್‌ನವರು ಮನೆಗೆ ಹುಡುಕಿಕೊಂಡು ಬರ್‍ತಾರೆ.

ನನ್ನ ಮೊಕದ್ದಮೆ ಸಂಬಂಧ ವಿಚಾರಣೆ ನಡೆಯುವಾಗ ಒಂದು ದಿನ ಒಬ್ಬ ಗೌರವಾನ್ವಿತ ನ್ಯಾಯಾಧೀಶರು ಇನ್ಸ್‌ಪೆಕ್ಟರ್ ಒಬ್ಬರನ್ನು ಗದರಿದ್ದರು: ದಿನಾ ಬೆಳಗಾದರೆ ಇವರು ಕೋರ್ಟಿಗೆ ಬರ್‍ತಾರೆ. ತಲೆ ಮರೆಸಿಕೊಂಡು ಹೋಗಿದ್ದಾರೆ ಅಂತ ಸುಳ್ಳು ಹೇಳ್ತಿರಲ್ರಿ. ನಿಮ್ಮಂಥ ಇನ್ಸ್‌ಪೆಕ್ಟರ್‌ಗಳನ್ನು ಹುಚ್ಚಾಸ್ಪತ್ರೆಗೆ ಕಳುಹಿಸಬೇಕು.

ಕಡೆಯದಾಗಿ ಒಂದು ತಮಾಷೆ ವಿಷಯ. ಒಬ್ಬ ಇನ್ಸ್‌ಪೆಕ್ಟರ್ ನನ್ನ ಮೇಲೆ ಐಪಿಸಿ ೫೩೦ನೇ ಕಲಂ ಅನ್ವಯ ಕೇಸು ಹಾಕಿದ್ದ. ಐಪಿಸಿಯಲ್ಲಿ ೫೩೦ನೇಯ ಸೆಕ್ಷನ್ನೇ ಇಲ್ಲ! ಯಾಕೆ ಅವನು ಇಲ್ಲದ ಸೆಕ್ಷನ್ ಹಾಕಿದ್ದನೋ ಏನೋ? ಪಾಪ, ಅವನಿಗೆ  ಯಾವ ಒತ್ತಡವಿತ್ತೋ ಏನೋ? ನ್ಯಾಯಾಧೀಶರು ಇದ್ಯಾವ ಸೆಕ್ಷನ್ ಹಾಕಿದ್ದೀರ್ರೀ ಎಂದು ದಬಾಯಿಸಿದಾಗ ಇನ್ಸ್ ಪೆಕ್ಟರ್ ಏನೋ ತಪ್ಪಾಗಿದೆ ಸ್ವಾಮಿ ಎಂದಿದ್ದರು.

ಚಳವಳಿಗಾರರನ್ನು ನಮ್ಮ ಸರ್ಕಾರಗಳು ಹೇಗೆ ನಡೆಸಿಕೊಳ್ಳುತ್ತವೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾಗಿಲ್ಲವೇನೋ? ಇಷ್ಟಾದರೂ ಕನ್ನಡ ನುಡಿ, ನಾಡು, ಪರಂಪರೆ, ಕನ್ನಡಿಗರ ಉದ್ಯೋಗಕ್ಕೆ ಧಕ್ಕೆಯಾದರೆ ನಾವು ಸುಮ್ಮನೆ ಕೂರುವವರಂತೂ ಅಲ್ಲ. ಸರ್ಕಾರ ಏನೇ ದರ್ಪ, ದಬ್ಬಾಳಿಕೆ ಪ್ರದರ್ಶಿಸಿದರೂ ನಾವು ಎದೆಗುಂದದೆ ಹೋರಾಡುತ್ತೇವೆ. ವಿಶೇಷವಾಗಿ ಕನ್ನಡ ಚಳವಳಿಯ ಕತ್ತುಹಿಚುಕಲು ನಾವಂತೂ ಬಿಡುವುದಿಲ್ಲ, ಕೊನೆ ಉಸಿರಿನವರೆಗೆ.

-ಟಿ.ಎ.ನಾರಾಯಣಗೌಡ,
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ಬೇಕಾಗಿದೆ



ಕನ್ನಡ ರಾಜ್ಯೋತ್ಸವ ಮಾಸ ಮುಗಿಯುತ್ತಿದೆ. ಈ ಸಂದರ್ಭದಲ್ಲಿ ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಸಾಕಷ್ಟಿವೆ. ನಮಗೆಲ್ಲ ಗೊತ್ತಿದೆ, ಕನ್ನಡ ಎನ್ನುವುದೇ ಒಂದು ದೇಶವಾಗಿತ್ತು. ಹತ್ತಾರು ರಾಜವಂಶಗಳು ಈ ಕನ್ನಡ ನಾಡನ್ನು ಕಟ್ಟಿ ಬೆಳೆಸಿದ್ದವು. ಸ್ವಾತಂತ್ರ್ಯ ಸಂಗ್ರಾಮದ ನಂತರ ಕನ್ನಡ ನಾಡು ಭಾರತ ಒಕ್ಕೂಟದಲ್ಲಿ ವಿಲೀನವಾಯಿತು. ವಿಲೀನವಾಗುವುದು ಎಂದರೆ ತನ್ನತನವನ್ನು ಕಳೆದುಕೊಂಡು ಪರಾಧೀನವಾಗುವುದಲ್ಲ. ತನ್ನ ಅಸ್ಮಿತೆಯನ್ನು ಉಳಿಸಿಕೊಂಡೇ ಈ ಒಕ್ಕೂಟದ ಹೆಮ್ಮೆಯ ಭಾಗವಾಗುವುದು.

ಆದರೆ ಹುಸಿ ರಾಷ್ಟ್ರೀಯತೆಯ ಹೆಸರಿನಲ್ಲಿ, ಏಕತ್ವವನ್ನು ಸಾರುವ ಹುನ್ನಾರದಲ್ಲಿ ಪ್ರಾದೇಶಿಕ ನುಡಿ, ಸಂಸ್ಕೃತಿಗಳ ಅಸ್ತಿತ್ವವನ್ನೇ ಕಡೆಗಣಿಸುತ್ತಿರುವ ಬೆಳವಣಿಗೆಗಳು ಸಾಲುಸಾಲಾಗಿ ನಡೆಯುತ್ತಿವೆ. ಬೇರೇನೂ ಬೇಡ, ಕನ್ನಡ ನಾಡು ತನ್ನದೇ ಒಂದು ಬಾವುಟವನ್ನು ಅಧಿಕೃತವಾಗಿ ಹೊಂದಲು ಸಾಧ್ಯವಾಗಿಲ್ಲ ಎಂಬುದೊಂದು ದೊಡ್ಡ ವ್ಯಂಗ್ಯ, ಒಕ್ಕೂಟ ವ್ಯವಸ್ಥೆಯ ಅಣಕ. ಕನ್ನಡ ನಾಡಿಗೊಂದು ಬಾವುಟವಿರಬೇಕು ಎಂದರೆ ರಾಷ್ಟ್ರಧ್ವಜವನ್ನು ತಿರಸ್ಕರಿಸಬೇಕು ಎಂದೇನೂ ಅಲ್ಲ, ಅಥವಾ ಆ ಧ್ವಜಕ್ಕಿಂತ ಎತ್ತರದ ಸ್ಥಾನಮಾನವನ್ನು ನಾಡಧ್ವಜಕ್ಕೆ ಕೊಡಬೇಕು ಎಂದೇನೂ ಅಲ್ಲ. ಭಾರತ ಒಕ್ಕೂಟದ ಎಲ್ಲ ರಾಜ್ಯಗಳು ತಮ್ಮದೇ ಆದ ನುಡಿ, ಸಂಸ್ಕೃತಿಗಳನ್ನು ಹೊಂದಿರುವಂತೆ ತಮ್ಮದೇ ಆದ ಗುರುತುಗಳನ್ನು, ಹೆಮ್ಮೆಯ ಪ್ರತೀಕಗಳನ್ನು ಹೊಂದಿರುವುದರಲ್ಲಿ ತಪ್ಪೇನಿದೆ? ಆದರೆ ಈ ಕೆಲಸ ಇದುವರೆಗೆ ಆಗಿಲ್ಲ ಎಂದರೆ ಬಹಳ ಮಂದಿಗೆ ಆಶ್ಚರ್ಯವಾಗಬಹುದು. ಹಾಗಿದ್ದರೆ ನಾವು ಬಳಸುತ್ತಿರುವ ಹರಿಶಿನ-ಕೆಂಪು ಬಣ್ಣದ ಧ್ವಜಕ್ಕೆ ಅಧಿಕೃತ ಮಾನ್ಯತೆಯಿಲ್ಲವೇ? ಯಾಕೆ ಅದನ್ನು ಕೊಡಲಾಗಿಲ್ಲ ಎಂಬ ಪ್ರಶ್ನೆಗಳೂ ಉದ್ಭವವಾಗಬಹುದು. ಇದಕ್ಕೆ ನಮ್ಮ ಧ್ವಜದ ಇತಿಹಾಸವನ್ನೊಮ್ಮೆ ಅವಲೋಕಿಸಿದರೆ ಒಂದಷ್ಟು ಉತ್ತರಗಳು ಸಿಗಬಹುದು.
ಕನ್ನಡಕ್ಕೆ, ಕರ್ನಾಟಕಕ್ಕೆ ಒಂದು ಧ್ವಜವನ್ನು ರೂಪಿಸಿಕೊಟ್ಟಿದ್ದು ಕರ್ನಾಟಕ ಸರ್ಕಾರವಲ್ಲ. ಸರ್ಕಾರ ನೇಮಿಸಿದ ಅಧಿಕಾರಿಗಳ ಸಮಿತಿಯೂ ಅಲ್ಲ, ಸರ್ಕಾರದ ಯಾವುದೇ ಇಲಾಖೆಯೂ ಅಲ್ಲ. ಕರ್ನಾಟಕ ಸರ್ಕಾರ ಇವತ್ತಿನವರೆಗೂ ನಮ್ಮೆ ಹೆಮ್ಮೆಯ ಹಳದಿ-ಕೆಂಪು ಬಾವುಟವನ್ನು ಅಧಿಕೃತ ನಾಡಧ್ವಜ ಎಂದು ಒಪ್ಪಿಕೊಂಡೇ ಇಲ್ಲ, ಅಧಿಕೃತ ಮಾನ್ಯತೆಯನ್ನೂ ನೀಡಿಲ್ಲ. ಕನ್ನಡ ಧ್ವಜ ನೀಡಿದ್ದು ಕನ್ನಡ ಚಳವಳಿಗಾರರು.

೧೯೬೬ರವರೆಗೆ ಕನ್ನಡಕ್ಕೊಂದು ನಿರ್ದಿಷ್ಟ ಬಾವುಟವೇ ಇರಲಿಲ್ಲ. ಕೆಲವರು ಭುವನೇಶ್ವರಿ ಚಿತ್ರವಿದ್ದ ಕೇಸರಿ ಬಣ್ಣದ ಬಾವುಟವನ್ನು ಬಳಸುತ್ತಿದ್ದರಾದರೂ ಅದನ್ನು ಒಪ್ಪಿಕೊಳ್ಳಲು ಹೆಚ್ಚುಮಂದಿ ತಯಾರಿರಲಿಲ್ಲ. ಕೇಸರಿ ಬಣ್ಣ ನಿರ್ದಿಷ್ಟ ಧಾರ್ಮಿಕತೆಯನ್ನು ಸಂಕೇತಿಸುವುದರಿಂದ ಅದು ಬೇಡ ಎಂಬುದು ಬಹಳಷ್ಟು ಮಂದಿಯ ಅಭಿಪ್ರಾಯವಾಗಿತ್ತು.
ಅರವತ್ತರ ದಶಕ ಕನ್ನಡ ಚಳವಳಿ ಮೊಳಕೆಯೊಡೆದ ಕಾಲಘಟ್ಟ. ಆಗ ಬೆಂಗಳೂರಿನಲ್ಲಿ ವಲಸಿಗ ತಮಿಳರ ಆಟಾಟೋಪಗಳು ಮಿತಿಮೀರಿದ್ದವು. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಅಬ್ಬರ ನಡೆಯುತ್ತಿತ್ತು. ಭಾಷಾ ದುರಭಿಮಾನಿ ತಮಿಳರು ಡಿಎಂಕೆ ಬಾವುಟವನ್ನೇ (ಕಪ್ಪು-ಕೆಂಪು ಬಣ್ಣ) ತಮಿಳು ಬಾವುಟದಂತೆ ಬಳಸುತ್ತಿದ್ದರು. ಕನ್ನಡಿಗರನ್ನು ಕೆಣಕಲೆಂದೇ ಎತ್ತರದ ಜಾಗದಲ್ಲಿ ದೊಡ್ಡ ದೊಡ್ಡ ಧ್ವಜಸ್ಥಂಭಗಳನ್ನು ನಿರ್ಮಿಸಿ ಡಿಎಂಕೆ ಬಾವುಟ ಏರಿಸುತ್ತಿದ್ದರು. ಬೆಂಗಳೂರು ಮಹಾನಗರಪಾಲಿಕೆಗೆ ಡಿಎಂಕೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ಆಯ್ಕೆಯಾಗಿ ಬರುತ್ತಿದ್ದರು. ಕನ್ನಡಿಗರ ಮೇಲೆ ಪ್ರತಿನಿತ್ಯ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿದ್ದವು.

ಇಂಥ ಸಂಕಷ್ಟದ ಕಾಲದಲ್ಲಿ ಮ.ರಾಮಮೂರ್ತಿ ವೀರಸೇನಾನಿಯಾಗಿ ಕನ್ನಡ ಚಳವಳಿಯ ನೇತೃತ್ವ ವಹಿಸಿಕೊಂಡಿದ್ದರು. ಹಲವೆಡೆ ಡಿಎಂಕೆ ಧ್ವಜಗಳನ್ನು ರಾಮಮೂರ್ತಿಯವರೇ ಮುಂದೆ ನಿಂತು ತೆರವುಗೊಳಿಸಿದರು. ಕನ್ನಡಕ್ಕೂ ಒಂದು ಧ್ವಜ ಬೇಕೇಬೇಕು ಎಂಬ ತೀರ್ಮಾನಕ್ಕೆ ರಾಮಮೂರ್ತಿ ಬಂದಿದ್ದರು. ಆಗ ಕ್ರಿಯಾಶೀಲರಾಗಿದ್ದ ಎಲ್ಲ ಕನ್ನಡ ಚಳವಳಿಗಾರರಿಗೂ ಕನ್ನಡ ಧ್ವಜದ ಅನಿವಾರ್ಯತೆ ಅರ್ಥವಾಗಿತ್ತು. ೧೯೬೬ರಲ್ಲಿ ಮೈಸೂರಿನ ಚೇಂಬರ್ ಆಫ್ ಕಾಮರ್‍ಸ್‌ನಲ್ಲಿ ಅಖಿಲ ಕರ್ನಾಟಕ ಕನ್ನಡಿಗರ ಬೃಹತ್ ಸಮಾವೇಶ ಮ.ರಾಮಮೂರ್ತಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕನ್ನಡ ಬಾವುಟ ರಚನೆಯೇ ಸಮಾವೇಶದ ಪ್ರಮುಖ ಉದ್ದೇಶವಾಗಿತ್ತು.

ತೆಳು ಹಳದಿ ಬಣ್ಣದ ಎರಡು ಮೂಲೆ ಇರುವ ಬಾವುಟ ರಚಿಸಲು ಸಮಾವೇಶ ತೀರ್ಮಾನಿಸಿತು. ಬಾವುಟದ ಮಧ್ಯಭಾಗದಲ್ಲಿ ಅಖಂಡ ಕರ್ನಾಟಕದ ಭೂಪಟವನ್ನು ಕೆಂಪುಬಣ್ಣದಲ್ಲಿ ಚಿತ್ರಿಸಲು ಮತ್ತು ಮಧ್ಯದಲ್ಲೆ ಬೆಳೆಯುತ್ತಿರುವ ಏಳು ಪೈರು (ತೆನೆಯ) ಚಿತ್ರ ಇರಿಸಲು ನಿರ್ಧರಿಸಲಾಯಿತು. ಹಳದಿ ಬಣ್ಣ ಶಾಂತಿಯ ಸಂಕೇತವಾಗಿ ಬಳಕೆಯಾಗಿತ್ತು. ಮಾತ್ರವಲ್ಲದೆ ಕರ್ನಾಟಕವು ಚಿನ್ನದ ನಾಡು ಎಂಬುದನ್ನು ಹೇಳುತ್ತಿತ್ತು. ಕೆಂಪು ಬಣ್ಣವು ಕರ್ನಾಟಕದಿಂದ ಹೊರಗೆ ಉಳಿದ ಕನ್ನಡ ಪ್ರದೇಶಗಳನ್ನು ಮತ್ತೆ ರಾಜ್ಯಕ್ಕೆ ಸೇರಿಸಿಕೊಳ್ಳುವ ಸಲುವಾಗಿ ನಡೆಸಬೇಕಾದ ಹೋರಾಟದ ಸಂಕೇತವಾಗಿತ್ತು. ಹಸಿರು ತೆನೆ ಸಮೃದ್ಧಿಯ ಸಂಕೇತವಾಗಿತ್ತು. ಏಳು ಸಾಮ್ರಾಜ್ಯಗಳು ಕನ್ನಡನಾಡನ್ನು ಆಳಿದ್ದರಿಂದ ಏಳು ತೆನೆಗಳನ್ನು ಇರಿಸಲಾಗಿತ್ತು. ಕನ್ನಡ ಪಕ್ಷ ಅಧಿಕಾರಕ್ಕೆ ಬಂದಮೇಲೆ ಎಂಟನೇ ತೆನೆಯನ್ನು ಇರಿಸುವ ನಿರ್ಧಾರವನ್ನೂ ಕೈಗೊಳ್ಳಲಾಗಿತ್ತು.
ಈ ಬಾವುಟ ಅಸ್ತಿತ್ವಕ್ಕೆ ಬಂದ ನಂತರ ನಾನಾರೀತಿಯ ಪ್ರತಿಕ್ರಿಯೆಗಳು ಬಂದವು. ಪ್ರಾಯೋಗಿಕವಾಗಿ ಈ ಬಾವುಟ ಬಳಕೆ ಕ್ಲಿಷ್ಟಕರವಾಗಿತ್ತು. ಸರಳವಾಗಿಲ್ಲದ ಬಾವುಟ ಜನರ ಬಳಕೆಗೆ ಬರುವುದಾದರೂ ಹೇಗೆ ಎಂಬುದು ಬಹಳಷ್ಟು ಮಂದಿಯ ಪ್ರಶ್ನೆಯಾಗಿತ್ತು. ಮ.ರಾಮಮೂರ್ತಿಯವರಿಗೂ ಇದು ಸಾರ್ವತ್ರಿಕ ಬಳಕೆಗೆ ಸರಿಹೊಂದದ ಬಾವುಟ ಎಂದು ಅನ್ನಿಸಿತ್ತು. ಈ ಕಾರಣದಿಂದ ಮತ್ತೊಂದು ಬಾವುಟವನ್ನು ರೂಪಿಸುವುದು ಅನಿವಾರ್ಯವಾಗಿತ್ತು. ಹೀಗಾಗಿ ಮ.ರಾಮಮೂರ್ತಿ ಮತ್ತೊಮ್ಮೆ ಎಲ್ಲ ಕನ್ನಡಚಳವಳಿಗಾರರ ಸಭೆ ಕರೆದರು.

ಅರಳಿಪೇಟೆಯಲ್ಲಿ ಮ.ರಾಮಮೂರ್ತಿಯವರು ಕರೆದ ಆ ಐತಿಹಾಸಿಕ ಸಭೆ ನಡೆದಿತ್ತು. ಸಭೆಯಲ್ಲಿ ಹಿರಿಯ ಕನ್ನಡ ಚಳವಳಿಗಾರರಾದ ಬೆ.ನಿ.ಈಶ್ವರಪ್ಪ, ಕ.ಮು.ಸಂಪಂಗಿ ರಾಮಯ್ಯ, ಮು.ಗೋವಿಂದರಾಜು ಮೊದಲಾದವರು ಭಾಗವಹಿಸಿದ್ದರು. ಸರಳವಾಗಿ ಹಳದಿ ಕೆಂಪು ಬಣ್ಣದ ನಾಲ್ಕುಮೂಲೆಗಳ ಬಾವುಟದ ಪ್ರಸ್ತಾಪವನ್ನು ರಾಮಮೂರ್ತಿಯವರು ಸಭೆಯ ಮುಂದಿಟ್ಟರು. ಸಭೆ ಸರ್ವಾನುಮತದಿಂದ ಈ ಪ್ರಸ್ತಾಪವನ್ನು ಅಂಗೀಕರಿಸಿತು. ಕಡೆಗೂ ಕನ್ನಡ ಬಾವುಟ ಮೈದಳೆದಿತ್ತು.
ಆದರೆ ಈ ಬಾವುಟವನ್ನೂ ಹಲವರು ಟೀಕಿಸಿದರು. ಹೊಸ ಬಾವುಟದ ವಿರುದ್ಧ ಕರಪತ್ರ ಚಳವಳಿಯನ್ನೂ ನಡೆಸಿದರು. ಆದರೆ ಕನ್ನಡದ ಜನತೆ ಮನಸಾರೆ ಈ ಬಾವುಟವನ್ನು ಒಪ್ಪಿಕೊಂಡಿದ್ದರು. ಹೀಗಾಗಿ ಮುಂದೆ ಗೊಂದಲಗಳಿಲ್ಲದಂತೆ ಈ ಬಾವುಟವೇ ಚಲಾವಣೆಗೆ ಬಂದಿತು.

ಹಾಗಿದ್ದರೆ ಕನ್ನಡ ಬಾವುಟ ಕರ್ನಾಟಕದ ಅಧಿಕೃತ ಬಾವುಟವೇ? ಅದಕ್ಕೆ ಸಾಂವಿಧಾನಿಕ ಮಾನ್ಯತೆ ಇದೆಯೇ? ಅದಕ್ಕೊಂದು ಧ್ವಜಸಂಹಿತೆಯೊಂದನ್ನು ರೂಪಿಸಲಾಗಿದೆಯೇ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡು ಹೊರಟರೆ ನಿರಾಶೆ ಮೂಡುತ್ತದೆ. ಇನ್ನೂ ಒಂದು ಖೇದವಾಗುವ ಸಂಗತಿಯೆಂದರೆ ಕನ್ನಡ ರಾಜ್ಯೋತ್ಸವವು ಹಿಂದೆ ಸರ್ಕಾರದ ಆಚರಣೆಯೂ ಆಗಿರಲಿಲ್ಲ. ಕರ್ನಾಟಕ ಏಕೀಕರಣಗೊಂಡಿದ್ದರೂ ಏಕೀಕರಣಗೊಂಡ ದಿನವನ್ನು ರಾಜ್ಯೋತ್ಸವವನ್ನಾಗಿ ಆಚರಿಸುವ ಪರಿಪಾಠವೇನೂ ಇರಲಿಲ್ಲ. ಇದನ್ನು ಗಮನಿಸಿದ ಮ.ರಾಮಮೂರ್ತಿಯವರೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ನಿರ್ಧಾರ ಮಾಡಿದರು. ೧೯೬೩ರ ನವೆಂಬರ್ ೧ರಂದು ರಾಜ್ಯೋತ್ಸವ ಆಚರಿಸಲು ನಿರ್ಧರಿಸಲಾಯಿತು. ಅಲ್ಲಿಯವರೆಗೆ ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವಗಳನ್ನಷ್ಟೇ ಸರ್ಕಾರ-ಸಂಘಸಂಸ್ಥೆಗಳು ಆಚರಿಸುತ್ತಿದ್ದವು. ಅದೇ ರೀತಿಯಲ್ಲಿ ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವ ಆಚರಿಸಲು ಮ.ರಾಮಮೂರ್ತಿ ಮತ್ತು ಕನ್ನಡ ಚಳವಳಿಗಾರರು ಅವತ್ತಿನಿಂದ ಇಂದಿನವರೆಗೆ ಲಕ್ಷಾಂತರ ಸಂಘಟನೆಗಳು ನಾಡಿನಾದ್ಯಂತ ಮತ್ತು ಜಗತ್ತಿನಾದ್ಯಂತ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿವೆ.
ನಂತರದ ವರ್ಷಗಳಲ್ಲಿ ನವೆಂಬರ್ ಒಂದರಂದು ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು ರಾಮಮೂರ್ತಿ ಸರ್ಕಾರಕ್ಕೆ ಬೇಡಿಕೆಯಿಟ್ಟರು. ಅದಕ್ಕಾಗಿ ಹೋರಾಟ ನಡೆಸಿದರು. ಅವರು ಸಂಪಾದಿಸುತ್ತಿದ್ದ ಕನ್ನಡ ಯುವಜನ ಪತ್ರಿಕೆಯಲ್ಲಿ ನಿರಂತರವಾಗಿ ಈ ಬಗ್ಗೆ ಬರೆದರು. ಸರ್ಕಾರ ಈ ಮನವಿಗೆ ಸ್ಪಂದಿಸದೇ ಇದ್ದ ನೇರವಾಗಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರನ್ನು ಟೀಕಿಸುವುದಕ್ಕೂ ಮ.ರಾಮಮೂರ್ತಿಯವರು ಹಿಂದೆ ಬೀಳಲಿಲ್ಲ. “ಕರ್ನಾಟಕದ ಶಿಲ್ಪಿಗಳೆಂದು ಕರೆಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರು ಕನ್ನಡದ ವಿಷಯದಲ್ಲಿ ಎಷ್ಟು ಅಭಿಮಾನಶೂನ್ಯರಾಗಿದ್ದರೆಂಬುದಕ್ಕೆ ರಾಜ್ಯೋತ್ಸವ ದಿನದಂದು ರಜಾ ಘೋಷಿಸದಿರುವುದೇ ಒಂದು ನಿದರ್ಶನವಾಗಿದೆ” ಎಂದು ಬಿರುನುಡಿಗಳನ್ನಾಡಿದ್ದರು.

ಕಡೆಗೂ ಸರ್ಕಾರ ಮಣಿಯಿತು. ಕನ್ನಡ ರಾಜ್ಯೋತ್ಸವದಂದು ರಜೆ ಘೋಷಣೆಯಾಯಿತು. ಸರ್ಕಾರವೇ ರಾಜ್ಯೋತ್ಸವ ಆಚರಣೆ ಆರಂಭಿಸಿತು. ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ರಾಷ್ಟ್ರಧ್ವಜವನ್ನಲ್ಲದೆ ಇತರೆ ಧ್ವಜವನ್ನು ಹಾರಿಸುವಂತಿಲ್ಲವಾದ್ದರಿಂದ ರಾಜ್ಯೋತ್ಸವದಂದು ರಾಷ್ಟ್ರಧ್ವಜಾರೋಹಣ ನಡೆಸಿ ನಂತರ ನಾಡಧ್ವಜ ಹಾರಿಸುವ ಪರಂಪರೆಯೊಂದು ಜಾರಿಗೆ ಬಂದಿತು.
ಕನ್ನಡದ ಹಳದಿ-ಕೆಂಪು ಬಣ್ಣವನ್ನು ಕನ್ನಡದ ಜನತೆ ಮನಪೂರ್ವಕವಾಗಿ ಒಪ್ಪಿಕೊಂಡರು. ಮ.ರಾಮಮೂರ್ತಿಯವರು ಕೊಟ್ಟ ಬಾವುಟವನ್ನು ಕನ್ನಡದ ಜನತೆಗೆ ತಲುಪಿಸುವ ಕೆಲಸವನ್ನು ಕನ್ನಡ ಚಳವಳಿಗಾರರು ನಡೆಸುತ್ತಲೇ ಬಂದರು. ಕರ್ನಾಟಕ ರಕ್ಷಣಾ ವೇದಿಕೆ ಆರಂಭಗೊಂಡ ನಂತರ ನಾವೂ ಸಹ ಕನ್ನಡದ ಬಾವುಟವನ್ನು ನಾವು ಬೀದರಿನಿಂದ ಹಿಡಿದು ಚಾಮರಾಜನಗರದವರೆಗೆ ಕೊಂಡೊಯ್ದೆವು. ಹಳದಿ-ಕೆಂಪು ಬಣ್ಣದ ಕನ್ನಡದ ಅಂಗವಸ್ತ್ರವನ್ನು (ಶಾಲು) ಮೊದಲು ಬಳಕೆಗೆ ತಂದಿದ್ದು ಕರ್ನಾಟಕ ರಕ್ಷಣಾ ವೇದಿಕೆ. ನಮ್ಮ ಲಕ್ಷಾಂತರ ಕಾರ್ಯಕರ್ತರು ಹೋರಾಟದ ಸಂದರ್ಭದಲ್ಲಿ ಇದೇ ಶಾಲನ್ನು ಬಳಸುತ್ತಾರೆ. ಕನ್ನಡ ಹೋರಾಟಕ್ಕೆ ಕೆಚ್ಚು ತುಂಬಿದ್ದು ಈ ಕನ್ನಡದಬಣ್ಣದ ಶಾಲು. ಕನ್ನಡ ದ್ರೋಹಿಗಳ ಎದೆ ನಡುಗಿಸುತ್ತಿರುವುದೂ ಇದೇ ಶಾಲು.

ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ ಎಂಬುದು ನಮ್ಮ ಘೋಷವಾಕ್ಯಗಳಲ್ಲಿ ಒಂದು. ಹಳದಿ ಬಣ್ಣ ನಮ್ಮ ವಿಶಾಲಹೃದಯದ ಸ್ನೇಹದ ಸಂಕೇತ. ಶಾಂತಿಯ ಸಂಕೇತ. ಆದರೆ ಸ್ನೇಹ-ಶಾಂತಿ ನಮ್ಮ ಹೇಡಿತನವಾಗಬಾರದು. ಕನ್ನಡಿಗರ ಆತ್ಮಾಭಿಮಾನ ಕೆರಳಿಸಿದರೆ ನಾವು ಸಮರಕ್ಕೆ, ಸಂಘರ್ಷಕ್ಕೂ ಸಿದ್ಧ. ಹೋರಾಟದ ಸಂಕೇತವಾಗಿ ಕೆಂಪು ಬಣ್ಣವಿದೆ.
ಈ ಹಿಂದೆ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ ರಾಜ್ಯೋತ್ಸವ ದಿನದಂದು ಕನ್ನಡ ಬಾವುಟ ಹಾರಿಸುವಂತಿಲ್ಲ ಎಂದು ಸರ್ಕಾರ ಆದೇಶವೊಂದನ್ನು ಹೊರಡಿಸಿದ್ದಾಗ ಇಡೀ ರಾಜ್ಯಾದ್ಯಂತ ಚಳವಳಿ ಸಂಘಟಿಸಿ, ಆ ಆದೇಶವನ್ನು ಹಿಂದಕ್ಕೆ ಪಡೆಯುವವರೆಗೆ ಆಂದೋಲನ ನಡೆಸಲಾಯಿತು. ನಂತರ ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ರಾಜ್ಯೋತ್ಸವದಂದು ಕಡ್ಡಾಯವಾಗಿ ಕನ್ನಡ ಧ್ವಜ ಹಾರಿಸುವಂತೆ ಆದೇಶ ಹೊರಡಿಸಿದ್ದರು. ಆದರೆ ಕನ್ನಡ ದ್ರೋಹಿಗಳು ಹೈಕೋರ್ಟ್‌ನಲ್ಲಿ ಸಲ್ಲಿಸಿದ ದಾವೆಯೊಂದರಿಂದಾಗಿ ಮುಂದೆ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರ ಕನ್ನಡ ಧ್ವಜಕ್ಕೆ ಯಾವ ಅಧಿಕೃತ ಮಾನ್ಯತೆಯೂ ಇಲ್ಲ ಎಂದು ಹೇಳುವುದರ ಜತೆಗೆ ಸದಾನಂದಗೌಡರ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ವಾಪಾಸು ಪಡೆಯಿತು.

ನ್ಯಾಯಾಲಯಗಳು ಇಂಥ ವಿಷಯಗಳಲ್ಲಿ ಮೂಗುತೂರಿಸುವುದು ಮೊದಲಿನಿಂದಲೂ ನಡೆದುಕೊಂಡೇ ಬಂದಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ಪರಿಣಾಮಕಾರಿಯಾದ ಕಾನೂನು ರೂಪಿಸಿ ಕನ್ನಡ ಧ್ಚಜಕ್ಕೆ ಅಧಿಕೃತ ಮಾನ್ಯತೆ ನೀಡುವುದರ ಜತೆಗೆ, ಧ್ವಜ ಸಂಹಿತೆಯನ್ನು ಜಾರಿಗೆ ತರಬೇಕಿದೆ. ಆ ಕೆಲಸ ಬೇಗ ಆಗಲಿ ಎಂದು ಆಶಿಸುವೆ.

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

Tuesday, 24 November 2015

ಕನ್ನಡ ಕ್ರೈಸ್ತರ ಕಣ್ಣೀರ ಕಥೆ ಕೇಳುತ್ತಿಲ್ಲವೇ ಮುಖ್ಯಮಂತ್ರಿಗಳೇ?

ಕಳೆದ ೨೦ ತಿಂಗಳಿಂದ ಆ ಮೂರು ಧರ್ಮಗುರುಗಳು ಜೈಲಿನಲ್ಲಿದ್ದಾರೆ. ಅವರ ನೋವಿನ ಧ್ವನಿ ಯಾರಿಗೂ ಕೇಳುತ್ತಿಲ್ಲ. ಕೇವಲ ಕನ್ನಡಕ್ಕಾಗಿ ಧ್ವನಿ ಎತ್ತಿದ್ದಕ್ಕಾಗಿ ಧರ್ಮಗುರುಗಳನ್ನು ಕೊಲೆ ಕೇಸಿನಲ್ಲಿ ಸಿಕ್ಕಿ ಹಾಕಿಸಲಾಗುತ್ತದೆ, ಅವರಿಗೆ ಯಾವ ಕಾರಣಕ್ಕೂ ಜಾಮೀನು ಸಿಗದಂತೆ ನೋಡಿಕೊಳ್ಳಲಾಗುತ್ತದೆ. ಒಂದು ಕೊಲೆ ಕೇಸಿನಲ್ಲಿ ತಮಗೆ ಯಾರು ವಿರೋಧಿಗಳೋ ಅವರನ್ನೆಲ್ಲ ಜೈಲಿಗೆ ಕಳುಹಿಸಿದರೆ ಅಲ್ಲಿಗೆ ಯುದ್ಧ ಗೆದ್ದಂತಲ್ಲವೇ? ಅದಕ್ಕೆ ಇದೇ ಕೊಲೆ ಕೇಸಿನ ಚಾರ್ಜ್‌ಶೀಟ್ ಸಲ್ಲಿಸುವಾಗ ತಮ್ಮ ವಿರುದ್ಧ ಪ್ರತಿಭಟಿಸಿದ ಮುಖ್ಯ ಧರ್ಮಾಧಿಕಾರಿಗಳು, ಚಳವಳಿ ಮುಖಂಡರನ್ನೆಲ್ಲ ಪ್ರಕರಣದಲ್ಲಿ ಸಿಲುಕಿಸಲಾಗುತ್ತದೆ. ಅಧಿಕಾರವೊಂದು ಕೈಯಲ್ಲಿದ್ದರೆ ಒಂದೇ ಏಟಿಗೆ ಎಷ್ಟೊಂದು ಹಕ್ಕಿ ಹೊಡೆದು ಎಸೆಯಬಹುದಲ್ಲವೇ? ಇದೆಂಥ ನೀಚ ಕುತಂತ್ರ?

ಮಾರ್ಚ್ ೩೧, ೨೦೧೩. ಅದು ಈಸ್ಟರ್ ಹಬ್ಬದ ದಿನ. ಯಶವಂತಪುರದ ಮೈಸೂರು ಲ್ಯಾಂಪ್ಸ್ ಬಳಿ ಇರುವ ಸೆಮಿನರಿಯ ರೆಕ್ಟರ್ ಕೆ.ಜೆ.ಥಾಮಸ್ ಅವರ ಕೊಲೆ ನಡೆಯುತ್ತದೆ. ರೆ. ಕೆ.ಜೆ.ಥಾಮಸ್ ಮೂಲತಃ ಮಲೆಯಾಳಿ. ಆದರೂ ಕನ್ನಡ ದ್ವೇಷಿಯೇನಲ್ಲ. ಸೆಮಿನರಿಯಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಅವಕಾಶ ನೀಡಿದವರು. ಕನ್ನಡ ಕ್ರೈಸ್ತರಿಗೂ ಅವರಿಗೂ ಯಾವುದೇ ಜಗಳವಿರಲಿಲ್ಲ, ಮನಸ್ತಾಪವಿರಲಿಲ್ಲ. ಪೊಲೀಸರು ಈ ಕೊಲೆ ಕೇಸಿನ ತನಿಖೆ ಆರಂಭಿಸಿದರು. ಹನ್ನೊಂದು ತಿಂಗಳಾಗುತ್ತ ಬಂದರೂ ಆರೋಪಿಗಳ ಬಂಧನವಾಗಿರಲಿಲ್ಲ. ಆದರೆ ಪೊಲೀಸರು ತನಿಖೆಯ ಜಾಡನ್ನು ಸರಿಯಾಗಿ ಗ್ರಹಿಸಿದ್ದರು ಮತ್ತು ಇನ್ನೇನು ಅದನ್ನು ಬಗೆಹರಿಸುವ ಹಂತದಲ್ಲಿದ್ದರು.

ಆಗ ಕೊಂಕಣಿ ಕ್ರೈಸ್ತರ ಸಮಾವೇಶವೊಂದು ಬೆಂಗಳೂರಿನಲ್ಲಿ ನಡೆಯಿತು. ಮುಖ್ಯಮಂತ್ರಿಗಳು ಭಾಗವಹಿಸಿದ್ದ ಸಮಾವೇಶವದು. ಬಿಷಪ್ ಬರ್ನಾಡ್ ಮೊರಾಸ್ ಈ ಕೊಲೆ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದರು. ಹನ್ನೊಂದು ತಿಂಗಳಾದರೂ ಕೊಲೆ ಆರೋಪಿಗಳನ್ನು ಬಂಧಿಸಲಾಗಿಲ್ಲ, ಇನ್ನು ಎರಡು ತಿಂಗಳೊಳಗೆ ಆರೋಪಿಗಳನ್ನು ಬಂಧಿಸಬೇಕು ಎಂದು ಎಚ್ಚರಿಕೆ ನೀಡಿದರು.

ಅದಾದ ನಂತರ ನಾಟಕೀಯವಾದ ವಿದ್ಯಮಾನಗಳು ನಡೆಯುತ್ತವೆ. ಕೊಂಕಣಿ ಕ್ರಿಶ್ಚಿಯನ್ ಆಗಿರುವ ನಿವೃತ್ತ ಡಿಸಿಪಿ ವಿಕ್ಟರ್ ಡಿಸೋಜ ಅವರನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಿಸಿ ಕೊಲೆ ಪ್ರಕರಣದ ತನಿಖೆಯನ್ನು ಅವರಿಗೆ ವಹಿಸಲಾಗುತ್ತದೆ. ಡಿಸೋಜಾ ಅಧಿಕಾರ ಸ್ವೀಕಾರ ಮಾಡಿದ ಕೂಡಲೇ ಕನ್ನಡ ಕ್ರೈಸ್ತರ ಪರವಾಗಿ ಹೋರಾಟದಲ್ಲಿ ನಿರತರಾಗಿದ್ದ ಫಾ. ಪ್ಯಾಟ್ರಿಕ್, ಫಾ. ಪೀಟರ್ ಮತ್ತು ಫಾ. ಇಲಿಯಾಜ್ ಅವರುಗಳನ್ನು ಬಂಧಿಸಿ ಜೈಲಿಗೆ ತಳ್ಳುತ್ತಾರೆ.

ಮೂವರು ಧರ್ಮಗುರುಗಳು ಈಗ ಜೈಲಿನಲ್ಲಿದ್ದಾರೆ. ಕಳೆದ ಇಪ್ಪತ್ತು ತಿಂಗಳಿನಿಂದ ಅವರಿಗೆ ಜಾಮೀನು ಸಹ ಸಿಕ್ಕಿಲ್ಲ, ಅವರ ಜತೆಗೆ ಇನ್ನೂ ನಾಲ್ಕು ಮಂದಿಯನ್ನು ಇದೇ ಕೇಸಿನಲ್ಲಿ ಹೆಸರಿಸಲಾಗಿದೆ. ಫಾ. ಅಯ್ಯಂತಪ್ಪ, ಫಾ.ಥಾಮಸ್, ಫಾ. ಚೆಸರಾ, ಫಾ.ಅಂತೋಣಿ ಹಾಗು ಕನ್ನಡ ಕ್ರೈಸ್ತರ ಹೋರಾಟದ ದೊಡ್ಡ ಶಕ್ತಿಯಾಗಿರುವ ರಫಾಯಿಲ್ ರಾಜ್ ಅವರುಗಳನ್ನು ಜೈಲಿಗೆ ತಳ್ಳಲು ಇಡೀ ವ್ಯವಸ್ಥೆ ತುದಿಗಾಲಲ್ಲಿ ನಿಂತಿದೆ.

ರೆ. ಕೆ.ಜೆ.ಥಾಮಸ್ ಯಾಕೆ ಕೊಲೆಯಾದರು? ಈ ಕೊಲೆ ಯಾರಿಗೆ ಹೇಗೆಲ್ಲ ಬಳಕೆಯಾಯಿತು? ಪೊಲೀಸರು ಯಾಕೆ ಕನ್ನಡ ಕ್ರೈಸ್ತರ ಪರವಾದ ಹೋರಾಟದಲ್ಲಿ ಇರುವವರನ್ನೆಲ್ಲ ಜೈಲಿಗೆ ತಳ್ಳುತ್ತಿದ್ದಾರೆ? ವಿಕ್ಟರ್ ಡಿಸೋಜಾ ಎಂಬ ತನಿಖಾಧಿಕಾರಿಗಳೂ ಆರ್ಚ್ ಬಿಷಪ್ ಬರ್ನಾಡ್ ಮೊರಾಸ್ ಅವರಿಗೂ ಏನು ಸಂಬಂಧ?

ಇದೆಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಕನ್ನಡ ಕ್ರೈಸ್ತರ ನಲವತ್ತು ವರ್ಷಗಳ ಹೋರಾಟವನ್ನು ಒಮ್ಮೆ ಅವಲೋಕಿಸಬೇಕು. ವೈದಿಕ ಧರ್ಮದಲ್ಲಿ ಸಂಸ್ಕೃತ ಹೇಗೆ ಆರಾಧನೆಯ ಭಾಷೆಯಾಗಿದೆಯೋ ಹಾಗೆ ಕ್ರೈಸ್ತರಿಗೆ ಪೂಜಾವಿಧಿವಿಧಾನಗಳನ್ನು ನಡೆಸಲು ಬಳಸುವ ಭಾಷೆಯಾಗಿದ್ದು ಲ್ಯಾಟಿನ್. ಸಂಸ್ಕೃತ ಹೇಗೆ ಬಹುತೇಕ ಹಿಂದೂಗಳಿಗೆ ಅರ್ಥವಾಗುವುದಿಲ್ಲವೋ ಹಾಗೆ ಲ್ಯಾಟಿನ್ ಸಹ ಇಟಲಿ, ಅಮೆರಿಕ ದೇಶಗಳನ್ನು ಹೊರತುಪಡಿಸಿ ಜಗತ್ತಿನ ಇನ್ಯಾವ ಭಾಗದ ಕ್ರಿಶ್ಚಿಯನ್ನರಿಗೂ ಅರ್ಥವಾಗುತ್ತಿರಲಿಲ್ಲ. ಹೀಗಾಗಿ ೧೯೬೨ರಲ್ಲಿ ರೋಮ್‌ನಲ್ಲಿ ಪೋಪ್ ಅವರ ನೇತೃತ್ವದಲ್ಲಿ ಸಭೆ ಸೇರಿದ ಸುಮಾರು ೨೦೦೦ ಧರ್ಮಾಧ್ಯಕ್ಷರು ಇನ್ನುಮುಂದೆ ಆಯಾ ಭಾಗದ ಸ್ಥಳೀಯ ಭಾಷೆಗಳಲ್ಲೇ ಪ್ರಾರ್ಥನೆ, ಪೂಜಾವಿಧಿವಿಧಾನ ಮತ್ತು ಚರ್ಚುಗಳ ಆಡಳಿತ ನಡೆಯತಕ್ಕದ್ದು ಎಂಬ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ.

ಇದಾದ ನಂತರ ನ್ಯಾಯಯುತವಾಗಿ ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರಿನ ಚರ್ಚುಗಳಲ್ಲಿ ಕನ್ನಡವೇ ಪೂಜೆಯ ಭಾಷೆಯಾಗಬೇಕಿತ್ತು. ಆದರೆ ಆಗ ಇಲ್ಲಿದ್ದ ಬಿಷಪ್ ರೋಮ್‌ಗೆ ಒಂದು ಪತ್ರ ಬರೆದು, ಬೆಂಗಳೂರು ತಮಿಳುನಾಡಿನ ಭಾಗವಾಗಿರುವುದರಿಂದ ಇಲ್ಲಿ ತಮಿಳು ಭಾಷೆಯಲ್ಲೇ ಪ್ರಾರ್ಥನೆ, ಆಡಳಿತ ನಡೆಯುತ್ತದೆ ಎಂದು ತಿಳಿಸಿದರು. ಇದು ಗೊತ್ತಾಗುತ್ತಿದ್ದಂತೆ ಕನ್ನಡ ಕ್ರೈಸ್ತ ಧರ್ಮಗುರುಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು. ರೋಮ್‌ಗೆ ತಾವೂ ಸಹ ಪತ್ರಗಳನ್ನು ಬರೆದು ಬಿಷಪ್ ಅವರು ಸುಳ್ಳು ಮಾಹಿತಿ ನೀಡುತ್ತಿದ್ದಾರೆ, ಬೆಂಗಳೂರು ಕರ್ನಾಟಕದ ರಾಜಧಾನಿ. ಇಲ್ಲಿ ಕನ್ನಡವೇ ಆಡಳಿತ ಭಾಷೆ, ಜನಭಾಷೆ. ಬೆಂಗಳೂರು ತಮಿಳುನಾಡಿನ ಭಾಗವಲ್ಲ. ಇಲ್ಲಿನ ಬಿಷಪ್ ಅವರಿಗೆ ಕನ್ನಡದಲೇ ಆಡಳಿತ ಮತ್ತು ಪೂಜಾವಿಧಿವಿಧಾನ ನಡೆಸಲು ಆದೇಶ ನೀಡಬೇಕು ಎಂದು ಕನ್ನಡ ಕ್ರೈಸ್ತ ಧರ್ಮಗುರುಗಳು ಮನವಿ ಮಾಡುತ್ತಾರೆ.
ಆದರೆ ತಮಿಳುನಾಡು, ಕೇರಳ, ಪಾಂಡಿಚೇರಿ ಮೂಲದ ಧರ್ಮಾಧಿಕಾರಿಗಳು ಕನ್ನಡವನ್ನು ಬಳಸುವುದಕ್ಕೆ ಅವಕಾಶ ನೀಡುವುದಿಲ್ಲ. ಈ ಸಂಬಂಧ ರೋಮ್‌ನಿಂದಲೇ ನೇಮಿಸಲ್ಪಟ್ಟ ಬಿಷಪ್‌ಗಳ ಒಂದು ಸಮಿತಿ ಬೆಂಗಳೂರಿಗೆ ಭೇಟಿ ನೀಡಿ, ಅಧ್ಯಯನ ನಡೆಸಿ ಬೆಂಗಳೂರಿನಲ್ಲಿ ಕನ್ನಡವನ್ನೇ ಬಳಸಬೇಕು ಎಂದು ವರದಿ ನೀಡುತ್ತದೆ. ಆದರೆ ಒಬ್ಬರಾದ ಮೇಲೆ ಒಬ್ಬರಂತೆ ಬಂದ ಐದು ಮಂದಿ ಬಿಷಪ್‌ಗಳೂ ಕನ್ನಡದ ಆಡಳಿತವನ್ನು ತರಲು ನಿರಾಕರಿಸಿ, ತಮ್ಮ ಅಧಿಕಾರವನ್ನು ತ್ಯಜಿಸಿ ಹೊರಡುತ್ತಾರೆ.

೧೯೭೭ರಲ್ಲಿ ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತ ಸಂಘ ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡುತ್ತದೆ. ಕನ್ನಡ ಕ್ರೈಸ್ತರೆಲ್ಲರೂ ಒಂದಾಗಿ ಹೋರಾಟ ಆರಂಭಿಸುತ್ತಾರೆ. ೧೯೯೫ರಲ್ಲಿ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಕನ್ನಡ ಕ್ರೈಸ್ತರು ಬೆಂಗಳೂರಿನಲ್ಲಿ ಬೃಹತ್ ರ್‍ಯಾಲಿ ನಡೆಸಿ ಕನ್ನಡದಲ್ಲಿ ಪ್ರಾರ್ಥನೆಗಾಗಿ ತಮ್ಮ ಹಕ್ಕೊತ್ತಾಯವನ್ನು ಮಂಡಿಸುತ್ತಾರೆ.  ಗೋಕಾಕ್ ಚಳವಳಿ ಸಂದರ್ಭದಲ್ಲಿ ನಡೆದ ಈ ಚಳವಳಿ ಒಂದು ರೀತಿಯಲ್ಲಿ ಗೋಕಾಕ್ ಚಳವಳಿಗೂ ದೊಡ್ಡ ಸ್ಫೂರ್ತಿಯನ್ನು ನೀಡಿತ್ತು.

ಇತ್ತೀಚಿಗೆ ಬಂದ ಬಿಷಪ್ ಬರ್ನಾಡ್ ಮೊರಾಸ್ ಕನ್ನಡ ಕ್ರೈಸ್ತರ ಅಹವಾಲುಗಳನ್ನು ಕೇಳಿ, ತಮ್ಮ ಅಧಿಕಾರವಾಧಿಯಲ್ಲಿ ಕನ್ನಡವನ್ನೇ ಬಳಸಲು ತೀರ್ಮಾನಿಸುವುದಾಗಿ ಹೇಳಿದ್ದಲ್ಲದೆ, ಕನ್ನಡ ಕ್ರೈಸ್ತರ ಸಹಕಾರವನ್ನೂ ಕೋರಿದ್ದರು. ಕನ್ನಡ ಕ್ರೈಸ್ತರು ಅದನ್ನು ನಂಬಿಕೊಂಡು ಬರ್ನಾಡ್ ಮೊರಾಸ್ ಅವರಿಗೆ ಬೆಂಬಲ ನೀಡುತ್ತಿದ್ದರು.

ಇನ್ನೇನು ಕನ್ನಡ ಕ್ರೈಸ್ತರ ಎಲ್ಲ ಬೇಡಿಕೆಗಳೂ ಈಡೇರುತ್ತವೆ, ಬೆಂಗಳೂರಿನ ಎಲ್ಲ ಚರ್ಚುಗಳಲ್ಲಿ ಇನ್ನು ಕನ್ನಡವೇ ಮೊಳಗುತ್ತದೆ ಎಂದು ಕನ್ನಡ ಕ್ರೈಸ್ತರು ಕನಸು ಕಟ್ಟುತ್ತಿದ್ದರು. ಅಷ್ಟರಲ್ಲಿ ರೆ. ಕೆ.ಜೆ.ಥಾಮಸ್ ಕೊಲೆಯಾಗಿ ಹೋಗುತ್ತಾರೆ. ಆ ಕೊಲೆ ಕೇಸಿನಲ್ಲಿ ಹುಡುಹುಡುಕಿ ಕನ್ನಡ ಕ್ರೈಸ್ತರ ಪರವಾದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಧರ್ಮಾಧಿಕಾರಿಗಳನ್ನೆಲ್ಲ ಫಿಕ್ಸ್ ಮಾಡಲಾಗುತ್ತದೆ. ಕನ್ನಡಕ್ಕಾಗಿ ಹೋರಾಡುತ್ತಿದ್ದ ಕನ್ನಡ ಕ್ರೈಸ್ತರು ಈಗ ನಮ್ಮ ನಿರಪರಾಧಿ ಧರ್ಮಗುರುಗಳನ್ನು ಬಿಡುಗಡೆ ಮಾಡಿ ಎಂದು ಕಣ್ಣೀರಿಡುತ್ತಿದ್ದಾರೆ. ಆದರೆ ಅವರ ಗೋಳು ಯಾರಿಗೂ ಕೇಳುತ್ತಿಲ್ಲ.

ಕಳೆದ ಹದಿನೆಂಟು ವರ್ಷಗಳಿಂದ ನಾನು ಈ ಕನ್ನಡ ಕ್ರೈಸ್ತರ ಹೋರಾಟದಲ್ಲಿ ಪಾಲ್ಗೊಂಡಿದ್ದೇವೆ. ಅವರ ದುಃಖ ದುಮ್ಮಾನಗಳು ನನಗೆ ಚೆನ್ನಾಗಿ ಗೊತ್ತು. ಅವರದು ಸಾತ್ವಿಕ ಮಾರ್ಗದ ಹೋರಾಟ. ಅವರು ಕೊಲೆಗಡುಕರಾಗಲು ಸಾಧ್ಯವೇ ಇಲ್ಲ. ಸಾವಿರಾರು ಕನ್ನಡ ಕ್ರೈಸ್ತರು ಇಂದು ದಿನನಿತ್ಯ ಕಣ್ಣೀರು ಹಾಕುವ ಘೋರ ದುರಂತವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಆದರೆ ‘ಒಲೆ ಹತ್ತಿ ಉರಿದರೆ ನಿಲಬಹುದು, ಧರೆ ಹತ್ತಿ ಉರಿದರೆ ನಿಲಬಹುದೆ?’ ಎಂಬ ಶರಣರ ಮಾತಿನಂತೆ ಕನ್ನಡ ಕ್ರೈಸ್ತರು ನಿಂತ ನೆಲವೇ ಕುಸಿದುಹೋಗುತ್ತಿದೆ.

ಇದೇ ಕನ್ನಡ ಕ್ರೈಸ್ತರ ಪರವಾಗಿ ನಿಂತ ಕಾರಣಕ್ಕೆ ಆರ್‌ಟಿಐ ಕಾರ್ಯಕರ್ತನೆಂದು ಹೇಳಿಕೊಳ್ಳುವ ಬ್ಲಾಕ್ ಮೇಲರ್ ಒಬ್ಬಾತನನ್ನು ನನ್ನ ಮೇಲೆ ಛೂ ಬಿಟ್ಟು ಮಾಧ್ಯಮಗಳಲ್ಲಿ ಹೇಳಿಕೆ ಕೊಡಿಸಲಾಯಿತು. ನನ್ನನ್ನು ಮಾತ್ರವಲ್ಲ ಕನ್ನಡ ಚಳವಳಿಗಾರರನ್ನೆಲ್ಲ ಗುರಿಯಾಗಿರಿಸಿಕೊಂಡು ಅವರ ತೇಜೋವಧೆ ಮಾಡುವ ಪ್ರಯತ್ನಗಳು ನಡೆದವು.
ಹಿಂದೆ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಮತ್ತು ಬಿಷಪ್ ಬರ್ನಾಡ್ ಮೊರಾಸ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲೂ ನಾನು ಕನ್ನಡ ಕ್ರೈಸ್ತರ ಮೇಲೆ ಆಗುತ್ತಿರುವ ಶೋಷಣೆ, ದಬ್ಬಾಳಿಕೆ ನಿಲ್ಲಬೇಕು ಎಂದು ಒತ್ತಾಯಿಸಿದ್ದೆ. ಈಗಿನ ಗೃಹ ಸಚಿವರಾದ ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಕನ್ನಡ ಕ್ರೈಸ್ತರಿಗೆ ನ್ಯಾಯ ಒದಗಿಸಲು ಮನವಿ ಮಾಡಿದ್ದೆ. ಆದರೆ ಇದು ಬೇಲಿಯೇ ಎದ್ದು ಹೊಲ ಮೇಯುವ ಕಾಲ. ನ್ಯಾಯ ಎಲ್ಲಿ ಸಿಕ್ಕೀತು?

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಶೋಷಿತ ವರ್ಗಗಳ ಕುರಿತು ಕಾಳಜಿಯುಳ್ಳವರು. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವವರು. ಅವರಿಗಾದರೂ ಕನ್ನಡ ಕ್ರೈಸ್ತರ ಗೋಳಿನ ಕಥೆ ಮನ ಕಲಕುವುದಿಲ್ಲವೇ? ಹಣಬಲ, ತೋಳ್ಬಲ, ಅಧಿಕಾರ ಬಲವಿದ್ದರೆ ಯಾರನ್ನು ಬೇಕಾದರೂ ತುಳಿದುಹಾಕಬಹುದು ಎಂದರೆ ಇದನ್ನು ನಾಗರಿಕ ಸಮಾಜ ಎಂದು ನಾವು ಯಾಕೆ ಕರೆಯಬೇಕು?

ರೆ. ಕೆ.ಜೆ.ಥಾಮಸ್ ಕೊಲೆ ಕೇಸನ್ನು ಸಿಬಿಐಗೆ ವಹಿಸಿ, ನ್ಯಾಯಯುತವಾದ ತನಿಖೆ ನಡೆಯಲಿ ಎಂದು ಕನ್ನಡ ಕ್ರೈಸ್ತರೇ ಕಳೆದ ಇಪ್ಪತ್ತು ತಿಂಗಳಿನಿಂದ ಆಗ್ರಹಿಸುತ್ತ ಬಂದಿದ್ದಾರೆ. ಆದರೆ ಓರ್ವ ಧರ್ಮಾಧಿಕಾರಿಯ ನೆಂಟನಾಗಿರುವ ನಿವೃತ್ತ ಅಧಿಕಾರಿ ಕೊಂಕಣಿ ಭಾಷಿಕ ವಿಕ್ಟರ್ ಡಿಸೋಜಾ ಅವರನ್ನೇ ತನಿಖಾಧಿಕಾರಿನ್ನಾಗಿ ನೇಮಿಸಿದ್ದು ಯಾಕೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಹನ್ನೊಂದು ತಿಂಗಳಲ್ಲಿ ಬಗೆಹರಿಯದ ಕೊಲೆ ಪ್ರಕರಣವನ್ನು ಅಧಿಕಾರ ವಹಿಸಿಕೊಂಡ ತಕ್ಷಣ ವಿಕ್ಟರ್ ಡಿಸೋಜಾ ಹೇಗೆ ಬಗೆಹರಿಸಿದರು? ಈ ಕೇಸಿನಲ್ಲಿ ಕನ್ನಡ ಕ್ರೈಸ್ತರ ಪರವಾಗಿ ಹೋರಾಡುತ್ತಿದ್ದವರನ್ನೆಲ್ಲ ಫಿಕ್ಸ್ ಮಾಡಲು ಏನು ಕಾರಣ? ಇದರಲ್ಲಿ ಯಾರ ಕೈವಾಡವಿದೆ?

ಪ್ರಶ್ನೆಗಳು ನೂರಾರು ಇವೆ. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಒಂದನ್ನು ನೆನಪಿಟ್ಟುಕೊಳ್ಳಬೇಕು. ಯಾರು ಎಷ್ಟೇ ಪ್ರಭಾವಿಗಳಾಗಿರಲಿ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಕೂಡದು. ನೀವು ಯಾರ ಕೈಗೊಂಬೆಯೂ ಆಗಬಾರದು. ನೀವು ಇಡೀ ಕರ್ನಾಟಕದ ಪ್ರತಿಯೊಬ್ಬ ಪ್ರಜೆ ಮುಖ್ಯಮಂತ್ರಿ ಎಂಬುದನ್ನು ಮರೆಯಬೇಡಿ. ಈಗಲಾದರೂ ನಿಮ್ಮ ಆತ್ಮಸಾಕ್ಷಿ ಜಾಗೃತಿಗೊಳ್ಳಲಿ. ಲಕ್ಷಾಂತರ ಕನ್ನಡ ಕ್ರೈಸ್ತರು ದಿನವೂ ಕಣ್ಣೀರಿಡುತ್ತಿದ್ದಾರೆ. ಅವರ ಕಣ್ಣೀರು ನಿಮ್ಮ ಸರ್ಕಾರಕ್ಕೆ ಎಂದಿಗೂ ಶೋಭೆ ತರದು. ಈಗಲಾದರೂ ಎಚ್ಚರಗೊಳ್ಳಿರಿ.

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ.

ಕಾರ್ನಾಡರ ಅವಿವೇಕ ಮತ್ತು ನಮ್ಮ ಸಂಕಟಗಳು...


ಗಿರೀಶ್ ರಘುನಾಥ್ ಕಾರ್ನಾಡ್ ಮತ್ತೊಮ್ಮೆ ವಿವಾದದ ಕಿಡಿ ಹೊತ್ತಿಸಿದ್ದಾರೆ. ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನರ ಹೆಸರಿಡಬೇಕಿತ್ತು ಎಂದು ರಾಜ್ಯ ಸರ್ಕಾರ ಆಯೋಜಿಸಿದ್ದ ಟಿಪ್ಪು ಜಯಂತಿ ಆಚರಣೆಯಲ್ಲಿ ಹೇಳುವ ಮೂಲಕ ಅನಗತ್ಯವಾಗಿ ರಾಜ್ಯದಲ್ಲಿ ಕಲಹದ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ. ತನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಕಾರ್ನಾಡ್ ಹೇಳಿಕೆ ನೀಡಿದ್ದಾರೆ. ಆದರೆ ಪ್ರಾಜ್ಞರೆನಿಸಿಕೊಂಡವರು ಇಂಥ ಹೇಳಿಕೆಗಳನ್ನು ನೀಡುವ ಮುನ್ನ ಹತ್ತು ಬಾರಿ ಯೋಚಿಸಬೇಕಲ್ಲವೇ?

ಕಾರ್ನಾಡರು ಮಾತನಾಡಿದ್ದನ್ನು ನಾನು ಟಿವಿಯಲ್ಲಿ ನೋಡಿದೆ. ನಾಡಪ್ರಭು ಕೆಂಪೇಗೌಡರ ಕುರಿತು ಅವರಿಗೆ ಅದೇನೋ ಒಂದು ಬಗೆಯ ಅಸಹನೆ ಇದ್ದಂತೆ ಅನಿಸಿತು. ಕೆಂಪೇಗೌಡರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿಲ್ಲ. ಹೀಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಟಿಪ್ಪು ಸುಲ್ತಾನರ ಹೆಸರೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡಬೇಕಿತ್ತು ಎಂದರು ಅವರು. ಕಾರ್ನಾಡ್ ಬಹುಭಾಷಾ ಪಂಡಿತರು. ಹಲವಾರು ದೇಶಗಳನ್ನು ಸುತ್ತಿ ಬಂದವರು. ದೇಶದಲ್ಲಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರುಗಳಲ್ಲೂ ವಿಮಾನ ನಿಲ್ದಾಣಗಳಿವೆ. ಅವರು ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಯಾವುದೇ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರರ ಹೆಸರೇ ಇಡಬೇಕು ಎಂಬ ಕಾನೂನೇನಾದರೂ ಇದೆಯೇ?

ಸಣ್ಣ ಮಕ್ಕಳಿಗೂ ಅರ್ಥವಾಗದ ವಿಷಯ ಕಾರ್ನಾಡರಿಗೇಕೆ ಅರ್ಥವಾಗಲಿಲ್ಲ. ಕೆಂಪೇಗೌಡರು ಬದುಕಿದ್ದ ಕಾಲಘಟ್ಟವಾದರೂ ಯಾವುದು? ೧೫೧೦ರಿಂದ ೧೫೬೯. ಈ ಸಮಯದಲ್ಲಿ ಯಾವ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿತ್ತು? ಇಷ್ಟು ಸಣ್ಣ ಸಾಮಾನ್ಯ ಜ್ಞಾನವೂ ಕಾರ್ನಾಡರಿಗೆ ಇಲ್ಲವಾಗಿ ಹೋಯಿತೆ? ಟಿಪ್ಪು ಸುಲ್ತಾನರು ಬದುಕಿದ್ದು ೧೭೫೦ರಿಂದ ೧೭೯೯ರವರೆಗೆ. ಇಬ್ಬರ ಕಾಲಘಟ್ಟವೂ ಬೇರೆ ಬೇರೆ. ಹೀಗಿರುವಾಗ ಇಬ್ಬರನ್ನೂ ಹೋಲಿಸಿ ಮಾತನಾಡುವ ಅಗತ್ಯವಾದರೂ ಏನಿತ್ತು?
ಅದರಲ್ಲೂ ಈ ವಿಷಯವನ್ನು ಗಿರೀಶ್ ಕಾರ್ನಾಡರು ಪ್ರಸ್ತಾಪಿಸಿದ ಸಮಯವಾದರೂ ಯಾವುದು? ಟಿಪ್ಪು ಸುಲ್ತಾನರ ಜಯಂತಿ ಆಚರಣೆ ವಿಷಯದಲ್ಲಿ ದೊಡ್ಡ ವಿವಾದವೇ ಎದ್ದು ಎಲ್ಲೆಡೆ ದ್ವೇಷದ ವಾತಾವರಣವೇ ಕಂಡು ಬಂದಿತ್ತು. ಟಿಪ್ಪು ಜಯಂತಿ ಸಂದರ್ಭದಲ್ಲೇ ಕೆಲ ಸಂಘಟನೆಗಳು ಬಂದ್, ಪ್ರತಿಭಟನೆ ಇತ್ಯಾದಿಗಳನ್ನು ಹಮ್ಮಿಕೊಂಡಿದ್ದರಿಂದ ಎಲ್ಲಿ ಯಾವ ಅನಾಹುತವಾಗುವುದೋ ಎಂಬ ಆತಂಕದ ಸನ್ನಿವೇಶ ನಿರ್ಮಾಣವಾಗಿತ್ತು. ಇದು ಕಾರ್ನಾಡ್ ಅಂತ ಹಿರಿಯರಿಗೆ ಗೊತ್ತಿರದ ವಿಷಯವೇನೂ ಅಲ್ಲ. ಇಷ್ಟೆಲ್ಲ ಗೊತ್ತಿದ್ದರೂ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಬೇಕಿತ್ತು ಎಂದು ಹೇಳುವ ಹುನ್ನಾರವಾದರೂ ಏನು? ಇದು ಎರಡು ಸಮುದಾಯಗಳನ್ನು ಪರಸ್ಪರ ಎತ್ತಿಕಟ್ಟುವ ಉದ್ದೇಶವೆಂದೇ ಭಾವಿಸಬೇಕಾಗುತ್ತದೆಯಲ್ಲವೇ?

ಇವತ್ತು ಇಡೀ ದೇಶದಲ್ಲಿ ಎಲ್ಲ ಮಹಾಪುರುಷರಿಗೂ ಜಾತಿಯ ಲೇಪನವನ್ನು ಅಂಟಿಸಲಾಗಿದೆ. ಒಂದೊಂದು ಸಮುದಾಯ ಒಬ್ಬೊಬ್ಬ ಮಹಾತ್ಮರನ್ನು ಗುತ್ತಿಗೆ ಹಿಡಿದುಕೊಂಡಿದೆ. ದಲಿತರಿಗೆ ಅಂಬೇಡ್ಕರ್, ಲಿಂಗಾಯಿತರಿಗೆ ಬಸವಣ್ಣ, ಒಕ್ಕಲಿಗರಿಗೆ ಕೆಂಪೇಗೌಡ, ಬ್ರಾಹ್ಮಣರಿಗೆ ಶಂಕರಾಚಾರ್ಯ, ಕುರುಬರಿಗೆ ಕನಕದಾಸ, ಬೇಡರಿಗೆ ವಾಲ್ಮೀಕಿ.. ಹೀಗೆ ಎಲ್ಲ ಮಹಾತ್ಮರನ್ನೂ ನಾವು ಜಾತಿಯಿಂದ ಕಟ್ಟಿಹಾಕಿದ್ದೇವೆ. ಇಂಥ ವಿಷಮ ಸನ್ನಿವೇಶದಲ್ಲಿ ಬದುಕುತ್ತಿರುವ ಸಂದರ್ಭದಲ್ಲಿ ಕಾರ್ನಾಡರಿಗೆ ತಮ್ಮ ಹೇಳಿಕೆ ಯಾವ ಸ್ವರೂಪ ಪಡೆಯುತ್ತದೆ ಎಂಬ ಅರಿವಿರಬೇಕಿತ್ತು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ಇಡಬೇಕು ಎಂಬ ಹೋರಾಟದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯೇ ಮುಂಚೂಣಿಯಲ್ಲಿ ಗುರುತಿಸಿಕೊಂಡಿತ್ತು. ಈ ಚಳವಳಿಯನ್ನು ಗುರಿ ತಲುಪುವವರೆಗೆ ಮುಂದುವರೆಸಿಕೊಂಡು ಹೋದ ಹೆಮ್ಮೆ ನಮ್ಮದು. ಇದೇ ರೀತಿ ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣಗಳಿಗೆ ಇತಿಹಾಸ ಪ್ರಸಿದ್ಧ ಕನ್ನಡದ ಹೆಮ್ಮೆಯ ದಿಗ್ಗಜರ ಹೆಸರಿಡಬೇಕು ಎಂಬ ಬೇಡಿಕೆಯನ್ನೂ ಕರ್ನಾಟಕ ರಕ್ಷಣಾ ವೇದಿಕೆ ಇಡುತ್ತಲೇ ಬಂದಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಸರಿಡುವ ವಿಷಯ ಬಂದಾಗ ಹಲವಾರು ಸಂಘಟನೆಗಳು ಹಲವಾರು ಹೆಸರುಗಳನ್ನು ಸೂಚಿಸಿದ್ದವು. ಡಾ. ಬಿ.ಆರ್. ಅಂಬೇಡ್ಕರ್, ಬಸವೇಶ್ವರ, ಸರ್.ಎಂ.ವಿಶ್ವೇಶ್ವರಯ್ಯ ಮತ್ತು ಟಿಪ್ಪು ಸುಲ್ತಾನರ ಹೆಸರುಗಳೂ ಕೇಳಿಬಂದಿದ್ದವು. ಈ ಕಾರಣಕ್ಕೆ ಬಸವಣ್ಣನವರನ್ನೂ ಅಂಬೇಡ್ಕರ್ ರವರನ್ನೂ ಕಾರ್ನಾಡರು ಹೋಲಿಸಿ ಮಾತನಾಡಲು ಸಾಧ್ಯವೇ? ಇಬ್ಬರಲ್ಲಿ ಯಾರು ಸೂಕ್ತ ಎಂದು ಅವರು ಸಾರ್ವಜನಿಕವಾಗಿ ಹೇಳಬಲ್ಲರೇ? ಹೇಳುವುದು ತರವೇ? ಒಬ್ಬೊಬ್ಬರು ಒಂದು ಕಾಲಘಟ್ಟದಲ್ಲಿ ಬದುಕಿರುತ್ತಾರೆ. ಒಂದೊಂದು ಬಗೆಯಲ್ಲಿ ಈ ಸಮಾಜವನ್ನು ಪೊರೆದಿರುತ್ತಾರೆ. ಒಮ್ಮೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ಇಟ್ಟ ನಂತರ ಆ ವಿಷಯದಲ್ಲಿ ಮಾತನಾಡಲು ಇನ್ನೇನಿದೆ? ಯಾಕಾಗಿ ಕಾರ್ನಾಡರು ತಮ್ಮ ಹಳಹಳಿಕೆಯನ್ನು ಪ್ರದರ್ಶಿಸಿದರು. ಟಿಪ್ಪು ಅಭಿಮಾನಿಗಳನೇಕರು ಚಪ್ಪಾಳೆ ಹೊಡೆಯುತ್ತಾರೆ ಎಂದೇ? ಹಾಗಿದ್ದರೆ ಕೆಂಪೇಗೌಡರ ಅಭಿಮಾನಿಗಳೇನು ಮಾಡಬೇಕು?

ನಾವು ಯಾರೂ ಟಿಪ್ಪು ಸುಲ್ತಾನರ ವಿರೋಧಿಗಳೇನಲ್ಲ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ಇಡಬೇಕು ಎಂದು ನಾವು ಚಳವಳಿ ನಡೆಸಿದ್ದಕ್ಕೆ ಒಂದು ಸ್ಪಷ್ಟ ಉದ್ದೇಶವಿತ್ತು. ಕೆಂಪೇಗೌಡರ ಇತಿಹಾಸ ಅರ್ಥ ಮಾಡಿಕೊಂಡವರಿಗೆ ನಮ್ಮ ಹೋರಾಟದ ಉದ್ದೇಶವೂ ಅರ್ಥವಾಗುತ್ತದೆ. ಈ ಹೋರಾಟದಲ್ಲಿ ಹಲವಾರು ಸಂಘಟನೆಗಳು ನಮ್ಮೊಂದಿಗೆ ಕೈ ಜೋಡಿಸಿದ್ದವು. ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆಯಂಥ ಮುಸ್ಲಿಂ ಸಂಘಟನೆಗಳೂ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿ ನಮ್ಮ ಜತೆ ಚಳವಳಿಯಲ್ಲಿ ಪಾಲ್ಗೊಂಡಿದ್ದವು. ಜಾತಿ, ಧರ್ಮವನ್ನು ಬದಿಗಿಟ್ಟು ಎಲ್ಲ ಸಮಾನಮನಸ್ಕರು ಈ ಚಳವಳಿಯಲ್ಲಿ ತೊಡಗಿಕೊಂಡಿದ್ದರು.

ಹಾಗೆ ನೋಡಿದರೇ ಕೆಂಪೇಗೌಡರದ್ದು ನಿಜವಾದ ಜಾತ್ಯತೀತ ವ್ಯಕ್ತಿತ್ವ.  ಆ ಕಾಲಘಟ್ಟದಲ್ಲಿ ಕುಲಕಸುಬುಗಳನ್ನು ನೆಚ್ಚಿಕೊಂಡಿದ್ದ ಎಲ್ಲ ಜಾತಿ, ಸಮುದಾಯದವರಿಗೆ ಒಂದೊಂದು ಪೇಟೆಗಳನ್ನು ಮಾಡಿದವರು ಕೆಂಪೇಗೌಡರು. ಒಟ್ಟು ಐವತ್ತಾಲ್ಕು ಪೇಟೆಗಳನ್ನು ಸೃಷ್ಟಿಸಿದ್ದ ಕೆಂಪೇಗೌಡರು ಎಲ್ಲ ಸಮುದಾಯದವರು ಗೌರವದಿಂದ ಸಹಬಾಳ್ವೆಯಿಂದ ಬದುಕುವ ವ್ಯವಸ್ಥೆ ಕಲ್ಪಿಸಿದ್ದರು.
ವಿಜಯನಗರ ಅರಸರ ಸಾಮಂತರಾಗಿದ್ದ ಕೆಂಪೇಗೌಡರು, ೧೫೩೭ರಲ್ಲಿ ಬೆಂಗಳೂರು ನಿರ್ಮಾಣ ಕಾರ್ಯವನ್ನು ಆರಂಭಿಸಿದರು.  ಮೂಲತಃ ಕೃಷಿಕ ಕುಟುಂಬದಿಂದ ಬಂದವರಾದ ಕೆಂಪೇಗೌಡರು ಹೊನ್ನಾರು ಕಟ್ಟುವ ಆಚರಣೆಯೊಂದಿಗೆ ರಾಜಧಾನಿಯ ನಿರ್ಮಾಣ ಕಾರ್ಯ ಆರಂಭಿಸಿದರು. ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪ್ರಮುಖ ಪ್ರವೇಶದ್ವಾರಗಳನ್ನು ನಿರ್ಮಿಸಲು ತೀರ್ಮಾನಿಸಿದರು. ಹೆಬ್ಬಾಗಿಲು ಈಗಿನ ವಿಕ್ಟೋರಿಯಾ ಆಸ್ಪತ್ರೆಯ ಬಳಿಯ ಕೋಟೆಯಲ್ಲಿತ್ತು. ರಾಜಧಾನಿಗೆ ನವದ್ವಾರಗಳಿರಬೇಕು, ಕೆರೆಗಳು ಸದಾ ಕಾಲ ನೀರಿನಿಂದ ತುಂಬಿರಬೇಕೆಂಬುದು ಗೌಡರ ಆಶಯವಾಗಿತ್ತು. ಹೀಗಾಗಿ ಪೂರ್ವದಲ್ಲಿ ಹಲಸೂರು ದ್ವಾರ, ಪಶ್ಚಿಮಕ್ಕೆ ಸೊಂಡೆಕೊಪ್ಪದ ದ್ವಾರ, ಉತ್ತರಕ್ಕೆ ಯಲಹಂಕದ ದ್ವಾರ, ದಕ್ಷಿಣಕ್ಕೆ ಆನೆಕಲ್ ದ್ವಾರಗಳನ್ನು ನಿರ್ಮಿಸಲಾಯಿತು. ವರ್ತೂರು, ಸರ್ಜಾಪುರ, ಕೆಂಗೇರಿ, ಯಶವಂತಪುರ, ಕಾನಕಾನಹಳ್ಳಿ (ಕನಕಪುರ)ಗಳಲ್ಲಿ ಕಿರು ದ್ವಾರಗಳನ್ನು ನಿರ್ಮಿಸಲಾಯಿತು. ಈಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವ ದೇವನಹಳ್ಳಿ ಭಾಗದಲ್ಲಿ ಕೆಂಪೇಗೌಡರು ಮದ್ದುಗುಂಡುಗಳ ದಾಸ್ತಾನು ಕೇಂದ್ರವನ್ನು ಇಟ್ಟುಕೊಂಡಿದ್ದರು. ಯಾವುದೇ ಒಬ್ಬ ಸಾಮಂತ ರಾಜ ಇಷ್ಟು ವಿಶಾಲವಾದ ನಗರವನ್ನು ಕಟ್ಟುವುದು ಆ ಕಾಲದಲ್ಲಿ ದುಸ್ಸಾಧ್ಯವಾಗಿದ್ದರೂ ಸಹ ಕೆಂಪೇಗೌಡರು ಈ ಕಾರ್ಯಕ್ಕೆ ಕೈ ಹಾಕಿದರು. ಇದಕ್ಕೆ ವಿಜಯನಗರದ ಅರಸರ ಬೆಂಬಲವೂ ಇತ್ತು ಮತ್ತು ಹಣಕಾಸಿನ ನೆರವೂ ಸಿಕ್ಕಿತ್ತು.

ತಮ್ಮ ಸರ್ವಸ್ವವನ್ನೂ ಪಣವಾಗಿಟ್ಟು ಕೆಂಪೇಗೌಡರು ಈ ನಗರವನ್ನು ಕಟ್ಟಿದರು. ಇವತ್ತು ಬೆಂಗಳೂರಿಗೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿರಬಹುದು. ಜ್ಞಾನನಗರಿ, ಸಿಲಿಕಾನ್ ಸಿಟಿ, ಉದ್ಯಾನ ನಗರ ಇತ್ಯಾದಿ ಹೆಸರುಗಳು ಸಿಕ್ಕಿರಬಹುದು. ಆದರೆ ಇದೆಲ್ಲದಕ್ಕೂ ಮೂಲ ಕಾರಣಪುರುಷ ನಾಡಪ್ರಭು ಕೆಂಪೇಗೌಡರು ಎಂಬುದನ್ನು ನಾವು ಮರೆಯುವಂತಿಲ್ಲ. ಈ ಹಿನ್ನೆಲೆಯಿಂದಲೇ ನಾವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನೇ ಇಡಬೇಕು ಎಂಬ ಚಳವಳಿಯನ್ನು ಹಮ್ಮಿಕೊಂಡಿದ್ದೆವು.

ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ಇಡುವ ವಿಷಯಕ್ಕೆ ಕಳೆದ ವಿಧಾನಸಭೆಯ ಎಲ್ಲ ಶಾಸಕರು ಬೆಂಬಲಿಸಿದರು. ಸಚಿವ ಸಂಪುಟ ಸಭೆಯಲ್ಲಿ ಒಮ್ಮತದ ಒಪ್ಪಿಗೆಯೂ ದೊರೆಯಿತು. ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೂ ಕಳುಹಿಸಲಾಯಿತು. ಕೇಂದ್ರ ಸಚಿವ ಸಂಪುಟವೂ ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿತು. ಹೀಗಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನು ಇಡಲಾಯಿತು. ಹೀಗಿರುವಾಗ ಗಿರೀಶ್ ಕಾರ್ನಾಡರು ಸರ್ಕಾರಿ ಕಾರ್ಯಕ್ರಮದಲ್ಲೇ ಇಂಥ ಅವಿವೇಕದ ಹೇಳಿಕೆಯನ್ನೇಕೆ ನೀಡುತ್ತಾರೆ? ಕಾರ್ನಾಡರು ಹೀಗೆ ಮಾತನಾಡುವಾಗ ವೇದಿಕೆಯಲ್ಲೇ ಇದ್ದ ಮುಖ್ಯಮಂತ್ರಿಗಳಾಗಲೀ, ಮಂತ್ರಿಗಳಾಗಲೀ, ಸಾಹಿತಿಗಳಾಗಲಿ ಯಾಕೆ ವಿರೋಧ ಮಾಡಲಿಲ್ಲ? ಅದೆಲ್ಲ ಹೋಗಲಿ, ಈ ವೇದಿಕೆಯಲ್ಲಿ ಓರ್ವ ಕನ್ನಡ ಚಳವಳಿಗಾರರೂ ಹಾಜರಿದ್ದರು. ಅವರಾದರೂ ಸ್ಥಳದಲ್ಲೇ ಕಾರ್ನಾಡರ ಹೇಳಿಕೆಯನ್ನು ಖಂಡಿಸಿ ಯಾಕೆ ಮಾತನಾಡಲಿಲ್ಲ?

ಇವತ್ತು ಸಮಾಜದಲ್ಲಿ ಅಸಹಿಷ್ಣುತೆ, ಅಶಾಂತಿ ಹೆಚ್ಚುತ್ತಲೇ ಇದೆ. ಇದರ ಪರಿಣಾಮವನ್ನು ಸಾಮಾನ್ಯ ನಾಗರಿಕರು ಉಣ್ಣುವಂತಾಗಿದೆ. ಭಯೋತ್ಪಾದನೆ ಎಂದರೆ ಕೇವಲ ಬಂದೂಕು ಹಿಡಿದು, ಬಾಂಬು ಸಿಡಿಸಿದರೆ ಮಾತ್ರ ಎಂದು ಭಾವಿಸಬೇಕಿಲ್ಲ. ಸಮಾಜದ ಸ್ವಾಸ್ಥ್ಯ ಕದಡುವ ಹೇಳಿಕೆ ನೀಡುವುದೂ ಸಹ ಭಯೋತ್ಪಾದಕ ಚಟುವಟಿಕೆಯೇ ಆಗುತ್ತದೆ. ದಿನದ ಇಪ್ಪತ್ತ ನಾಲ್ಕುಗಂಟೆಗಳ ಮಾಧ್ಯಮ ಈಗ ಎಷ್ಟು ಬೆಳೆದಿದೆಯೆಂದರೆ ಸಮಾಜವನ್ನು ಅಲ್ಲೋಲ ಕಲ್ಲೋಲ ಮಾಡಲು ಒಂದು ಹನಿ ವಿಷದಂಥ ಹೇಳಿಕೆಗಳು ಸಾಕು ಎನ್ನುವಂತಾಗಿದೆ. ಮತಾಂಧ ಸಂಘಟನೆಗಳು ಈ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ ಮಾಡುತ್ತ ಬಂದಿವೆ. ಇದೇ ರೀತಿಯ ಪ್ರಚೋದನೆಯನ್ನು ಗಿರೀಶ್ ಕಾರ್ನಾಡರಂಥ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳೂ ಮಾಡಿದರೆ ಈ ಸಮಾಜದ ಗತಿಯೇನು? ಇಂಥ ಪ್ರಚೋದನೆಗಳಿಂದ ನಾಡಿನಲ್ಲಿ ಅಶಾಂತಿ ಉಂಟಾದರೆ ಆಗುವ ಜೀವಹಾನಿಗೆ ಯಾರು ಹೊಣೆಯಾಗುತ್ತಾರೆ?

ಕಾರ್ನಾಡರಿಗೆ ನಿಜಕ್ಕೂ ತಮ್ಮ ತಪ್ಪಿನ ಅರಿವಾದಂತಿಲ್ಲ. ರಾಜ್ಯದ ಗೃಹ ಸಚಿವರು ಮಾತನಾಡಿದ ನಂತರ ಕ್ಷಮೆ ಯಾಚನೆಯ ಹೇಳಿಕೆಯನ್ನು ಅವರು ನೀಡಿದ್ದಾರೆ. ಸಮಾಜ ಇಂದು ಧರ್ಮ, ಜಾತಿಗಳ ಹೆಸರಲ್ಲಿ ಒಡೆದುಹೋಗಿದೆ. ಈ ವಾಸ್ತವವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆವೇಶದಲ್ಲಿ ಚಪ್ಪಾಳೆ ಗಿಟ್ಟಿಸಲು ಏನು ಬೇಕಾದರೂ ಮಾತನಾಡಬಹುದು ಎಂಬ ಕಾಲ ಇದಲ್ಲ. ಎಲ್ಲರಿಗೂ ಅದರಲ್ಲೂ ವಿಶೇಷವಾಗಿ ಸಾಹಿತಿಗಳಿಗೆ, ಬುದ್ಧಿಜೀವಿಗಳಿಗೆ ಹೆಚ್ಚಿನ ಜವಾಬ್ದಾರಿ ಇದೆ. ಅದನ್ನು ಕಾರ್ನಾಡರು ಇನ್ನಾದರೂ ಅರಿತುಕೊಳ್ಳುವಂತಾಗಲಿ.

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ



Monday, 9 November 2015

ರಾಜಭವನವನ್ನು ಗುಜರಾತ್ ಭವನ ಮಾಡುವಿರಾ ರಾಜ್ಯಪಾಲರೇ?

ಕನ್ನಡ ರಾಜ್ಯೋತ್ಸವದ ದಿನದಂದೇ ರಾಜ್ಯಪಾಲ ವಜುಭಾಯ್ ರೂಢಭಾಯ್ ವಾಲಾ ರಾಜಭವನದಲ್ಲಿ ಗುಜರಾತಿ ಉತ್ಸವ ನಡೆಸಿ, ಗುಜರಾತಿ ಸಮುದಾಯದ ಸಿರಿವಂತರಿಗೆ ಔತಣಕೂಟ ನಡೆಸಿದ್ದಾರೆ. ತನ್ನ ತಾಯ್ನೆಲವಾದ ಗುಜರಾತ್‌ನಿಂದ ವಲಸೆ ಬಂದಿರುವ ಸಮುದಾಯದ ಜನರನ್ನು ಕರೆದು ಔತಣ ನಡೆಸಲು ರಾಜ್ಯಪಾಲರು ಆಯ್ಕೆ ಮಾಡಿಕೊಂಡಿರುವ ದಿನವನ್ನು ಗಮನಿಸಿ. ರಾಜ್ಯಪಾಲರು ನವೆಂಬರ್ ಒಂದರಂದು ಕನ್ನಡ ನಾಡಿನ ಎಲ್ಲ ಕ್ಷೇತ್ರಗಳ ಗಣ್ಯರು, ಸಾಹಿತಿಗಳನ್ನು ಕರೆದು ಔತಣಕೂಟವನ್ನು ಏರ್ಪಡಿಸಿದ್ದರೆ ಅದಕ್ಕೆ ಒಂದು ಅರ್ಥವಿರುತ್ತಿತ್ತು. ಆದರೆ ಅದೇ ದಿನವೇ ಅವರು ಗುಜರಾತಿ ಉತ್ಸವ ನಡೆಸಿದರು. ತಾವು ನಿಂತ ನೆಲ, ಅದರ ಸಂಸ್ಕೃತಿ, ನುಡಿ, ಘನತೆ ಎಲ್ಲವನ್ನೂ ಮರೆತರು.

ರಾಜ್ಯಪಾಲರ ಹುದ್ದೆಗೆ ನಮ್ಮ ಸಂವಿಧಾನದಡಿಯಲ್ಲೇ ವಿಪರೀತ ಅನ್ನುವಷ್ಟು ಗೌರವ ನೀಡಲಾಗಿದೆ. ರಾಜ್ಯಪಾಲರನ್ನು ಕೇಂದ್ರ ಸರ್ಕಾರವೇ ರಾಷ್ಟ್ರಪತಿಗಳ ಮೂಲಕ ನೇಮಕ ಮಾಡುತ್ತದೆ. ತಾವು ರಾಜ್ಯಪಾಲರಾಗಿ ನೇಮಕಗೊಂಡ ರಾಜ್ಯದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗಗಳು ಸಂವಿಧಾನಬದ್ಧವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವ ಪ್ರಧಾನ ಹೊಣೆ ರಾಜ್ಯಪಾಲರದ್ದು. ಈ ರಾಜ್ಯಪಾಲರುಗಳು ಜನರಿಂದ ನೇರವಾಗಿ ಆಯ್ಕೆಯಾಗಿರುವುದಿಲ್ಲ. ಯಾವುದೇ ರಾಜ್ಯಕ್ಕೆ ರಾಜ್ಯಪಾಲರಾಗಿ ಹೋಗುವವರು ಆ ರಾಜ್ಯದ ಸಮಾಜ, ಸಂಸ್ಕೃತಿ, ನುಡಿಯನ್ನು ಅರಿತುಕೊಂಡು ಕಾರ್ಯನಿರ್ವಹಿಸುವಂತಾಗಬೇಕು. ಇದನ್ನೂ ಕೂಡ ಸಂವಿಧಾನದಲ್ಲೇ ಬರೆದಿರಬೇಕು ಎಂದೇನಿಲ್ಲ. ಅದು ಸಾಮಾನ್ಯ ಜ್ಞಾನ. ರೋಮ್ ನಲ್ಲಿದ್ದಾಗ ರೋಮನ್‌ನಂತೆ ಇರಬೇಕು ಎನ್ನುತ್ತದೆ ಆಧುನಿಕ ಗಾದೆ.

ಆದರೆ ದುರದೃಷ್ಟವಶಾತ್ ಕರ್ನಾಟಕಕ್ಕೆ ರಾಜ್ಯಪಾಲರಾಗಿ ಬಂದ ಹಲವರು ಕರ್ನಾಟಕದ ಅಸ್ಮಿತೆಯನ್ನು ಧಿಕ್ಕರಿಸಿ ನಮ್ಮ ಸ್ವಾಭಿಮಾನವನ್ನು ಕೆಣಕಿದರು. ಹಿಂದೆ ಇದ್ದ ಹಂಸರಾಜ್ ಭಾರದ್ವಾಜ್ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ನಾಡಗೀತೆಯನ್ನು ಹಾಡುತ್ತಿದ್ದಾಗ ಅದನ್ನು ಅರ್ಧಕ್ಕೆ ನಿಲ್ಲಿಸುವಂತೆ ಹೇಳಿ ರಾಷ್ಟ್ರಗೀತೆಯನ್ನು ಹಾಡುವಂತೆ ಹೇಳಿ ತಮ್ಮ ‘ರಾಷ್ಟ್ರಭಕ್ತಿ’ಯನ್ನು ಮೆರೆದಿದ್ದರು. ರಾಷ್ಟ್ರಭಕ್ತಿಯ ಹೆಸರಲ್ಲಿ ತಾನು ರಾಜ್ಯಪಾಲನಾಗಿರುವ ರಾಜ್ಯದ ಹಿರಿಮೆಯನ್ನು ಅಪಮಾನಿಸುತ್ತಿದ್ದೇನೆ ಎಂಬುದು ಅವರಿಗೆ ಗೊತ್ತಾಗಲೇ ಇಲ್ಲ. ಅದಾದ ನಂತರ ನ್ಯಾಯಮೂರ್ತಿಯೊಬ್ಬರು ಭಾರದ್ವಾಜ್ ಅವರಿಗೆ ಇಡೀ ನಾಡಗೀತೆಯ ಪಠ್ಯವನ್ನು ಅನುವಾದಿಸಿ ಅದರ ಮಹತ್ವವನ್ನು ತಿಳಿಹೇಳಿದ್ದರು. ನಾಡಗೀತೆಯ ಅರ್ಥವನ್ನು ತಿಳಿದುಕೊಂಡ ಭಾರದ್ವಾಜ್ ‘ಎಷ್ಟು ಅದ್ಭುತವಾದ ಸಾಲುಗಳು, ಇದನ್ನು ಬರೆದವರ ಮನೋಶ್ರೀಮಂತಿಕೆಗೆ ಬೆಲೆ ಕಟ್ಟಲಾಗದು’ ಎಂದು ಉದ್ಘರಿಸಿದ್ದರು. ನಾಡಗೀತೆ ಬರೆದ ಯುಗದ ಕವಿ ಕುವೆಂಪು ಅವರ ಕುರಿತು ಇಂಗ್ಲಿಷ್‌ನಲ್ಲಿ ಬರೆದಿರುವ ಪುಸ್ತಕಗಳನ್ನು ಓದಿ, ನನಗೆ ರವೀಂದ್ರನಾಥ ಠ್ಯಾಗೋರ್, ಕುವೆಂಪು ಬೇರೆಬೇರೆಯಾಗಿ ಕಾಣುವುದಿಲ್ಲ. ಇಬ್ಬರೂ ಅದ್ಭುತ ಕವಿಗಳು ಎಂದು ಹೇಳಿದ್ದರು.
೧೯೯೯ರಿಂದ ೨೦೦೨ರವರೆಗೆ ಕರ್ನಾಟಕದ ರಾಜ್ಯಪಾಲರಾಗಿದ್ದ ವಿ.ಎಸ್.ರಮಾದೇವಿ ಮೂಲತಃ ಆಂಧ್ರಪ್ರದೇಶದವರು. ಅವರು ಕರ್ನಾಟಕಕ್ಕೆ ರಾಜ್ಯಪಾಲರಾಗಿ ಬಂದಾಗ ಸಹಜವಾಗಿಯೇ ಕನ್ನಡ ನುಡಿ ಗೊತ್ತಿರಲಿಲ್ಲ. ಆದರೆ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದರು. ತಾನು ಕೆಲಸ ಮಾಡಬೇಕಿರುವ ರಾಜ್ಯದ ನಾಡು-ನುಡಿಗೆ ಸಲ್ಲಿಸಬೇಕಾದ ಗೌರವ ಏನೆಂಬುದು ಅವರಿಗೆ ಚೆನ್ನಾಗಿಯೇ ಗೊತ್ತಿತ್ತು. ಹೀಗೆ ಪ್ರಮಾಣವಚನ ಸ್ವೀಕಾರ ಮಾಡಿದ್ದು ತೋರಿಕೆಗಾಗಿ ಎಂದು ಯಾರಾದರೂ ಭಾವಿಸಿಬಿಡಬಹುದು. ಆದರೆ ರಮಾದೇವಿ ತಮ್ಮ ಕೆಲಸಕಾರ್ಯಗಳ ಮಧ್ಯೆ ಕನ್ನಡ ಕಲಿಯುವ ಕೆಲಸ ಆರಂಭಿಸಿದರು. ಅವರು ಎಷ್ಟು ಚೆನ್ನಾಗಿ ಕನ್ನಡ ಕಲಿತರೆಂದರೆ ಎಲ್ಲ ಕಡೆ ಕನ್ನಡದಲ್ಲೇ ಭಾಷಣ ಮಾಡಲು ತೊಡಗಿದರು.

ಈಗ ಮತ್ತೆ ವಜುಭಾಯ್ ವಾಲಾ ಅವರ ವಿಷಯಕ್ಕೆ ಬರುವುದಾದರೆ, ಅವರು ರಾಜ್ಯಪಾಲರಾಗಿ ಬಂದ ನಂತರ ತಾವು ಕಾರ್ಯನಿರ್ವಹಿಸುತ್ತಿರುವ ನಾಡು ಯಾವುದು ಎಂಬುದನ್ನೇ ಮರೆತಿದ್ದಾರೆ. ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಬೇಕಾಗಿ ಬಂದಾಗ ಅವರು ಆಯ್ಕೆ ಮಾಡಿಕೊಂಡಿದ್ದು ಹಿಂದಿ ನುಡಿಯನ್ನು. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯಪಾಲರೊಬ್ಬರ ಹಿಂದಿ ಭಾಷಣವನ್ನು ನಮ್ಮ ಜನಪ್ರತಿನಿಧಿಗಳು ಸೈರಿಸಿಕೊಂಡರು. ಯಾವುದೇ ರಾಜ್ಯದ ರಾಜ್ಯಪಾಲರು ಇಂಥ ಸಂದರ್ಭದಲ್ಲಿ ಆಯಾ ರಾಜ್ಯದ ನುಡಿಯನ್ನೇ ಆಯ್ಕೆ ಮಾಡಿಕೊಳ್ಳಬೇಕು. ಒಂದು ವೇಳೆ ಅವರಿಗೆ ಉಚ್ಛಾರಣೆಯ ಸಮಸ್ಯೆ ಇದ್ದರೆ, ಆಯಾ ರಾಜ್ಯದ ನುಡಿಯಲ್ಲಿ ಭಾಷಣ ಮಾಡುವುದು ಕಷ್ಟವಾದರೆ ಹೆಚ್ಚು ಜನರಿಗೆ ಅರ್ಥವಾಗುವ ಇಂಗ್ಲಿಷ್ ಭಾಷೆಯಲ್ಲಿ ಭಾಷಣ ಮಾಡಬಹುದು. ಇವೆರಡನ್ನೂ ಬಿಟ್ಟು ಹಿಂದಿ ನುಡಿಯಲ್ಲಿ ಭಾಷಣ ಮಾಡಿದ್ದರ ಉದ್ದೇಶವಾದರೂ ಏನು? ಎಸ್.ಎಂ.ಕೃಷ್ಣ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದರು. ಆಗ ಅವರು ಅಲ್ಲಿನ ವಿಧಾನಮಂಡಲ ಅಧಿವೇಶನವನ್ನು ಉದ್ದೇಶಿಸಿ ಕನ್ನಡದಲ್ಲಿ ಮಾತನಾಡಿದ್ದರೆ ಅಲ್ಲಿನವರು ಸಹಿಸಿಕೊಳ್ಳುತ್ತಿದ್ದರೇ? ಅಥವಾ ಮುಂದೆ ಕರ್ನಾಟಕದ ರಾಜಕಾರಣಿಯೊಬ್ಬರು ಗುಜರಾತ್‌ನ ರಾಜ್ಯಪಾಲರಾಗಿ, ಅವರು ಅಲ್ಲಿನ ವಿಧಾನಮಂಡಲ ಅಧಿವೇಶವನ್ನು ಉದ್ದೇಶಿಸಿ ಕನ್ನಡದಲ್ಲಿ ಮಾತನಾಡಿದರೆ ವಜುಬಾಯ್ ವಾಲಾ ಸಹಿಸಿಕೊಳ್ಳುವರೆ?

ಕರ್ನಾಟಕಕ್ಕೆ ಬರುವ ರಾಜ್ಯಪಾಲರು ಮೊದಲು ಮಾಡಬೇಕಾದ ಕೆಲಸವೇನೆಂದರೆ ಈ ನಾಡನ್ನು ಪ್ರೀತಿಸುವುದು. ಇಲ್ಲಿನ ನೆಲ, ಸಂಸ್ಕೃತಿ, ನುಡಿ, ಪರಂಪರೆ ಮತ್ತು ಜನರನ್ನು ಗೌರವಿಸುವುದು. ಇದನ್ನು ಮಾಡದೇ, ರಾಜಭವನವೆಂಬ ಕೋಟೆಯೊಳಗೆ ಕುಳಿತು ಎಲ್ಲ ಐಶಾರಾಮಿ ಸೌಲಭ್ಯಗಳನ್ನು ಪಡೆದು ತನ್ನದೇ ದರ್ಬಾರು ಸ್ಥಾಪಿಸಿದರೆ ಅದು ಸಂವಿಧಾನಕ್ಕೆ ಮಾಡುವ ಅಪಚಾರ. ಸಂವಿಧಾನದ ಪ್ರಕಾರವೇ ಭಾರತ ಒಕ್ಕೂಟವನ್ನು ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಿಸಲಾಗಿದೆ. ತನ್ನ ನುಡಿ, ಸಂಸ್ಕೃತಿಯನ್ನು ಬೆಳೆಸುವ, ಕಾಪಾಡಿಕೊಳ್ಳುವ ಹಕ್ಕನ್ನು ಎಲ್ಲ ರಾಜ್ಯಗಳಿಗೂ ಸಂವಿಧಾನವೇ ನೀಡಿದೆ. ಹೀಗಿರುವ ಸಂವಿಧಾನದ ಕಾವಲುಗಾರರಾಗಿ ಬರುವ ರಾಜ್ಯಪಾಲರು ಸಂವಿಧಾನದ ಮೂಲ ಆಶಯವನ್ನೇ ಧಿಕ್ಕರಿಸಿ ನಡೆದರೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ.

ರಾಜ್ಯಪಾಲ ವಜುಭಾಯ್ ವಾಲಾ ರಾಜಭವನವನ್ನು ಕರ್ನಾಟಕದ ಜನತೆಗೆ ಮುಕ್ತವಾಗಿ ತೆರೆದಿಡಬೇಕು. ರಾಜಭವನವೆಂಬುದು ರಾಜ್ಯಪಾಲರಾಗಿ ಕಾರ್ಯನಿರ್ವಹಿಸುವವರ ಖಾಸಗಿ ಆಸ್ತಿಯಲ್ಲ. ಕೋಟ್ಯಂತರ ರುಪಾಯಿ ಕನ್ನಡಿಗರ ತೆರಿಗೆ ಹಣವನ್ನು ಖರ್ಚು ಮಾಡಿ ರಾಜಭವನವನ್ನು ನವೀಕರಣ ಮಾಡಿಕೊಂಡಿರುವ ವಾಲಾ ಅವರು ರಾಜಭವನವನ್ನು ಕನ್ನಡದ ಜನತೆಗೆ ತೆರೆದಿಡದಿದ್ದರೆ ಅದು ಯಾವ ಪುರುಷಾರ್ಥಕ್ಕೆ? ರಾಜ್ಯಪಾಲರು ಜನಸ್ನೇಹಿಯಾಗಿರಬೇಕು ಎಂದು ಭಾವಿಸಿದ್ದ ರಮಾದೇವಿಯವರು ಶ್ರೀಸಾಮಾನ್ಯರಿಗೂ ಮುಕ್ತವಾದ ಪ್ರವೇಶಾವಕಾಶ ಕಲ್ಪಿಸಿ, ಎಲ್ಲರ ಅಹವಾಲುಗಳನ್ನೂ ಕೇಳುತ್ತಿದ್ದರು. ಗಣರಾಜ್ಯೋತ್ಸವದಂದು ನಾಡಿನ ಹಿರಿಯ ಚೇತನಗಳನ್ನು ಕರೆದು ಗೌರವಿಸುತ್ತಿದ್ದರು. ಆದರೆ ವಜುಭಾಯ್ ವಾಲಾ ರಾಜಭವನವನ್ನು ಗುಜರಾತ್ ಭವನವನ್ನಾಗಿ ಮಾಡಿಕೊಂಡಿದ್ದಾರೆ. ತನ್ನ ಸಹಾಯಕರನ್ನಾಗಿ ಗುಜರಾತಿಗಳನ್ನೇ ನೇಮಕ ಮಾಡಿಕೊಂಡಿದ್ದಾರೆ. ಇವರ ಕಿವಿಗೆ ಕನ್ನಡ ನುಡಿಯೇ ಬೀಳದೇ ಹೋದರೆ ಕಲಿಯುವುದು ಎಲ್ಲಿಂದ? ಕನ್ನಡ ಕಲಿಯದೇ ಹೋದರೆ ಗೌರವಿಸುವುದು ಹೇಗೆ ಸಾಧ್ಯ? ಹೀಗಾಗಿ ಕನ್ನಡ ರಾಜ್ಯೋತ್ಸವದಂದೇ ಗುಜರಾತಿ ಉತ್ಸವ ನಡೆಸುವ ದುರಹಂಕಾರದ ಪ್ರದರ್ಶನವೂ ಆಗಿಹೋಗಿದೆ.

ವಜುಭಾಯ್  ವಾಲಾ ಅವರಿಗೆ ರಾಜ್ಯಪಾಲರಾಗಿ ಸಾವಿರ ಕೆಲಸಗಳಿರಬಹುದು. ಆದರೆ ಅದೆಲ್ಲಕ್ಕಿಂತ ಮುಖ್ಯವಾಗಿ ಅವರು ಈ ನಾಡು ನುಡಿಯ ಕುರಿತು ಒಂದಷ್ಟು ಕಲಿಯಬೇಕಿದೆ. ಅದಕ್ಕಾಗಿ ಒಂದಿಬ್ಬರು ಶಿಕ್ಷಕರನ್ನು ಅವರು ನೇಮಕ ಮಾಡಿಕೊಳ್ಳುವುದು ಒಳ್ಳೆಯದು. ಇದಕ್ಕಾಗಿ ಅವರು ನಮ್ಮ ತೆರಿಗೆ ಹಣವನ್ನೇ ಬಳಸಿಕೊಳ್ಳಲಿ, ನಮ್ಮ ತಕರಾರೇನೂ ಇರುವುದಿಲ್ಲ. ಗುಜರಾತಿ ಉತ್ಸವಕ್ಕೆ ಲಕ್ಷಾಂತರ ರುಪಾಯಿ ನಮ್ಮ ತೆರಿಗೆ ಹಣವೇ ಖರ್ಚಾಗುತ್ತಿರುವಾಗ ಕನ್ನಡ ಶಿಕ್ಷಕರಿಗೆ ನಮ್ಮ ತೆರಿಗೆ ಹಣದಲ್ಲೇ ಸಂಬಳ ಕೊಡಲಿ. ಮೊದಲು ಕನ್ನಡ ನಾಡು, ಅದರ ಇತಿಹಾಸ, ಪರಂಪರೆ, ಸಂಸ್ಕೃತಿ, ಸಾಹಿತ್ಯ ಎಲ್ಲದರ ಬಗ್ಗೆ ಅವರು ಕಲಿತುಕೊಳ್ಳಲಿ. ಪಂಪನಿಂದ ಹಿಡಿದು ಕುವೆಂಪುವರೆಗೆ ಕನ್ನಡದ ನುಡಿಪರಂಪರೆಯೂ ಅವರಿಗೆ ಗೊತ್ತಾಗಲಿ. ಇಲ್ಲಿನ ಶರಣರು, ದಾಸರು, ಸೂಫಿಗಳು, ಜನಪದರು ಎಲ್ಲರ ಕುರಿತು ಅವರು ಓದುವಂತಾಗಲಿ. ಇದೆಲ್ಲದಕ್ಕೆ ತುಂಬಾ ಸಮಯವೇನೂ ಬೇಕಾಗಿಲ್ಲ. ಆರು ತಿಂಗಳಲ್ಲಿ ಕನ್ನಡದಲ್ಲೇ ಮಾತನಾಡುವಷ್ಟು ಪ್ರೌಢಿಮೆಯನ್ನು ಅವರು ಪಡೆಯಬಹುದು.

ಕನ್ನಡ ಕಲಿತ ನಂತರ ವಜುಭಾಯ್ ವಾಲಾ ಅವರು ಕನ್ನಡಿಗರ ಜತೆ ಕನ್ನಡದಲ್ಲೇ ವ್ಯವಹರಿಸಲಿ, ರಾಜಭವನದಲ್ಲಿ ಕನ್ನಡವೇ ಮೊಳಗುವಂತೆ ನೋಡಿಕೊಳ್ಳಲಿ. ಸಂಸ್ಕೃತ, ಹಿಂದಿ ಭಾಷೆಗಳನ್ನು ಉತ್ತೇಜಿಸುವ ನೂರೆಂಟು ಕಾರ್ಯಕ್ರಮಗಳಿಗೆ ಹೋಗುವ ರಾಜ್ಯಪಾಲರು ಅದನ್ನು ಬಿಟ್ಟು ಕನ್ನಡದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿ. ಇತರೆ ಭಾಷೆಗಳನ್ನು ಉದ್ಧಾರ ಮಾಡಲು ಆ ಭಾಷೆಗಳಿಗೆ ಸಂಬಂಧಿಸಿದ ರಾಜ್ಯಗಳಿವೆ. ಆಯಾ ರಾಜ್ಯಗಳಲ್ಲಿ ಆ ಕೆಲಸ ನಡೆಯಲಿ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ನುಡಿ. ಕನ್ನಡದ ಹೊರತಾಗಿ ಇಲ್ಲಿ ಇನ್ಯಾವ ದೊಡ್ಡ ನುಡಿಯೂ ಇಲ್ಲ. ಇಲ್ಲಿ ವ್ಯವಹರಿಸುವ ಯಾರೇ ಆದರೂ ಕನ್ನಡವನ್ನೇ ಬಳಸಬೇಕು, ಕನ್ನಡಕ್ಕೇ ಗೌರವ ನೀಡಬೇಕು. ಸರ್ಕಾರಿ ಅಧಿಕಾರಿ, ನ್ಯಾಯಾಧೀಶ, ಉದ್ಯಮಿ, ಕಾರ್ಮಿಕರಿಂದ ಹಿಡಿದು ರಾಜ್ಯಪಾಲರವರೆಗೆ ಎಲ್ಲರಿಗೂ ಈ ಮಾತು ಅನ್ವಯವಾಗುತ್ತದೆ.

ನವೆಂಬರ್ ಒಂದರಂದು ರಾಜಭವನದಲ್ಲಿ ಗುಜರಾತಿ ಉತ್ಸವವನ್ನು ಏರ್ಪಡಿಸುವ ಮೂಲಕ ವಜುಭಾಯ್ ವಾಲಾ ಕೆಟ್ಟ ಪರಂಪರೆಯನ್ನು ಆರಂಭಿಸಿದ್ದಾರೆ. ಈ ಪ್ರಮಾದಕ್ಕಾಗಿ ಅವರು ಕನ್ನಡ ನಾಡಿನ ಜನತೆಯ ಕ್ಷಮೆ ಯಾಚಿಸಬೇಕು. ಇನ್ನೆಂದೂ ಇಂಥ ತಾಯಿದ್ರೋಹದ ಕೆಲಸವನ್ನು ಮಾಡುವುದಿಲ್ಲವೆಂದು ಅವರು ಪ್ರಮಾಣ ಮಾಡಬೇಕು. ತಾನು ಕೆಲಸ ಮಾಡುವ ನಾಡನ್ನು ಧಿಕ್ಕರಿಸುವುದೆಂದರೆ ಅದನ್ನು ತಾಯಿದ್ರೋಹವೆಂದೇ ಕರೆಯಬೇಕಾಗುತ್ತದೆ. ಮುಂದೆ ಎಂದೂ ಅವರಿಂದ ಇಂಥ ಪ್ರಮಾದಗಳು ನಡೆಯದೇ ಇರಲಿ.

ರಾಜಭವನವೆಂಬುದು ಸಂವಿಧಾನ ರಕ್ಷಣೆಯ ಕೇಂದ್ರವಾಗಬೇಕೇ ಹೊರತು, ಸಂವಿಧಾನವಿರೋಧಿಯಾಗಿ ಸ್ಥಳೀಯ ನುಡಿ ಸಂಸ್ಕೃತಿಯನ್ನು ಧಿಕ್ಕರಿಸುವ ಕೇಂದ್ರವಾಗಬಾರದು. ರಾಜಭವನವನ್ನು ಗುಜರಾತ್ ಭವನವನ್ನಾಗಿ ಮಾಡಲು ಕನ್ನಡಿಗರೆಂದಿಗೂ ಅವಕಾಶ ನೀಡಕೂಡದು. ಒಂದು ವೇಳೆ ಗುಜರಾತ್ ಸಂಸ್ಕೃತಿಯ ಕುರಿತು ವಾಲಾ ಅವರಿಗೆ ಅಷ್ಟೊಂದು ಮೋಹವಿದ್ದರೆ, ತಮ್ಮ ಸ್ವಂತ ಖರ್ಚಿನಲ್ಲಿ ಗುಜರಾತ್‌ನಲ್ಲೇ ಒಂದು ಭವನ ಕಟ್ಟಿಕೊಂಡು, ಅಲ್ಲಿ ಗುಜರಾತಿ ಉತ್ಸವಗಳನ್ನು ನಡೆಸಲಿ. ಕರ್ನಾಟಕದಲ್ಲಿರುವ ಗುಜರಾತಿಗಳ ಮೇಲೆ ಅಷ್ಟೊಂದು ಮಮಕಾರವಿದ್ದರೆ, ಗುಜರಾತ್‌ನಲ್ಲಿ ತಾವು ಕಟ್ಟುವ ಗುಜರಾತಿ ಭವನದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ದಿನನಿತ್ಯ ಉತ್ಸವಗಳನ್ನು ನಡೆಸಿ, ಅದಕ್ಕೆ ಕರ್ನಾಟಕದ ಗುಜರಾತಿಗಳನ್ನು ತಮ್ಮ ಖರ್ಚಿನಲ್ಲಿ ಕರೆಯಿಸಿಕೊಳ್ಳಲಿ. ಯಾರು ಬೇಡ ಎಂದವರು?

ಯಾವುದೇ ರಾಜ್ಯಪಾಲರಿಗೆ ಮೊದಲು ಇರಬೇಕಾದ ‘ಸಾಮಾನ್ಯ ಜ್ಞಾನ’ವೆಂದರೆ ಭಾರತ ಎಂಬುದೊಂದು ಒಕ್ಕೂಟ. ಭಾಷಾವಾರು ಪ್ರಾಂತ್ಯ ವಿಂಗಡಣೆಯಂತೆ ಇಲ್ಲಿ ರಾಜ್ಯಗಳಾಗಿವೆ. ಎಲ್ಲ ರಾಜ್ಯಗಳಿಗೂ ತನ್ನದೇ ಆದ ಇತಿಹಾಸ, ಪರಂಪರೆ, ಸಂಸ್ಕೃತಿ, ಅಸ್ಮಿತೆಗಳು ಇರುತ್ತವೆ. ಅವುಗಳನ್ನು ಕಾಪಾಡದೇ ಹೋದರೆ ಭಾರತ ಒಕ್ಕೂಟಕ್ಕೆ ಒಂದು ಅರ್ಥ ಉಳಿಯುವುದಿಲ್ಲ. ಅಷ್ಟೇ ಅಲ್ಲ, ಅದು ಹೆಚ್ಚು ಕಾಲ ಒಕ್ಕೂಟವಾಗಿ ಉಳಿಯುವುದೂ ಸಾಧ್ಯವಿಲ್ಲ. ಹೀಗಾಗಿ ಬೇರೆ ರಾಜ್ಯಗಳಿಂದ ಬಂದ ರಾಜ್ಯಪಾಲರು ಈ ಸಾಮಾನ್ಯ ಜ್ಞಾನವನ್ನು ಮೊದಲು ಕಲಿಯಬೇಕು. ಕಲಿಯಲು ಅವರಿಗೆ ಮನಸು ಇಲ್ಲದೇ ಹೋದಲ್ಲಿ ನಾವೇ ಅನಿವಾರ್ಯವಾಗಿ ಅದನ್ನು ಕಲಿಸಬೇಕಾಗುತ್ತದೆ. ಹಾಗೂ ಕಲಿಯದೇ ಹೋದರೆ ದಯವಿಟ್ಟು ನೀವು ಬಂದ ರಾಜ್ಯಕ್ಕೆ ಹಿಂದಕ್ಕೆ ಹೋಗಿ ಅಲ್ಲಿನ ಸಂಸ್ಕೃತಿಯ ರಾಯಭಾರಿಗಳಾಗಿ ನಿಮ್ಮ ಭವ್ಯಪರಂಪರೆಯನ್ನು ಮೆರೆಯಿರಿ ಎಂದು ಪ್ರೀತಿಯಿಂದ ಹೇಳಿ ಬೀಳ್ಕೊಡಬೇಕಾಗುತ್ತದೆ.

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ


Wednesday, 4 November 2015

ರಾಜ್ಯೋತ್ಸವ ನಮ್ಮ ಪಾಲಿಗೆ ಎಂದೆಂದಿಗೂ ನಿತ್ಯೋತ್ಸವ

ಬೆಂಗಳೂರಿನ ಪೊಲೀಸ್ ಕಮಿಷನರ್ ಎನ್.ಎಸ್.ಮೇಘರಿಕ್ ಇಲ್ಲದ ಸಮಸ್ಯೆಯೊಂದನ್ನು ಸೃಷ್ಟಿಸಿ, ನಂತರ ನಮ್ಮೆಲ್ಲರ ತೀವ್ರ ವಿರೋಧದ ನಂತರ ತಾವೇ ಬಗೆಹರಿಸಿದ್ದಾರೆ. ಯಾರು ಅಂಥ ಕೆಟ್ಟ ಸಲಹೆ ನೀಡಿದರೋ ಏನೋ, ಅವರು ಸುತ್ತೋಲೆಯೊಂದನ್ನು ಹೊರಡಿಸಿ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ ಒಂದರಿಂದ ಏಳರವರೆಗೆ ಮಾತ್ರ ಆಚರಿಸಬಹುದು, ಅದಾದ ನಂತರ ಆಚರಿಸಬೇಕೆಂದಿದ್ದರೆ ಯಾವುದಾದರೂ ಮೈದಾನಗಳಲ್ಲಿ ಮಾತ್ರ ಆಚರಿಸಬೇಕು, ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ ಸಂಘಟಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂಬ ಆದೇಶವೊಂದನ್ನು ಹೊರಡಿಸಿದ್ದರು. ‘ಕೆಲವು ಸಾರ್ವಜನಿಕ ಸಂಘ ಸಂಸ್ಥೆ’ಗಳ ಮನವಿಯ ಮೇರೆಗೆ ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾಗಿ ಹೇಳಿಕೊಂಡಿದ್ದರು. ಪುಣ್ಯವಶಾತ್ ಮೇಘರಿಕ್ ಅವರಿಗೆ ತಮ್ಮಿಂದ ಆದ ಪ್ರಮಾದ ಗೊತ್ತಾಗಿ ರಾಜ್ಯೋತ್ಸವವನ್ನು ಸೀಮಿತಗೊಳಿಸುವ ಯಾವ ಉದ್ದೇಶವೂ ಪೊಲೀಸ್ ಇಲಾಖೆಗಿಲ್ಲ, ನಮ್ಮ ಸಹಕಾರವಿರುತ್ತದೆ. ರಾಜ್ಯೋತ್ಸವು ನಿತ್ಯೋತ್ಸವವಾಗಬೇಕು ಎಂಬುದಕ್ಕೆ ಇಲಾಖೆಯ ಸಂಪೂರ್ಣ ಬೆಂಬಲವಿರುತ್ತದೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಕನ್ನಡ ನಾಡು, ನುಡಿ, ಸಂಸ್ಕೃತಿಗಳ ಗಂಧಗಾಳಿಯಿಲ್ಲದಿದ್ದವರು ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆಗೆ ಏರಿದರೆ ಏನಾಗಬಹುದು ಎಂಬುದಕ್ಕೆ ಇದು ಉದಾಹರಣೆ ಅಷ್ಟೆ. ಮೇಘರಿಕ್ ಅವರು ರಾಜಸ್ತಾನದ ಐಪಿಎಸ್ ಕೇಡರ್. ಸಹಜವಾಗಿಯೇ ಅವರಿಗೆ ಕವಿರಾಜಮಾರ್ಗವೂ ಗೊತ್ತಿರಲು ಸಾಧ್ಯವಿಲ್ಲ, ಕುವೆಂಪು ಅವರೂ ಗೊತ್ತಿರಲು ಸಾಧ್ಯವಿಲ್ಲ. ಕರ್ನಾಟಕ ಏಕೀಕರಣಕ್ಕಾಗಿ ಜೀವತೆತ್ತ ರಂಜಾನ್ ಸಾಬ್ ಅಂಥವರ ಹೆಸರನ್ನು ಅವರೆಂದಿಗೂ ಕೇಳಿರರಲಾರರು. ಹೀಗಾಗಿ ರಾಜ್ಯೋತ್ಸವದ ಆಚರಣೆಯ ಹಿನ್ನೆಲೆಯೂ ಅವರಿಗೆ ಅರ್ಥವಾಗುವುದು ಕಷ್ಟ. ಮೇಘರಿಕ್ ಅವರು ಶುದ್ಧಹಸ್ತರು, ಪ್ರಾಮಾಣಿಕರು, ಹಿಂದೆ ಕೆಲಸ ಮಾಡಿದ ಕಡೆಯಲ್ಲೆಲ್ಲ ಘನತೆಯಿಂದ ಕಾರ್ಯನಿರ್ವಹಿಸಿದವರು ಎಂಬುದನ್ನು ಕೇಳಿದ್ದೇನೆ, ಆದರೆ ಇದಷ್ಟೇ ಒಬ್ಬ ಪೊಲೀಸ್ ಕಮಿಷನರ್‌ಗೆ ಇರಬೇಕಾದ ಅರ್ಹತೆಗಳಲ್ಲ. ತಾವು ಕೆಲಸ ಮಾಡುತ್ತಿರುವ ನಾಡಿನ ಇತಿಹಾಸ, ಸಂಸ್ಕೃತಿ, ಜನರ ನಾಡಿಮಿಡಿತಗಳೂ ಅವರಿಗೆ ಗೊತ್ತಿರಬೇಕು.

ಯಾವುದೇ ರಾಜ್ಯೋತ್ಸವ ಕಾರ್ಯಕ್ರಮಕ್ಕಾದರೂ ಪೊಲೀಸರು ಹಲವು ನಿಯಮಗಳನ್ನು ಹೇರುವ ಮೂಲಕವೇ ಅನುಮತಿ ನೀಡಿರುತ್ತಾರೆ. ರಾಜ್ಯೋತ್ಸವ ಎಂದಲ್ಲ, ಮೈಕ್ ಬಳಸಿ ರಸ್ತೆಯಲ್ಲಿ ನಡೆಸುವ ಯಾವುದೇ ಕಾರ್ಯಕ್ರಮವಾದರೂ ಪೊಲೀಸರ ನಿಯಮಾವಳಿಗಳಂತೆಯೇ ಆಚರಿಸಲಾಗುತ್ತದೆ. ರಾತ್ರಿ ೧೧ ಗಂಟೆಯ ನಂತರ ಮೈಕ್ ಬಳಸಬಾರದು ಎಂಬ ನಿಯಮವನ್ನೂ ಸೇರಿದಂತೆ ಹಲವು ಬಗೆಯ ನಿಯಮಗಳನ್ನು ಪಾಲಿಸಲಾಗುತ್ತದೆ. ಒಂದು ವೇಳೆ ಸಂಘಟಕರು ನಿಯಮಗಳನ್ನು ಮೀರಿದರೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವ ಅಧಿಕಾರವೂ ಪೊಲೀಸರಿಗಿರುತ್ತದೆ. ಪೊಲೀಸ್ ಇಲಾಖೆಗೆ ಕೊನೆಗೂ ಇದು ಅರ್ಥವಾಗಿದೆ.

ರಾಜ್ಯೋತ್ಸವದ ಆಚರಣೆ ಕುರಿತಂತೆ ಪೊಲೀಸ್ ಕಮಿಷನರ್ ಹೊರಡಿಸಿದ ಸುತ್ತೋಲೆ ಈಗ ಅವರ ಸ್ಪಷ್ಟನೆಯೊಂದಿಗೆ ಅಧಿಕೃತವಾಗಿ ಹಿಂದಕ್ಕೆ ಪಡೆದಂತಾಗಿದ್ದರೂ ಸಹ ಈ ವಿವಾದ ಒಂದಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಂಥ ಸುತ್ತೋಲೆ ಹೊರಗೆ ಬರಲು ಕಾರಣ ಏನು ಎಂಬುದನ್ನು ಪರಿಶೀಲಿಸಲೇಬೇಕಾಗಿದೆ. ಈ ಕನ್ನಡ ವಿರೋಧಿ ಸುತ್ತೋಲೆಯ ಕುರಿತಂತೆ ವಿವರಣೆ ನೀಡಿದ್ದ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದೆಂದು ಕೆಲವು ಸಾರ್ವಜನಿಕ ಹಿತರಕ್ಷಣಾ ಸಂಘಟನೆಗಳು ಮನವಿ ಮಾಡಿವೆ. ಅದಕ್ಕಾಗಿಯೇ ಈ ಸುತ್ತೋಲೆಯನ್ನು ಹೊರಡಿಸಲಾಗಿದೆಯೆಂದೂ, ಈ ಸುತ್ತೋಲೆ ಜನಪರವಾಗಿಯೇ ಇದೆಯೆಂದು ಸ್ಪಷ್ಟನೆ ನೀಡಿದ್ದರು. ಈಗ ಪೊಲೀಸರು, ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುಮತಿ ನೀಡಬೇಡಿ ಎಂದು ಮನವಿ ಮಾಡಿರುವ ಆ ‘ಸಾರ್ವಜನಿಕ ಹಿತರಕ್ಷಣಾ ಸಂಘಟನೆ’ಗಳು ಯಾವುವು ಎಂಬುದನ್ನು ಮೊದಲು ಬಹಿರಂಗ ಮಾಡಬೇಕಿದೆ.


ಯಾಕೆಂದರೆ, ಈ ಸಂಘಟನೆಗಳು ಸಾರ್ವಜನಿಕ ಹಿತರಕ್ಷಣೆಗಾಗಿ ಇವೆಯೋ ಅಥವಾ ಬೇರೆ ಇನ್ಯಾವುದಾದರೂ ‘ಹಿಡನ್ ಅಜೆಂಡಾ’ಗಳನ್ನು ಇಟ್ಟುಕೊಂಡಿರುವ ಸಂಘಟನೆಗಳೋ ಎಂಬುದು ಸಾರ್ವಜನಿಕವಾಗಿ ಗೊತ್ತಾಗಬೇಕಿದೆ. ಬೆಂಗಳೂರು ಈಗ ವಲಸಿಗರ ಸ್ವರ್ಗ. ‘ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ’ ಎಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿದ ನಾಡದ್ರೋಹಿ ಸಂಘಟನೆಗಳು ಇಲ್ಲಿ ಸಾರ್ವಜನಿಕ ಹಿತರಕ್ಷಣೆಯ ಮಾರುವೇಷದಲ್ಲಿ ಇವೆ. ಬೆಂಗಳೂರು ಅಭಿವೃದ್ಧಿಗೆ ನಾವೂ ದುಡಿಯುತ್ತೇವೆ ಎಂಬ ಘೋಷಣೆ ಮಾಡುತ್ತ, ಕಾರ್ಪರೇಟ್ ಸಂಸ್ಥೆಗಳ ಮತ್ತು ಅವುಗಳ ಸಂಸ್ಕೃತಿ ರಕ್ಷಣೆಗಾಗಿಯೇ ಪಣ ತೊಟ್ಟ ಆ ಪ್ಯಾಕು ಈ ಪ್ಯಾಕು ಸಂಘಟನೆಗಳೂ ಇವೆ. ಕನ್ನಡಿಗರ ಆಚರಣೆಗಳಿಗೆ ಮೂಗು ಮುರಿದರೂ ರಾತ್ರಿ ನೈಟ್ ಲೈಫ್‌ಗೆ ಮಾತ್ರ ತೊಂದರೆಯಾಗಬಾರದು, ಇಡೀ ರಾತ್ರಿ ಪಬ್ಬು-ಬಾರು-ಡಿಸ್ಕೋಥೆಕ್‌ಗಳು ತೆರೆದಿರಬೇಕು ಎಂದು ವಾದಿಸುವ ಕಾರ್ಪರೇಟ್ ಸಂಸ್ಕೃತಿಯ ವಾರಸುದಾರರೂ ಇಲ್ಲಿದ್ದಾರೆ. ಹೀಗಾಗಿ ಬೆಂಗಳೂರನ್ನು ಕನ್ನಡಿಗರಿಂದ ಕಿತ್ತುಕೊಳ್ಳಲು ಯತ್ನಿಸುತ್ತಿರುವ ಈ ಮಾರುವೇಷದ ಸಂಘಟನೆಗಳಿಗೆ ಪೊಲೀಸರು ಮಾರುಹೋಗಿದ್ದರಾ ಎಂಬುದಾದರೂ ನಮಗೆ ಗೊತ್ತಾಗಬೇಕಿದೆ.

ಬೆಂಗಳೂರಿನಲ್ಲಿ ಕನ್ನಡದ ವಾತಾವರಣಕ್ಕೆ ಅನಿಯಂತ್ರಿತ ವಲಸೆಯಿಂದಾಗಿ ಧಕ್ಕೆಯಾಗುತ್ತಿದೆ. ವಲಸೆಯನ್ನು ಸಂವಿಧಾನಬದ್ಧವಾಗಿ ನಿಯಂತ್ರಿಸುವುದು ಕಷ್ಟ. ನಾವು ಭಾರತ ಒಕ್ಕೂಟದ ಭಾಗವಾಗಿದ್ದೇವೆ ಎಂಬ ಕಾರಣಕ್ಕೆ ಈ ವಲಸೆಯನ್ನೂ ಸಹಿಸಿಕೊಳ್ಳಬೇಕಾಗಿ ಬಂದಿದೆ. ಕಡೇ ಪಕ್ಷ ಹೊರರಾಜ್ಯಗಳಿಂದ ಬಂದವರು ಇಲ್ಲಿನ ಭಾಷೆಯನ್ನು ಕಲಿತು, ಇಲ್ಲಿನ ಸಂಸ್ಕೃತಿಯನ್ನು ಗೌರವಿಸಬೇಕು. ಕರ್ನಾಟಕದಿಂದ ಬೇರೆ ರಾಜ್ಯಗಳಿಗೆ ವಲಸೆ ಹೋದ ಕನ್ನಡಿಗರು ಅಲ್ಲಿನ ಭಾಷೆಗಳನ್ನು ಕಲಿತು, ಅಲ್ಲಿನ ಸಂಸ್ಕೃತಿಯನ್ನು ಒಪ್ಪಿಕೊಂಡು ಅಲ್ಲಿಯವರೇ ಆಗಿಹೋಗಿದ್ದಾರೆ. ಹೀಗಿರುವಾಗ ಕರ್ನಾಟಕಕ್ಕೆ ಬರುವ ವಲಸಿಗರೂ ಕೂಡ ಇಲ್ಲಿನ ನುಡಿ-ಸಂಸ್ಕೃತಿಯನ್ನು ಗೌರವಿಸಲೇಬೇಕಲ್ಲವೇ? ಹೀಗಿರುವಾಗ ನವೆಂಬರ್ ತಿಂಗಳಲ್ಲಿ ನಡೆಯುವ ರಾಜ್ಯೋತ್ಸವ ತಕ್ಕಮಟ್ಟಿಗೆ ಬೆಂಗಳೂರಿನಲ್ಲಿ ಕನ್ನಡದ ವಾತಾವರಣವನ್ನು ನಿರ್ಮಿಸುವ ಕೆಲಸ ಮಾಡುತ್ತದೆ. ನಮ್ಮ ಸಂಭ್ರಮದ ಜತೆಗೆ ಪರಭಾಷಿಗರಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವೂ ಆಗುತ್ತದೆ. ಕನ್ನಡಿಗರ ಸಂಭ್ರಮವನ್ನು ನೋಡಿ ಸಹಿಸಿಕೊಳ್ಳಲು ಆಗದ ವಲಸಿಗರ ಕುತಂತ್ರಗಳು ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಪೊಲೀಸ್ ಇಲಾಖೆಗೆ ದೂರು ಕೊಟ್ಟವರೂ ಇಂಥವರೇ ಇರಬೇಕು.

ಹಿಂದೆ ೨೦೦೯ರಲ್ಲಿ ತಲೆ ಕೆಟ್ಟ ಅಧಿಕಾರಿಗಳ ಮಾತು ಕೇಳಿಕೊಂಡು ಸರ್ಕಾರಿ ಕಚೇರಿಗಳ ಮೇಲೆ ಕನ್ನಡ ಬಾವುಟ ಹಾರಿಸುವಂತಿಲ್ಲ ಎಂಬ ಆದೇಶವೊಂದನ್ನು ರಾಜ್ಯ ಸರ್ಕಾರ ಹೊರಡಿಸಿತ್ತು.  ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಯಾವುದೇ ಬಾವುಟವನ್ನು ಹಾರಿಸಬಾರದು ಎಂಬುದು ಕೇಂದ್ರ ಸರ್ಕಾರದ ನಿಯಮ. ಹಾಗೆಂದು ಬೇರೆ ಧ್ವಜಗಳನ್ನು ಹಾರಿಸಲೇಬಾರದು ಎಂದರೆ ಹೇಗೆ? ಸರ್ಕಾರದ ಈ ಆದೇಶದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಇತರ ಕನ್ನಡ ಸಂಘಟನೆಗಳು ತೀವ್ರವಾಗಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಆ ಆದೇಶವನ್ನು ಹಿಂದಕ್ಕೆ ಪಡೆಯಿತು. ಇದಾದ ನಂತರ ೨೦೧೨ರಲ್ಲಿ ರಾಜ್ಯ ಉಚ್ಛ ನ್ಯಾಯಾಲಯವೂ ಕೂಡ ಕನ್ನಡ ಧ್ವಜಕ್ಕೆ ಅಧಿಕೃತ ಮಾನ್ಯತೆ ಇಲ್ಲದೇ ಇರುವುದರಿಂದ ಅದನ್ನು ಹಾರಿಸುವಂತಿಲ್ಲ ಎಂದು ಆದೇಶ ನೀಡಿತ್ತು.

ಇದೆಲ್ಲವೂ ಏನನ್ನು ಸೂಚಿಸುತ್ತದೆ? ಭಾರತ ಒಕ್ಕೂಟದಲ್ಲಿ ಕರ್ನಾಟಕವು ಒಂದು ರಾಜ್ಯವಾಗಿ ಸೇರಿಕೊಂಡಿದ್ದೇ ದೊಡ್ಡ ತಪ್ಪಾಗಿ ಹೋಯಿತೆ? ಸ್ವಾತಂತ್ರ್ಯಾನಂತರ ಕರ್ನಾಟಕವೇ ಪ್ರತ್ಯೇಕ ರಾಷ್ಟ್ರವಾಗಿ ಉಳಿದುಕೊಳ್ಳಬೇಕಿತ್ತೇ? ನಮ್ಮ ನಾಡಿಗೊಂದು ಬಾವುಟ, ಅದಕ್ಕೊಂದು ಆಚರಣೆ ಇಲ್ಲವೆಂದಮೇಲೆ ಆತ್ಮಗೌರವವನ್ನು ಕಳೆದುಕೊಂಡು ನಾವು ಈ ಒಕ್ಕೂಟದ ಭಾಗವಾಗಿ ಇರಬೇಕೆ?

ನಾವು ಭಾರತ ಒಕ್ಕೂಟದ ಒಂದು ಭಾಗವಾಗಿದ್ದೇವೆ ಎಂಬುದು ನಿಜ. ಹಾಗೆಂದ ಮಾತ್ರಕ್ಕೆ ನಮ್ಮ ನುಡಿ, ಸಂಸ್ಕೃತಿ, ಪರಂಪರೆ, ಆಚರಣೆ, ಅಸ್ಮಿತೆ ಎಲ್ಲವನ್ನೂ ಕಳೆದುಕೊಂಡು ಬದುಕಬೇಕೆ? ಈ ನಾಡಿನ ಒಬ್ಬ ಸಣ್ಣ ಮಗುವಿಗೂ ಕನ್ನಡ ಬಾವುಟದ ಪರಿಚಯವಿದೆ. ಹಾಗಿರುವಾಗ ಬಾವುಟಕ್ಕೆ ಮಾನ್ಯತೆ ಇಲ್ಲ, ಯಾರೂ ಹಾರಿಸುವಂತಿಲ್ಲ ಎಂದು ಎಸಿ ಕೊಠಡಿಗಳಲ್ಲಿ ಕುಳಿತುಕೊಂಡ ಯಾವುದೋ ರಾಜ್ಯದಿಂದ ಬಂದ ನ್ಯಾಯಾಧೀಶರುಗಳು ಅಪ್ಪಣೆ ಹೊರಡಿಸಿದರೆ ಅದನ್ನು ನಾವು ಪರಿಪಾಲಿಸಬೇಕೆ?

ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರ ರಾಜ್ಯಗಳ ಅಧಿಕಾರಿಗಳು, ಉದ್ಯಮಿಗಳು, ಎಲ್ಲ ಕ್ಷೇತ್ರದವರು ಮೊದಲು ಕನ್ನಡ ಕಲಿಯಬೇಕು, ಕನ್ನಡದಲ್ಲಿ ಸಂವಹನ ನಡೆಸಬೇಕು, ಕನ್ನಡದಲ್ಲೇ ಆಡಳಿತ ನಡೆಸಬೇಕು. ಮಾತ್ರವಲ್ಲ, ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಗೌರವಿಸುವುದನ್ನು ಕಲಿಯಬೇಕು. ಇತರೆ ರಾಜ್ಯಗಳಿಂದ ಬರುವವರು ಸಹನಾಶೀಲರಾಗಿರಬೇಕು, ಈ ದೇಶದ ಬಹುತ್ವ ಸಂಸ್ಕೃತಿಯ ಕುರಿತು ಗೌರವ ಹೊಂದಿರುವವರಾಗಿರಬೇಕು. ಇನ್ನೊಂದು ರಾಜ್ಯದಲ್ಲಿ ಕೆಲಸ ಮಾಡುವಾಗ ಆ ರಾಜ್ಯದ ನುಡಿ-ಸಂಸ್ಕೃತಿಯನ್ನು ಅರಿತು, ಅಲ್ಲಿನ ಜನರ ಜತೆ ಭಾವನಾತ್ಮಕವಾಗಿಯೂ ಬೆಸೆದುಕೊಳ್ಳಬೇಕು. ಬೆಂಗಳೂರು ಪೊಲೀಸ್ ಕಮಿಷನರ್ ಮೇಘರಿಕ್ ಅವರೇನೋ ಆಗಿರುವ ಪ್ರಮಾದವನ್ನು ತಿದ್ದಿಕೊಂಡರು. ಆದರೆ ಹಲವು ದಪ್ಪಚರ್ಮದ ಪರಭಾಷಿಕ ಅಧಿಕಾರಿಗಳು ಈಗಲೂ ಕನ್ನಡ ನುಡಿ-ಸಂಸ್ಕೃತಿಯನ್ನು ಧಿಕ್ಕರಿಸಿ ಆಡಳಿತ ನಡೆಸುತ್ತಿದ್ದಾರೆ. ಇಂಥವರು ಬೇಗ ತಮ್ಮ ತಪ್ಪನ್ನು ತಿದ್ದಿಕೊಳ್ಳದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ಹೊರರಾಜ್ಯಗಳ ಅಧಿಕಾರಿಗಳನ್ನು ಅವರವರ ರಾಜ್ಯಗಳಿಗೇ ವಾಪಾಸ್ ಕಳಿಸಿ ಎಂಬ ಜನಾಂದೋಲನವನ್ನು ಹಮ್ಮಿಕೊಳ್ಳಬೇಕಾಗುತ್ತದೆ.

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ

Wednesday, 28 October 2015

ರಾಜ್ಯೋತ್ಸವಕ್ಕೆ ಮುನ್ನ ಮುಖ್ಯಮಂತ್ರಿಗಳಿಗೊಂದು ಬಹಿರಂಗ ಅಹವಾಲು


ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರಿಗೆ,
ಆದರ ಪೂರ್ವಕ ನಮಸ್ಕಾರಗಳು ಹಾಗು ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಮತ್ತೆ ರಾಜ್ಯೋತ್ಸವ ಬಂದಿದೆ. ಕನ್ನಡಿಗರ ಸಮಸ್ಯೆಗಳು ಮಿತಿ ಮೀರಿ ಬೆಳೆಯುತ್ತಲೇ ಇದೆ. ಅದಕ್ಕಾಗಿ ನನ್ನ ಬಹಿರಂಗ ಅಹವಾಲುಗಳನ್ನು ನಿಮ್ಮ ಮುಂದಿರಿಸುತ್ತಿದ್ದೇನೆ.

ಈ ಬಾರಿಯೂ ರಾಜ್ಯೋತ್ಸವದ ಸಂಭ್ರಮ ಕಾಣಿಸುತ್ತಿಲ್ಲ. ರೈತರು ಸಾಲುಸಾಲಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವ ಆತಂಕಕಾರಿ ವಿದ್ಯಮಾನಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಅತ್ತ ಮಹದಾಯಿಯನ್ನು ಮಲಪ್ರಭೆಗೆ ಸೇರಿಸುವ ಮೂಲಕ ಐದಾರು ಜಿಲ್ಲೆಗಳಿಗೆ ನೀರಾವರಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಿ ಎಂದು ಉತ್ತರ ಕರ್ನಾಟಕ ಭಾಗದ ರೈತರು ಚಳವಳಿಗೆ ತೊಡಗಿ ನೂರು ದಿನಗಳು ಕಳೆದುಹೋಗಿವೆ. ಇನ್ನೊಂದೆಡೆ ರಾಯಚೂರಿಗೆ ಐಐಟಿ ಸಿಗಲಿಲ್ಲವೆಂಬ ಕಾರಣಕ್ಕೆ ಆ ಭಾಗದ ಜನರು ಮುನಿಸಿಕೊಂಡಿದ್ದಾರೆ. ರಾಜ್ಯೋತ್ಸವದ ದಿನವನ್ನು ಕರಾಳ ದಿನವನ್ನಾಗಿ ಆಚರಿಸುತ್ತೇವೆ ಎಂದು ಈ ಭಾಗಗಳ ಜನರು ನೊಂದು ನುಡಿಯುತ್ತಿದ್ದಾರೆ. ಎತ್ತಿನಹೊಳೆ ಯೋಜನೆ ಜಾರಿಯಾಗಬೇಕು ಎಂದು ಬಾಯಾರಿ ಬಳಲಿರುವ ಬಯಲುಸೀಮೆಯ ಜನರು ಬೇಡಿಕೊಳ್ಳುತ್ತಿದ್ದರೆ, ಈ ಯೋಜನೆಯಿಂದ ನಮ್ಮ ಬದುಕು ಮೂರಾಬಟ್ಟೆಯಾಗುತ್ತದೆ, ಹೀಗಾಗಿ ಯೋಜನೆ ಜಾರಿಗೆ ಅವಕಾಶ ನೀಡೆವು ಎಂದು ಕರಾವಳಿಯ ಜನರು ಸಿಟ್ಟಿಗೆದ್ದಿದ್ದಾರೆ. ರಾಜ್ಯದ ಎಲ್ಲೆಡೆ ತೀವ್ರ ಬರಗಾಲವಿದೆ, ಹೀಗಾಗಿ ಕುಡಿಯುವ ನೀರು, ವಿದ್ಯುತ್ ಇಲ್ಲದೆ ಜನರು ನರಳುವಂತಾಗಿದೆ. ದಿನೋಪಯೋಗಿ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ, ಬಡಜನರ ಬದುಕು ದುಸ್ತರವಾಗುತ್ತಲೇ ಹೋಗುತ್ತಿದೆ.

ಇದೆಲ್ಲ ಸಮಸ್ಯೆಗಳ ನಡುವೆ ದೇಶದ ಯಾವ ಒಕ್ಕೂಟ ರಾಜ್ಯವೂ ಅನುಭವಿಸದ ಸಮಸ್ಯೆಗಳನ್ನು ನಮ್ಮ ರಾಜ್ಯ ಎದುರಿಸಬೇಕಾಗಿದೆ. ಎಲ್ಲ ರಾಜ್ಯಗಳೂ ಸಮಾನ ಅವಕಾಶ, ಹಕ್ಕು, ಗೌರವಗಳನ್ನು ಪಡೆಯಬೇಕಾದ ಈ ಭಾರತ ಒಕ್ಕೂಟದಲ್ಲಿ ಕರ್ನಾಟಕ ಪದೇಪದೇ ಕಡೆಗಣಿಸಲ್ಪಟ್ಟಿದೆ ಮತ್ತು ವಂಚನೆಗೆ ಈಡಾಗುತ್ತ ಬರುತ್ತಿದೆ. ದೇಶಭಕ್ತಿಯ ಹೆಸರಿನಲ್ಲಿ ನಾಡಪ್ರೇಮ ಮುಕ್ಕಾಗುತ್ತಿದೆ. ಕನ್ನಡಿಗರ ಸ್ವಾಯತ್ತತೆ ಮಣ್ಣುಪಾಲಾಗಿದೆ. ‘ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಿರಬೇಕು’ ಎಂಬ ನಮ್ಮ ಆಶಯಕ್ಕೆ ಪದೇಪದೇ ಧಕ್ಕೆ ಬಂದೊದಗುತ್ತಿದೆ. ಕರ್ನಾಟಕ ವಲಸಿಗರ ಸ್ವರ್ಗವಾಗಿ ಕನ್ನಡಿಗರ ಅಸ್ಮಿತೆಯನ್ನೇ ನಿರಾಕರಿಸಲಾಗುತ್ತಿದೆ.

ನೀವು ಕನ್ನಡ ಕಾವಲು ಸಮಿತಿಯ (ಈಗಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷರಾಗಿದ್ದವರು. ನಿಮ್ಮ ರಾಜಕೀಯ ಜೀವನದ ಮೊದಲ ಹಂತದಲ್ಲೇ ಈ ಹುದ್ದೆಯನ್ನೇರಿ ಕೆಲಸ ಮಾಡಿದವರು. ಹೀಗಾಗಿ ಕನ್ನಡಿಗರ ಸಮಸ್ಯೆಗಳೇನು? ಅವುಗಳಿಗೆ ಕಂಡುಕೊಳ್ಳಬಹುದಾದ ಪರಿಹಾರಗಳೇನು ಎಂಬುದು ನಿಮಗೆ ಚೆನ್ನಾಗಿಯೇ ಗೊತ್ತಿದೆ. ಆದರೆ ನೀವು ಮುಖ್ಯಮಂತ್ರಿಯಾಗಿರುವ ಈ ಹೊತ್ತಿನಲ್ಲೂ ಕನ್ನಡಿಗರ ಸಮಸ್ಯೆಗಳು ಬೆಳೆಯುತ್ತಲೇ ಇವೆ. ಇದು ನನ್ನಂಥವರಿಗೆ ಅತ್ಯಂತ ನಿರಾಶೆಯನ್ನು ತರುತ್ತಿದೆ.
ರಾಜ್ಯೋತ್ಸವದ ಈ ಸಂದರ್ಭದಲ್ಲಿ ನಾವು ಮೊಟ್ಟ ಮೊದಲು ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ ಭಾರತ ಒಕ್ಕೂಟದಲ್ಲಿ ನಮಗೆ ಗೌರವಯುತ ಸ್ಥಾನಮಾನ, ಪಾಲು, ಅಧಿಕಾರ, ಸೌಲಭ್ಯಗಳು ದೊರೆತಿದೆಯೇ ಎಂಬುದು. ಇದಕ್ಕೆ ‘ಇಲ್ಲ’ ಎಂಬ ನಿರಾಶೆಯ ಉತ್ತರವೇ ನಮ್ಮ ಮುಂದೆ ನಿಂತು ನಮ್ಮನ್ನು ಹಂಗಿಸುತ್ತಿದೆ. ದೇಶದ ಅಭಿವೃದ್ಧಿಗೆ ನಮ್ಮ ರಾಜ್ಯವೇನೋ ಸಿಂಹಪಾಲು ನೀಡುತ್ತಿದೆ. ಆದರೆ ಕರ್ನಾಟಕವನ್ನು ಮಾತ್ರ ಈ ಒಕ್ಕೂಟ ವ್ಯವಸ್ಥೆ ಮಲತಾಯಿ ಧೋರಣೆಯಿಂದಲೇ ನೋಡಿಕೊಂಡು ಬಂದಿದೆ. ಕೋರ್ಟುಗಳು ನಮಗೆ ಅನ್ಯಾಯವೆಸಗಿವೆ. ಎಲ್ಲ ರಾಜ್ಯಗಳನ್ನು ಒಂದು ತಾಯಿಯ ಮಕ್ಕಳಂತೆ ನೋಡಬೇಕಾದ ಕೇಂದ್ರ ಸರ್ಕಾರಗಳು (ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಸಹ) ಕರ್ನಾಟಕವನ್ನು ಕಡೆಗಣಿಸುತ್ತಲೇ ಬಂದಿವೆ.

ಒಕ್ಕೂಟದ ಎಲ್ಲ ರಾಜ್ಯಗಳು ತಮ್ಮ ತಮ್ಮ ಭಾಷೆ, ಸಂಸ್ಕೃತಿ ರಕ್ಷಣೆಯನ್ನು, ಅದರ ಪೋಷಣೆಯನ್ನು ಮಾಡಿಕೊಂಡು ಬರುವ ಅಧಿಕಾರ ಹೊಂದಿರುತ್ತವೆ ಎಂದು ಸಂವಿಧಾನವೇ ಹೇಳುತ್ತದೆ. ಆದರೆ ನ್ಯಾಯಾಲಯಗಳ ಹಸ್ತಕ್ಷೇಪದಿಂದ ಸರ್ಕಾರಗಳ ತೀರ್ಮಾನಗಳು ಕಸದ ಬುಟ್ಟಿಗೆ ಸೇರುತ್ತಿವೆ. ಮಾತೃಭಾಷಾ ಶಿಕ್ಷಣ ನೀತಿಗೆ ಸುಪ್ರೀಂ ಕೋರ್ಟ್ ಈಗಾಗಲೇ ಚರಮಗೀತೆ ಹಾಡಿದೆ. ಅದರ ವಿರುದ್ಧ ಸಂವಿಧಾನ ತಿದ್ದುಪಡಿಯನ್ನು ತಂದು ಎಲ್ಲ ಭಾಷಿಕ ಸಮುದಾಯಗಳನ್ನು, ಜನನುಡಿಗಳನ್ನು ರಕ್ಷಿಸಬೇಕು ಎಂಬ ನಮ್ಮ ಕೋರಿಕೆ ಈಡೇರಲೇ ಇಲ್ಲ. ಇದಕ್ಕಾಗಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಮಾತನಾಡಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಕಾರ್ಯ ಮಾಡಿ ಎಂದು ನಾವು ನಿಮ್ಮನ್ನು ಕೇಳಿಕೊಂಡೆವು. ಆದರೆ ನಿಮ್ಮ ಕಡೆಯಿಂದ ಆ ಪ್ರಯತ್ನ ನಡೆಯುತ್ತಿಲ್ಲ. ಶಿಕ್ಷಣ ಮಾಧ್ಯಮ ಕನ್ನಡವಾಗಿ ಉಳಿಯದೇ ಹೋದರೆ ವರ್ಷಗಳು ಕಳೆದಂತೆ ಕನ್ನಡವೂ ನಾಶವಾಗುತ್ತದೆ. ಭಾರತ ಒಂದು ದೇಶವಾಗಿದೆ ಎಂಬ ಒಂದೇ ಕಾರಣಕ್ಕೆ ನಾವು ನಮ್ಮ ಭಾಷೆಯನ್ನು ಕಳೆದುಕೊಳ್ಳಬೇಕೇ? ಭಾರತ ಒಂದು ದೇಶವಾಗುವುದಕ್ಕೂ ಮುನ್ನ ಇದು ಹಲವು ರಾಜ್ಯಗಳ ಒಕ್ಕೂಟ ಎಂಬುದನ್ನು ಮರೆಯಲು ಸಾಧ್ಯವೇ? ಇಂಥ ವಿಷಯಗಳ ಕುರಿತು ಪ್ರತಿರೋಧ ತೋರಬೇಕಿದ್ದ, ದೇಶದ ಎಲ್ಲ ಭಾಷಿಕ ಸಮುದಾಯಗಳನ್ನು ಒಗ್ಗೂಡಿಸಿ ಸಂವಿಧಾನ ತಿದ್ದುಪಡಿಗಾಗಿ ಆಗ್ರಹಿಸಬೇಕಿದ್ದ ನಿಮ್ಮ ಮೌನ ನಿಜಕ್ಕೂ ಅಚ್ಚರಿಯೆನಿಸುತ್ತಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ಯಾವ ರಾಜ್ಯದ ಜನರು ಇನ್ಯಾವುದೇ ರಾಜ್ಯಕ್ಕೆ ಹೋಗಿ ನೆಲೆಸಬಹುದು, ಎಲ್ಲಿ ಬೇಕಾದರೂ ತಮ್ಮ ಬದುಕನ್ನು ರೂಪಿಸಿಕೊಳ್ಳಬಹುದು. ಈ ನೀತಿಯ ಪರಿಣಾಮ ಏನಾಗಿದೆ ನೋಡಿ. ಪ್ರತಿನಿತ್ಯ ಸಾವಿರಾರು ಮಂದಿ ಹೊರರಾಜ್ಯಗಳಿಂದ ವಲಸಿಗರು ಬಂದು ಬೆಂಗಳೂರು, ಮೈಸೂರು ಮತ್ತಿತರ ನಗರಗಳಲ್ಲಿ ನೆಲೆ ನಿಲ್ಲುತ್ತಿದ್ದಾರೆ. ಹೀಗೇ ಮುಂದುವರೆದರೆ ಕನ್ನಡಿಗರೇ ಅಲ್ಪಸಂಖ್ಯಾತರಾಗಿ ಬಾಳುವ ದುರ್ಗತಿ ಬಂದೊದಗಿದರೂ ಆಶ್ಚರ್ಯವಿಲ್ಲ. ವಿಶೇಷವಾಗಿ ಉತ್ತರ ಭಾರತದಿಂದ ಆಗುತ್ತಿರುವ ವಲಸೆ ಎಷ್ಟು ಪ್ರಮಾಣದಲ್ಲಿದೆಯೆಂದರೆ ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಹಿಂದೀವಾಲಾಗಳದ್ದೇ ಅಬ್ಬರವಾಗಿಹೋಗಿದೆ. ವಲಸಿಗರು ಕನ್ನಡ ಕಲಿತು, ಇಲ್ಲಿನ ಜನರೊಂದಿಗೆ ಬೆರೆಯುವ ಬದಲು, ತಮ್ಮ ಭಾಷೆಯನ್ನೇ ಅದರಲ್ಲೂ ವಿಶೇಷವಾಗಿ ಹಿಂದಿಯನ್ನು ಕಲಿಯುವಂತೆ ಕನ್ನಡಿಗರ ಮೇಲೆ ಒತ್ತಡ ಹೇರುತ್ತಿದ್ದಾರೆ.

ಇದಕ್ಕಿಂತ ಗಂಭೀರ ಸಮಸ್ಯೆ ಏನೆಂದರೆ ಕನ್ನಡಿಗರ ಆಸ್ತಿ ಈಗ ಕೈ ತಪ್ಪಿ ಹೋಗುತ್ತಿದೆ. ಎಲ್ಲೆಡೆ ಪರಭಾಷಿಗರದೇ ಆರ್ಭಟ. ಪರಭಾಷಿಗರು ನಿಧಾನವಾಗಿ ಕರ್ನಾಟಕದ ರಾಜಕಾರಣದ ಮೇಲೂ ಹಿಡಿತ ಸಾಧಿಸುತ್ತಿದ್ದಾರೆ. ನಮ್ಮ ರಾಜಕಾರಣಿಗಳೂ, ರಾಜಕೀಯ ಪಕ್ಷಗಳೂ ಸಹ ಮತಬ್ಯಾಂಕ್ ರಾಜಕಾರಣಕ್ಕಾಗಿ ಭಾಷಾ ಅಲ್ಪಸಂಖ್ಯಾತರ ಬೆನ್ನುಬಿದ್ದಿದ್ದಾರೆ. ಇದರ ಪರಿಣಾಮ ನೇರವಾಗಿ ಕನ್ನಡಿಗರ ಮೇಲೆ, ಕನ್ನಡ ಸಂಸ್ಕೃತಿಯ ಮೇಲೆ ಆಗುತ್ತಿದೆ. ಹೀಗಿರುವಾಗ ಈ ಅನಿಯಂತ್ರಿತ ವಲಸೆಯನ್ನು ನೀವಾದರೂ ತಡೆಯಬಹುದು ಎಂಬ ನಮ್ಮ ನಂಬುಗೆಯೂ ಹುಸಿಯಾಗಿದೆ. ವಲಸೆಯನ್ನು ತಡೆಯಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ನೀವು ಸಬೂಬು ಹೇಳಬಹುದು. ಆದರೆ ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ದಕ್ಕಬೇಕು ಎಂಬ ಸಂಕಲ್ಪವೊಂದನ್ನು ನೀವು ತೊಟ್ಟರೆ ಸಾಕು, ವಲಸೆ ಒಂದು ಹಂತದಲ್ಲಿ ನಿಯಂತ್ರಣಕ್ಕೆ ಬರುತ್ತದೆ. ಇದಕ್ಕಾಗಿ ಬೇರೇನೂ ಮಾಡಬೇಕಿಲ್ಲ. ಡಾ.ಸರೋಜಿನಿ ಮಹಿಷಿ ವರದಿಯನ್ನು ಈಗಿನ ಕಾಲಕ್ಕೆ ತಕ್ಕಂತೆ ಮಾರ್ಪಾಡು ಮಾಡಿ ಜಾರಿಗೊಳಿಸಿದರೆ ಸಾಕು, ಆದರೆ ನಿಮ್ಮ ಸರ್ಕಾರಕ್ಕೆ ಆ ಇಚ್ಛಾಶಕ್ತಿ ಇದ್ದ ಹಾಗೆ ಕಾಣುತ್ತಿಲ್ಲ.

ನಿಮ್ಮ ಹಿಂದೆ ಇದ್ದ ಬಿಜೆಪಿ ಸರ್ಕಾರವೂ ಬಂಡವಾಳಶಾಹಿಗಳನ್ನು ಆಕರ್ಷಿಸುವ ಸಲುವಾಗಿ ಗ್ಲೋಬಲ್ ಇನ್ವೆಸ್ಟರ್‍ಸ್ ಮೀಟ್‌ನಂಥ ಬೃಹತ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು. ಈಗ ನೀವೂ ಸಹ ಇದನ್ನೇ ಮುಂದುವರೆಸುತ್ತಿದ್ದೀರಿ. ಬಂಡವಾಳಶಾಹಿಗಳಿಂದಲೇ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂಬ ಭ್ರಮೆಯನ್ನು ಈಗಾಗಲೇ ಬಿತ್ತಲಾಗಿದೆ. ಹೀಗಾಗಿ ನೀವು ಬಂಡವಾಳಶಾಹಿಗಳನ್ನು ಆಕರ್ಷಿಸಲು ರಿಯಾಯಿತಿ ದರದಲ್ಲಿ ಜಮೀನು, ರಿಯಾಯಿತಿ ದರದಲ್ಲಿ ವಿದ್ಯುತ್-ನೀರು, ತೆರಿಗೆ ಮನ್ನಾ, ತೆರಿಗೆ ರಜೆ ಅಥವಾ ತೆರಿಗೆ ರಿಯಾಯಿತಿ ಇತ್ಯಾದಿ ಸವಲತ್ತುಗಳನ್ನು ನೀಡುತ್ತೀರಿ. ಹೀಗೆಲ್ಲ ಸವಲತ್ತು ನೀಡುವಾಗ, ಅವರ ಸಂಸ್ಥೆಗಳಲ್ಲಿ ಶೇ. ೯೦ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೇ ಮೀಸಲಿಡಬೇಕು ಎಂಬ ಷರತ್ತನ್ನು ವಿಧಿಸಲು ಏನು ಸಮಸ್ಯೆ? ಈ ಬಂಡವಾಳಶಾಹಿಗಳಿಗಾಗಿ ರಾಜ್ಯದ ರೈತರು ತಮ್ಮ ಅಮೂಲ್ಯ ಜಮೀನನ್ನು ಬಿಟ್ಟುಕೊಟ್ಟಿದ್ದಾರೆ ಎಂಬುದನ್ನು ಮರೆಯಲು ಸಾಧ್ಯವೇ? ಈ ಸಂಸ್ಥೆಗಳು ಕನ್ನಡಿಗರಿಗಾಗಿ ಏನು ಮಾಡಿವೆ ಎಂಬುದರ ಅಂಕಿಅಂಶವನ್ನೇನಾದರೂ ಗಮನಿಸಿದ್ದೀರಾ?

ಖಾಸಗಿ ಸಂಸ್ಥೆಗಳ ವಿಷಯ ಹಾಗಿರಲಿ, ರೈಲ್ವೆ, ಬ್ಯಾಂಕಿಂಗ್, ವಿಮಾ ಕ್ಷೇತ್ರದಲ್ಲೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯಗಳು ನಿಮ್ಮ ಗಮನಕ್ಕೆ ಬಂದಿಲ್ಲವೇ? ಇದರ ವಿರುದ್ಧ ಒಂದು ಸರ್ಕಾರವಾಗಿ ನಿಮ್ಮ ನಿಲುವೇನು? ಇತರೆ ರಾಜ್ಯಗಳು ತಮ್ಮ ತಮ್ಮ ಭಾಷಿಕ ಸಮುದಾಯಗಳಿಗೆ ಶೇ. ೮೦ರಿಂದ ೯೦ರಷ್ಟು ಉದ್ಯೋಗ ಮೀಸಲಾತಿಯನ್ನು ನೀಡುವ ಕಾನೂನುಗಳನ್ನು ಮಾಡಿಕೊಂಡಿವೆ. ಒರಿಸ್ಸಾ, ಮಹಾರಾಷ್ಟ್ರ ರಾಜ್ಯಗಳಿಗೆ ಸಾಧ್ಯವಾಗಿದ್ದು ಕರ್ನಾಟಕಕ್ಕೆ ಯಾಕೆ ಸಾಧ್ಯವಾಗುವುದಿಲ್ಲ. ಆ ರಾಜ್ಯಗಳಿಗೊಂದು ಸಂವಿಧಾನ, ನಮ್ಮ ರಾಜ್ಯಕ್ಕೊಂದು ಸಂವಿಧಾನ ಜಾರಿಯಲ್ಲಿದೆಯೇ?

ಮುಖ್ಯಮಂತ್ರಿಗಳೇ, ಸಮಸ್ಯೆ ನೂರೆಂಟು ಇವೆ. ನಾವು ಕನ್ನಡ ಚಳವಳಿಗಾರರು ಪದೇ ಪದೇ ಚಳವಳಿಯ ಮೂಲಕ ಇದನ್ನೆಲ್ಲ ನಿಮ್ಮ ಮುಂದಿಡುತ್ತಲೇ ಬಂದಿದ್ದೇವೆ. ಅದಕ್ಕಾಗಿ ನೀವು ನಮಗೆ ಕೊಡುವ ಉಡುಗೊರೆ ಪೊಲೀಸ್ ಕೇಸುಗಳು, ಜೈಲುವಾಸ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ತಮ್ಮ ಪಕ್ಷದ, ತಮ್ಮ ಪಕ್ಷದ ಪರವಾದ ಸಂಘಟನೆಗಳ ಮೇಲಿದ್ದ ಕ್ರಿಮಿನಲ್ ಕೇಸುಗಳನ್ನು ಹಿಂದಕ್ಕೆ ಪಡೆದರು. ನೀವು ಅಧಿಕಾರಕ್ಕೆ ಬಂದಮೇಲೆ ನಿಮಗೆ ಬೇಕಾದವರ ಕೇಸುಗಳನ್ನು ಹಿಂದಕ್ಕೆ ಪಡೆದಿರಿ. ಆದರೆ ನಾಡು-ನುಡಿಗಾಗಿ ಚಳವಳಿ ನಡೆಸಿದ ನಮ್ಮಗಳ ಮೇಲಿರುವ ಸಾವಿರಾರು ಕೇಸುಗಳು ಹಾಗೆಯೇ ಇವೆ. ನಾವು ಕೋರ್ಟು, ಜೈಲು ಅಲೆದುಕೊಂಡು ನಮ್ಮ ಹೋರಾಟ ಮುಂದುವರೆಸಿದ್ದೇವೆ.

ಸಮಸ್ಯೆಗಳು ನೂರೆಂಟು ಇವೆ. ಕೆಲವು ನಿಮ್ಮ ವ್ಯಾಪ್ತಿಯನ್ನು ಮೀರಿದ ಸಮಸ್ಯೆಗಳಿರಬಹುದು ನಿಜ. ಆದರೆ ರಾಜ್ಯದ ಮುಖ್ಯಮಂತ್ರಿಯಾದವರಿಗೆ ಈ ನಾಡನ್ನು ಕಾಪಾಡುವ ಹೊಣೆಯೇ ಮೊದಲಿನದ್ದು. ನಾಡನ್ನು ಕಾಪಾಡುವುದೆಂದರೆ ಈ ನಾಡಿನ ಜನರನ್ನು, ಅವರಾಡುವ ನುಡಿಯನ್ನು, ಅವರ ಸಂಸ್ಕೃತಿಯನ್ನು ಕಾಪಾಡುವುದು ಎಂದರ್ಥ. ಬರಿಯ ಘೋಷಣೆಗಳಿಂದ, ಭಾಷಾಭಿಮಾನದ ಮಾತುಗಳಿಂದ ಈ ನಾಡನ್ನು ರಕ್ಷಿಸಲಾಗದು. ಅದು ನಿಮಗೂ ಚೆನ್ನಾಗಿ ಗೊತ್ತಿದೆ. ಬೇಕಿರುವುದು ರಾಜಕೀಯ ಇಚ್ಛಾಶಕ್ತಿ ಮತ್ತು ಒಟ್ಟು ನಾಡನ್ನು ಕಾಪಾಡುವ ಕ್ರಿಯಾಶಕ್ತಿ. ನಿಮ್ಮ ಉಳಿದ ಅಧಿರಾವಧಿಯಲ್ಲಾದರೂ ಅದನ್ನು ಪ್ರದರ್ಶಿಸಬೇಕು ಎಂಬುದು ನನ್ನ ಆಗ್ರಹ.

ಅನ್ನಭಾಗ್ಯದಂಥ ಯೋಜನೆಗಳು ಜನರ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರಗಳು ಮಾತ್ರ. ನಮ್ಮ ರೈತರು, ಕೂಲಿ ಕಾರ್ಮಿಕರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕಿದೆ. ಕನ್ನಡದ ಮಕ್ಕಳಿಗೆ ಅತ್ಯಗತ್ಯವಾದ ಶಿಕ್ಷಣ ಮತ್ತು ಉದ್ಯೋಗವನ್ನು ದೊರಕಿಸಿಕೊಡುವ ಕಾರ್ಯ ಆಗಬೇಕಿದೆ. ರಾಜ್ಯದಲ್ಲಿ ಕುಂಟುತ್ತ ಸಾಗಿರುವ ಎಲ್ಲ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿದರೆ ನಾಡು ಸುಭಿಕ್ಷವಾಗದೇ ಇದ್ದೀತೆ? ಸರ್ಕಾರದ ಎಲ್ಲ ಯೋಜನೆಗಳು ಕಟ್ಟಕಡೆಯ ಮನುಷ್ಯನವರೆಗೆ ತಲುಪುವಂಥ ಪಾರದರ್ಶಕ, ಭ್ರಷ್ಟಾಚಾರ ರಹಿತ ವ್ಯವಸ್ಥೆ ಜಾರಿಗೆ ಬರಬೇಕಿದೆ. ಆಗ ಮಾತ್ರ ಬಡಜನರ ಪರವಾದ ಮುಖ್ಯಮಂತ್ರಿ ಎಂದು ನೀವು ಗಳಿಸಲು ಬಯಸುತ್ತಿರುವ ಕೀರ್ತಿಯೂ ಲಭಿಸುತ್ತದೆ.

ಮಾನ್ಯ ಮುಖ್ಯಮಂತ್ರಿಗಳೇ, ಈಗಲೂ ಕಾಲ ಮಿಂಚಿಲ್ಲ. ರಾಜ್ಯೋತ್ಸವದ ಈ ಸಂದರ್ಭದಲ್ಲಿ ನೀವು ಮತ್ತು ನಿಮ್ಮ ಸರ್ಕಾರ ಹೊಸನಾಡೊಂದನ್ನು ಕಟ್ಟುವ ಸಂಕಲ್ಪವನ್ನು ತೊಡಬೇಕಿದೆ. ಕನ್ನಡಿಗರ ಕನಸುಗಳನ್ನು ಸಾಕಾರಗೊಳಿಸುವ ದೊಡ್ಡ ಹೊಣೆ ನಿಮ್ಮ ಮುಂದಿದೆ. ಅದನ್ನು ಇನ್ನಾದರೂ ಮಾಡಬಹುದೆಂಬ ನಿರೀಕ್ಷೆ ನನ್ನದು.

ಗೌರವಾದರಗಳೊಂದಿಗೆ
ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ