ಈ ಲೇಖನವನ್ನು ಆರಂಭ ಮಾಡುವ ಮೊದಲೇ ನಾನು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ನಾವು, ಚಳವಳಿಗಾರರು ಪೊಲೀಸರು ಹೂಡುವ ಮೊಕದ್ದಮೆಗಳಿಗೆ, ಜೈಲುವಾಸಕ್ಕೆ ಹೆದರುವವರಲ್ಲ. ಅಷ್ಟು ಮಾತ್ರ ಯಾಕೆ, ಪೊಲೀಸರ ಲಾಠಿ ಏಟು, ಬೂಟಿನ ಏಟು ತಿಂದವರು ನಾವು. ಅದಕ್ಕೂ ನಾವು ಭೀತಿ ಪಡುವುದಿಲ್ಲ. ಪದೇ ಪದೇ ನಾನು ಒಂದು ಮಾತನ್ನು ಹೇಳುತ್ತಿರುತ್ತೇನೆ; ಮೈಯಲ್ಲಿ ಕೊನೆಯ ಹನಿ ರಕ್ತ ಇರುವವರೆಗೂ ನೆಲಕ್ಕಾಗಿ, ನಾಡು-ನುಡಿಗಾಗಿ ಹೋರಾಟ ಮಾಡಿ ಈ ಸ್ವರ್ಗಭೂಮಿಯಲ್ಲಿ ಪ್ರಾಣ ಬಿಡುತ್ತೇವೆಯೇ ಹೊರತು ಹೆದರಿ ಹಿಂದಕ್ಕೆ ಹೋಗುವ ಪ್ರಶ್ನೆಯೇ ಇಲ್ಲ.
ಚಳವಳಿ ಎಂದರೇನೇ ಪ್ರಭುತ್ವವನ್ನು ಎದುರುಹಾಕಿಕೊಳ್ಳುವ ಪ್ರಕ್ರಿಯೆ. ಯಾವುದೇ ಪ್ರಭುತ್ವವೂ ತನ್ನನ್ನು, ತನ್ನ ನಿಲುವನ್ನು ವಿರೋಧಿಸುವವರೆಡೆಗೆ ಒಂದು ಬಗ್ಗೆಯ ಅಸಹನೆಯನ್ನು ಇಟ್ಟುಕೊಂಡಿರುತ್ತದೆ. ಅದು ರಾಜಪ್ರಭುತ್ವವಾದರೂ ಸರಿ, ಪ್ರಜಾಪ್ರಭುತ್ವವಾದರೂ ಸರಿ ಅಥವಾ ಮಿಲಿಟರಿ ಆಡಳಿತವಾದರೂ ಕೂಡ. ಮಿಕ್ಕೆಲ್ಲ ರಾಜಕೀಯ ವ್ಯವಸ್ಥೆಗಳಿಗಿಂತ ಪ್ರಜಾಪ್ರಭುತ್ವ ಮೇಲು. ಯಾಕೆಂದರೆ ಇತರೆ ಆಡಳಿತ ವ್ಯವಸ್ಥೆಗಳ ಹಾಗೆ ಪ್ರಜಾಪ್ರಭುತ್ವದಲ್ಲಿ ಜನರ ಹೋರಾಟವನ್ನು ಅಷ್ಟು ಸುಲಭವಾಗಿ ಹತ್ತಿಕ್ಕಲು ಸಾಧ್ಯವಿರುವುದಿಲ್ಲ.
ಆದರೆ ಎಷ್ಟೋ ಸಂದರ್ಭಗಳಲ್ಲಿ ಆಳುವ ಸ್ಥಾನದಲ್ಲಿ ಕುಳಿತುಕೊಂಡ ರಾಜಕಾರಣಿಗಳು ಸರ್ವಾಧಿಕಾರಿಗಳ ಹಾಗೆಯೇ ವರ್ತಿಸುತ್ತಾರೆ. ತಮಗೆ ದಕ್ಕಿದ ಅಧಿಕಾರ ಶಾಶ್ವತವೆಂಬ ಭ್ರಮೆಯಲ್ಲೇ ಇರುತ್ತಾರೆ. ತಮ್ಮ ವಿರುದ್ಧ ಕೇಳಿಬರುವ ಯಾವುದೇ ಧ್ವನಿಯನ್ನು ಹತ್ತಿಕ್ಕುವ ದುಷ್ಟತನವನ್ನು ಕಾರ್ಯವನ್ನು ನಡೆಸುತ್ತಲೇ ಇರುತ್ತಾರೆ.
ದುರದೃಷ್ಟವೆಂದರೆ ಕನ್ನಡ ಚಳವಳಿಗಾರರನ್ನು ಸಹ ಸರ್ಕಾರಗಳು ತಮ್ಮ ಶತ್ರುಗಳೆಂದೇ ಪರಿಗಣಿಸುತ್ತ ಬಂದಿರುವುದು. ನಾವು ನಾಡು-ನುಡಿಗಾಗಿ ಹೋರಾಡುತ್ತ ಬಂದವರು. ಒಂದು ಸರ್ಕಾರವಾಗಿ ಅವರು ನಮ್ಮ ಹೋರಾಟವನ್ನು ಬೆಂಬಲಿಸುವುದು ಬೇಡ, ಆದರೆ ಚಳವಳಿಯನ್ನು ಹತ್ತಿಕ್ಕುತ್ತಲೇ ಹೋದರೆ ಅದಕ್ಕೇನು ಅರ್ಥ? ಎಷ್ಟೋ ಸಂದರ್ಭಗಳಲ್ಲಿ ಸರ್ಕಾರದಿಂದ ಸಾಧ್ಯವಾಗದ ಕೆಲಸವನ್ನು ಕನ್ನಡ ಚಳವಳಿಗಾರರು ಮಾಡಿದ್ದಾರೆ. ಆದರೂ ಕನ್ನಡ ಚಳವಳಿಯನ್ನೇ ಹತ್ತಿಕ್ಕುವ ಪ್ರಯತ್ನಗಳು ಯಾಕೆ ಮಾಡಲಾಗುತ್ತದೆ?
ಬೇರೆ ಕನ್ನಡ ಸಂಘಟನೆಗಳ ವಿಷಯ ಹಾಗಿರಲಿ, ನಾನು ಕರ್ನಾಟಕ ರಕ್ಷಣಾ ವೇದಿಕೆಗೆ ಸಂಬಂಧಿಸಿದಂತೆ ಇಡೀ ರಾಜ್ಯದಲ್ಲಿ ಹೂಡಲಾಗಿರುವ ಮೊಕದ್ದಮೆಗಳ ಸಂಖ್ಯೆಯನ್ನು ಹೇಳಿದರೆ ಯಾರಿಗಾದರೂ ಗಾಬರಿಯಾಗುತ್ತದೆ. ನನ್ನ ಮತ್ತು ನನ್ನ ಕಾರ್ಯಕರ್ತರ ಮೇಲೆ ಹೂಡಲಾಗಿರುವ ಒಟ್ಟು ಮೊಕದ್ದಮೆಗಳ ಸಂಖ್ಯೆ ಸಾವಿರದ ಇನ್ನೂರನ್ನು ಮೀರುತ್ತದೆ ಎಂದರೆ ನೀವು ನಂಬಲೇಬೇಕು. ನನ್ನ ಮೇಲೆ ನನ್ನ ಗಮನದಲ್ಲಿ ಇರುವ ಮೊಕದ್ದಮೆಗಳ ಸಂಖ್ಯೆಯೇ ಸುಮಾರು ನಲವತ್ತೆಂಟು. ಪೊಲೀಸರು ನಮ್ಮ ಮಹಿಳಾ ಕಾರ್ಯಕರ್ತೆಯರನ್ನೂ ಬಿಟ್ಟಿಲ್ಲ. ಅವರ ಮೇಲೂ ಸಾಕಷ್ಟು ಮೊಕದ್ದಮೆಗಳನ್ನು ಹೂಡಲಾಗಿದೆ.
ಇದೆಲ್ಲ ಯಾವ ರೀತಿಯ ಮೊಕದ್ದಮೆಗಳು? ಯಾವುದೋ ಚಳವಳಿಗೆ ನಾವು ಅನುಮತಿ ಪಡೆದಿರುವುದಿಲ್ಲ, ಚಳವಳಿಯ ಸಂದರ್ಭದಲ್ಲಿ ರಸ್ತೆ ತಡೆ ಮಾಡಿರುತ್ತೇವೆ, ಇನ್ನೆಲ್ಲೋ ಪೊಲೀಸರ ನೀತಿ ನಿಯಮಾವಳಿಗಳನ್ನು ಪಾಲಿಸಿರುವುದಿಲ್ಲ. ಇಂಥ ಸಂದರ್ಭದಲ್ಲಿ ನಮ್ಮ ಮೇಲೆ ಮೊಕದ್ದಮೆಗಳನ್ನು ಹೂಡಲಾಗಿರುತ್ತದೆ. ಕೆಲವೊಮ್ಮೆ ಎಲ್ಲ ನಿಯಮಗಳನ್ನು ಪಾಲಿಸಿಯೇ ಚಳವಳಿ ನಡೆಸಿದ್ದರೂ ನಮ್ಮ ಮೇಲೆ ಮೊಕದ್ದಮೆಗಳನ್ನು ಹೂಡಲಾಗಿರುತ್ತದೆ. ಎಷ್ಟೋ ಸಂದರ್ಭದಲ್ಲಿ ನಮ್ಮ ಮೇಲೆ ಮೊಕದ್ದಮೆ ಹೂಡಿರುವುದು ಗೊತ್ತಾಗಿರುವುದೇ ಇಲ್ಲ. ಪೊಲೀಸರು ನಮ್ಮ ಮನೆಯ ಬಾಗಿಲಿಗೆ ವಾರಂಟ್ ತಂದಾಗಲೇ ನಮ್ಮ ಮೇಲೆ ಮೊಕದ್ದಮೆ ಹೂಡಲಾಗಿದೆ ಎಂಬುದು ಗೊತ್ತಾಗುತ್ತದೆ.
ಕೆಲವು ಸಂದರ್ಭಗಳಲ್ಲಿ ನಾವು ಸರ್ಕಾರದ ವಿರುದ್ಧ ತೊಡೆ ತಟ್ಟಿ ನಿಂತಾಗ, ನಮ್ಮನ್ನು ಹಣಿಯಲು ಇಂಥ ಚಳವಳಿಗಳ ಸಂದರ್ಭವನ್ನೇ ಬಳಸಿಕೊಳ್ಳಲಾಗುತ್ತದೆ. ನಾವು ಕಂಡು ಕೇಳರಿಯದ ಸೆಕ್ಷನ್ಗಳನ್ನು ನಮ್ಮ ಮೇಲೆ ಹೇರಲಾಗುತ್ತದೆ. ನಮ್ಮ ಎಷ್ಟೋ ಕಾರ್ಯಕರ್ತರ ಮೇಲೆ ಪೊಲೀಸರು ಗೂಂಡಾ ಕಾಯ್ದೆ ತೆರೆದಿದ್ದಾರೆ. ಇವರ್ಯಾರೂ ಸಮಾಜಘಾತಕ ಚಟುವಟಿಕೆ ನಡೆಸಿದವರಲ್ಲ, ಚಳವಳಿಯ ಮೊಕದ್ದಮೆಗಳನ್ನು ಬಿಟ್ಟರೆ ಬೇರೆ ಯಾವ ರೀತಿಯ ಕ್ರಿಮಿನಲ್ ಕೇಸುಗಳಲ್ಲೂ ಇದ್ದವರಲ್ಲ, ಆದರೂ ಇವರ ಮೇಲೆ ಗೂಂಡಾ ಕಾಯ್ದೆಯನ್ನು ಹೂಡಲಾಗಿದೆ.
ನಮ್ಮ ದೇಶದಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಯಾವತ್ತಿಗೂ ಸುರಕ್ಷಿತರು. ಒಂದು ಪಕ್ಷದ ಅಧಿಕಾರವಿದ್ದಾಗ ಇನ್ನೊಂದು ಪಕ್ಷದ ಕಾರ್ಯಕರ್ತರ ಮೇಲೆ ಮೊಕದ್ದಮೆಗಳನ್ನು ಹೂಡಲಾಗಿರುತ್ತದೆ. ಆ ಇನ್ನೊಂದು ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ತನ್ನ ಕಾರ್ಯಕರ್ತರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುತ್ತದೆ. ಬಳ್ಳಾರಿಯಲ್ಲಿ ಗಡಿರೇಖೆಯನ್ನೇ ಬದಲಾಯಿಸಿ ನೂರಾರು ಕೋಟಿ ರೂ. ಗಣಿ ಸಂಪತ್ತನ್ನು ಲೂಟಿ ಮಾಡಿದವರ ಮೇಲೆ ಇದ್ದ ಕೇಸ್ಗಳನ್ನು ಹಿಂದೆ ಇದ್ದ ಬಿಜೆಪಿ ಸರ್ಕಾರ ಹಿಂದಕ್ಕೆ ಪಡೆಯಿತು. ಮಸೀದಿ, ಚರ್ಚ್ಗಳ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳ ಮೇಲೆ ಇದ್ದ ಕೇಸುಗಳನ್ನು ವಾಪಾಸು ತಗೊಂಡಿತು. ಆದರೆ ಯಾರು ಎಷ್ಟೇ ಹೇಳಿದರೂ ಕನ್ನಡಕ್ಕಾಗಿ ಹೋರಾಟ ಮಾಡಿದವರ ಮೇಲೆ ಇದ್ದ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಿಲ್ಲ.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮಾಡಿದ್ದೂ ಅದೇ ಕೆಲಸವನ್ನೇ. ತನಗೆ ಬೇಕಾದವರ ಮೇಲಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆಯಿತು. ಕಣ್ಣೊರೆಸಲು ಒಂದಷ್ಟು ರೈತರ ಮೇಲಿನ ಪ್ರಕರಣಗಳನ್ನೂ ಹಿಂದಕ್ಕೆ ಪಡೆಯಲಾಯಿತು. ಇತ್ತೀಚಿಗೆ ಕೋಮು ಗಲಭೆಗಳಲ್ಲಿ ಪಾಲ್ಗೊಂಡಿದ್ದ ಪಿಎಫ್ಐ ಎಂಬ ಸಂಘಟನೆಯ ಕಾರ್ಯಕರ್ತರ ಮೇಲಿದ್ದ ಮೊಕದ್ದಮೆಗಳನ್ನೂ ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಿತು.
ತಿರುವಳ್ಳುವರ್ ಪ್ರತಿಮೆ ಅನಾವರಣದ ಸಂದರ್ಭದಲ್ಲಿ ರಾತ್ರೋರಾತ್ರಿ ೧೮೦ ಕಾರ್ಯಕರ್ತರನ್ನು ಬಂಧಿಸಿದ್ದರು. ಬೆಂಗಳೂರಿನ ಒಟ್ಟು ೧೧ ಪೊಲೀಸ್ ಠಾಣೆಗಳಲ್ಲಿ ನನ್ನ ಮೇಲೆ ಕೇಸುಗಳನ್ನು ಹಾಕಲಾಯಿತು. ತಮಾಷೆ ನೋಡಿ, ಬೆಂಗಳೂರಿನಲ್ಲಿರುವ ನನ್ನ ಮೇಲೆ ಬೆಳಗಾವಿಯಲ್ಲಿ, ರಾಯಚೂರಿನಲ್ಲಿ ನಡೆದ ಪ್ರತಿಭಟನೆಯಲ್ಲೂ ಎ-೧ ಮಾಡಿ ಪ್ರಕರಣ ಹೂಡಲಾಯಿತು. ರೈಲ್ವೆ ಹೋರಾಟದ ಸಂದರ್ಭದಲ್ಲೂ ಅಷ್ಟೆ, ನಮ್ಮ ಕಾರ್ಯಕರ್ತರ ತಲೆಯ ಮೇಲೆ ಬಿದ್ದ ಮೊಕದ್ದಮೆಗಳಿಗೆ ಲೆಕ್ಕವೇ ಇಲ್ಲ. ನಾವು ದಿನಬೆಳಗಾದರೆ ಸಾಕು, ನ್ಯಾಯಾಲಯಗಳಲ್ಲಿ ಕೈಕಟ್ಟಿ ನಿಂತುಕೊಳ್ಳಬೇಕು. ಇನ್ನೆಷ್ಟು ದಿನ ಈ ಚಿತ್ರಹಿಂಸೆಯನ್ನು ಸಹಿಸಿಕೊಳ್ಳಬೇಕು? ಅಷ್ಟಕ್ಕೂ ನಾವೇನು ಕೊಲೆಗಡುಕರೇ? ದರೋಡೆಕೋರರೇ? ಸಮಾಜಘಾತಕರೇ?
ಮೊಕದ್ದಮೆಗಳ ಕಾರಣಕ್ಕೆ ನಾವು ಕೋರ್ಟು ಅಲೆದು ಅಲೆದು ಸಾಕಾಗಿದ್ದೇವೆ. ಬರೀ ನಮ್ಮ ಸಮಯ, ಶ್ರಮವಷ್ಟೇ ಇದರಿಂದ ವ್ಯಯವಾಗುತ್ತಿಲ್ಲ. ವಕೀಲರಿಗೆ ಫೀಜು ನೀಡಬೇಕಲ್ಲವೇ? ಅದರ ಖರ್ಚು ಯಾರು ನೋಡಿಕೊಳ್ಳುವುದು? ಚಳವಳಿಗಳ ಕೇಸುಗಳನ್ನು ನಿರ್ವಹಿಸಲೆಂದೇ ನಾವು ವಕೀಲರ ತಂಡವೊಂದನ್ನು ನೇಮಕ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಎಷ್ಟೋ ಕಾರ್ಯಕರ್ತರಿಗೆ ವಕೀಲರ ಫೀಜು ಕೊಡುವ ಶಕ್ತಿಯೂ ಇರುವುದಿಲ್ಲ. ಕೇಸು ನಡೆಸದಿದ್ದರೆ ಜೈಲು ಪಾಲಾಗಬೇಕು. ಇಂಥ ಪರಿಸ್ಥಿತಿಯಲ್ಲಿ ನಮ್ಮ ಕಾರ್ಯಕರ್ತರ ನೆರವಿಗೆ ಇನ್ಯಾರು ನಿಲ್ಲಲು ಸಾಧ್ಯ, ನಾವೇ ನಿಲ್ಲಬೇಕು. ತಿಂಗಳಿಗೆ ಲಕ್ಷಾಂತರ ರುಪಾಯಿಗಳನ್ನು ಹೊಂದಿಸುವುದಾದರೂ ಹೇಗೆ?
ನಮ್ಮ ಪ್ರಭುತ್ವದ ತಂತ್ರಗಳೇ ಹಾಗೆ. ಚಳವಳಿಗಾರರು ಕೋರ್ಟು, ಜೈಲು ಅಲೆಯುವಂತೆ ಮಾಡಿದರೆ ಅವರಿಂದ ತೊಂದರೆ ಕಡಿಮೆ. ಅವರ ಚಳವಳಿಗಳೂ ಸತ್ತು ಹೋಗುತ್ತವೆ. ಹೀಗಾಗಿ ಅವರ ಮೇಲೆ ಸುಳ್ಳು ಮೊಕದ್ದಮೆಯಾದರೂ ಸರಿ, ಮೊಕದ್ದಮೆಗಳನ್ನು ಹಾಕುತ್ತಲೇ ಇರಿ ಎಂಬ ಸೂಚನೆಗಳು ಪೊಲೀಸರಿಗೆ ಇರುತ್ತವೆ. ಹೀಗಾಗಿ ನಾಡಿನ ಎಲ್ಲ ಪೊಲೀಸ್ ಠಾಣೆಗಳಲ್ಲೂ ಚಳವಳಿಗಾರರ ಮೇಲೆ ಮೇಲಿಂದ ಮೇಲೆ ಮೊಕದ್ದಮೆಗಳು ದಾಖಲಾಗುತ್ತವೆ.
ಇವೆಲ್ಲ ಸರಿಯಲ್ಲವೆಂಬುದು ನಮ್ಮ ರಾಜಕಾರಣಿಗಳಿಗೂ ಚೆನ್ನಾಗಿ ಗೊತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸುವ ಎಷ್ಟೋ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜನಪ್ರತಿನಿಧಿಗಳು, ರಾಜಕಾರಣಿಗಳು ರಕ್ಷಣಾ ವೇದಿಕೆ ಕಾರ್ಯಕರ್ತರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಹೇಳುತ್ತಿರುತ್ತಾರೆ. ಬೇರೆ ಯಾರೂ ಬೇಡ, ನಮ್ಮ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಿಂದೆ ವಿರೋಧಪಕ್ಷದ ನಾಯಕರಾಗಿದ್ದ ಕರವೇ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತ, ಇವರ ಮೇಲಿರುವ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಿರಿ ಎಂದು ಆಗಿನ ಗೃಹ ಸಚಿವ ಆರ್.ಅಶೋಕ್ ಅವರಿಗೆ ಹೇಳಿದ್ದರು. ಇವತ್ತು ಸಿದ್ಧರಾಮಯ್ಯ ಅವರ ಸರ್ಕಾರವೇ ಅಸ್ತಿತ್ವದಲ್ಲಿದೆ, ಆದರೂ ನಮ್ಮ ಮೇಲಿನ ಮೊಕದ್ದಮೆಗಳು ಹಾಗೆಯೇ ಇವೆ. ಈಗ ವಿರೋಧಪಕ್ಷದಲ್ಲಿರುವವರು ನಮ್ಮ ಪರವಾಗಿ ಮಾತನಾಡುತ್ತಾರೆ, ಮುಂದೆ ಅಧಿಕಾರಕ್ಕೆ ಬಂದಾಗ ಅವರೂ ಸಹ ಸುಮ್ಮನಾಗುತ್ತಾರೆ. ತಮ್ಮ ಕಾರ್ಯಕರ್ತರು ಮತ್ತು ಪರಿವಾರದವರ ಮೇಲಿನ ಕೇಸುಗಳನ್ನು ಮಾತ್ರ ಹಿಂದಕ್ಕೆ ಪಡೆಯುತ್ತಾರೆ. ಇದೇ ಪರಿಪಾಠ ಮುಂದುವರೆಯುತ್ತ ಸಾಗುತ್ತದೆ.
ನಾವು ಯಾವುದೇ ತರಹದ ಕ್ರಿಮಿನಲ್ ಚಟುವಟಿಕೆ ನಡೆಸಿದ್ದರೆ ಸರ್ಕಾರ ಒಂದಲ್ಲ ಹತ್ತು ಮೊಕದ್ದಮೆಗಳನ್ನು ಹೂಡಲಿ, ಜೈಲಿಗೆ ಕಳುಹಿಸಲಿ. ಆದರೆ ಚಳವಳಿ ಮಾಡಿದರೆಂಬ ಕಾರಣಕ್ಕೆ ಹತ್ತಾರು ಮೊಕದ್ದಮೆಗಳನ್ನು ಹಾಕಿ ಹಿಂಸೆ ನೀಡುತ್ತ ಹೋದರೆ ರಾಜ್ಯದಲ್ಲಿ ಚಳವಳಿಗಳು ಸತ್ತೇ ಹೋಗುತ್ತವೆ. ಪ್ರತಿರೋಧದ ಧ್ವನಿಗಳು, ಭಿನ್ನ ಧ್ವನಿಗಳು ಅಡಗಿಹೋದರೆ ಪ್ರಭುತ್ವಕ್ಕೆ ಬಹಳ ಸಂತೋಷ. ಆದರೆ ಅದು ಪರಿಪೂರ್ಣವಾದ ಪ್ರಜಾಪ್ರಭುತ್ವವಾಗಲಾರದು. ಪ್ರಜಾಪ್ರಭುತ್ವದಲ್ಲಿ ಭಿನ್ನಧ್ವನಿಗಳಿಗೆ ಎಂದೆಂದಿಗೂ ಅವಕಾಶವಿರಲೇಬೇಕು. ಅದರಲ್ಲೂ ನಾಡು ನುಡಿಗಾಗಿ ನಡೆಸುವ ಚಳವಳಿಗಳನ್ನು ಸರ್ಕಾರವೇ ಬಲಿಹಾಕಿದರೆ ಮುಂದೆ ಈ ನಾಡು ನಮ್ಮ ಕೈ ತಪ್ಪಿ ಹೋಗುತ್ತದೆ. ಆ ಎಚ್ಚರವೂ ನಮ್ಮನ್ನು ಆಳುವ ಸರ್ಕಾರಕ್ಕೆ ಇರಬೇಕಾಗುತ್ತದೆ.
ಹಿಂದೆಯೂ ನಾನು ಈ ವಿಷಯವನ್ನು ಹಲವು ಸಂದರ್ಭಗಳಲ್ಲಿ ಹೇಳಿದ್ದುಂಟು. ನ್ಯಾಯಾಧೀಶರಿಗೆ ಇರುವ ಮಾನವೀಯತೆ, ಕನ್ನಡ ಕಾಳಜಿ ನಮ್ಮನಾಳುವ ನಾಯಕರಿಗೆ ಇಲ್ಲ. ಕೆಲ ನ್ಯಾಯಾಧೀಶರು ಕೇಳ್ತಾರೆ: ‘ಏನ್ರೀ ನಾರಾಯಣಗೌಡ್ರೇ, ದಿನಾ ಬಂದು ಕೋರ್ಟ್ನಲ್ಲಿ ನಿಂತುಕೊಳ್ಳುತ್ತೀರಲ್ಲ. ನಿಮಗೆ ಅಂತ ಒಂದು ಬದುಕಿಲ್ಲವೇ. ಯಾಕಿಷ್ಟು ಕೇಸ್ ಹಾಕಿದ್ದಾರೆ?
ಒಬ್ಬ ನ್ಯಾಯಾಧೀಶರ ಟೇಬಲ್ ಮೇಲೆ ೨೦-೩೦ ಕೇಸ್ ಇರುತ್ತೆ. ಒಂದು ಕೋರ್ಟಿನಿಂದ ಇನ್ನೊಂದು ಕೋರ್ಟಿಗೆ ಓಡಾಡಬೇಕು. ಒಂದು ಕೋರ್ಟಿನಲ್ಲಿ ಕೇಸ್ ನಡೆಯುವಾಗ ಇನ್ನೊಂದು ಕೋರ್ಟಿಗೆ ಹೋಗದೆ ಇದ್ದರೆ ಬೇಲ್ ಕ್ಯಾನ್ಸಲ್ ಆಗಿರುತ್ತೆ. ಅಥವಾ ವಾರೆಂಟ್ ಆಗಿರುತ್ತೆ. ಪೊಲೀಸ್ನವರು ಮನೆಗೆ ಹುಡುಕಿಕೊಂಡು ಬರ್ತಾರೆ.
ನನ್ನ ಮೊಕದ್ದಮೆ ಸಂಬಂಧ ವಿಚಾರಣೆ ನಡೆಯುವಾಗ ಒಂದು ದಿನ ಒಬ್ಬ ಗೌರವಾನ್ವಿತ ನ್ಯಾಯಾಧೀಶರು ಇನ್ಸ್ಪೆಕ್ಟರ್ ಒಬ್ಬರನ್ನು ಗದರಿದ್ದರು: ದಿನಾ ಬೆಳಗಾದರೆ ಇವರು ಕೋರ್ಟಿಗೆ ಬರ್ತಾರೆ. ತಲೆ ಮರೆಸಿಕೊಂಡು ಹೋಗಿದ್ದಾರೆ ಅಂತ ಸುಳ್ಳು ಹೇಳ್ತಿರಲ್ರಿ. ನಿಮ್ಮಂಥ ಇನ್ಸ್ಪೆಕ್ಟರ್ಗಳನ್ನು ಹುಚ್ಚಾಸ್ಪತ್ರೆಗೆ ಕಳುಹಿಸಬೇಕು.
ಕಡೆಯದಾಗಿ ಒಂದು ತಮಾಷೆ ವಿಷಯ. ಒಬ್ಬ ಇನ್ಸ್ಪೆಕ್ಟರ್ ನನ್ನ ಮೇಲೆ ಐಪಿಸಿ ೫೩೦ನೇ ಕಲಂ ಅನ್ವಯ ಕೇಸು ಹಾಕಿದ್ದ. ಐಪಿಸಿಯಲ್ಲಿ ೫೩೦ನೇಯ ಸೆಕ್ಷನ್ನೇ ಇಲ್ಲ! ಯಾಕೆ ಅವನು ಇಲ್ಲದ ಸೆಕ್ಷನ್ ಹಾಕಿದ್ದನೋ ಏನೋ? ಪಾಪ, ಅವನಿಗೆ ಯಾವ ಒತ್ತಡವಿತ್ತೋ ಏನೋ? ನ್ಯಾಯಾಧೀಶರು ಇದ್ಯಾವ ಸೆಕ್ಷನ್ ಹಾಕಿದ್ದೀರ್ರೀ ಎಂದು ದಬಾಯಿಸಿದಾಗ ಇನ್ಸ್ ಪೆಕ್ಟರ್ ಏನೋ ತಪ್ಪಾಗಿದೆ ಸ್ವಾಮಿ ಎಂದಿದ್ದರು.
ಚಳವಳಿಗಾರರನ್ನು ನಮ್ಮ ಸರ್ಕಾರಗಳು ಹೇಗೆ ನಡೆಸಿಕೊಳ್ಳುತ್ತವೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾಗಿಲ್ಲವೇನೋ? ಇಷ್ಟಾದರೂ ಕನ್ನಡ ನುಡಿ, ನಾಡು, ಪರಂಪರೆ, ಕನ್ನಡಿಗರ ಉದ್ಯೋಗಕ್ಕೆ ಧಕ್ಕೆಯಾದರೆ ನಾವು ಸುಮ್ಮನೆ ಕೂರುವವರಂತೂ ಅಲ್ಲ. ಸರ್ಕಾರ ಏನೇ ದರ್ಪ, ದಬ್ಬಾಳಿಕೆ ಪ್ರದರ್ಶಿಸಿದರೂ ನಾವು ಎದೆಗುಂದದೆ ಹೋರಾಡುತ್ತೇವೆ. ವಿಶೇಷವಾಗಿ ಕನ್ನಡ ಚಳವಳಿಯ ಕತ್ತುಹಿಚುಕಲು ನಾವಂತೂ ಬಿಡುವುದಿಲ್ಲ, ಕೊನೆ ಉಸಿರಿನವರೆಗೆ.
-ಟಿ.ಎ.ನಾರಾಯಣಗೌಡ,
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
ಚಳವಳಿ ಎಂದರೇನೇ ಪ್ರಭುತ್ವವನ್ನು ಎದುರುಹಾಕಿಕೊಳ್ಳುವ ಪ್ರಕ್ರಿಯೆ. ಯಾವುದೇ ಪ್ರಭುತ್ವವೂ ತನ್ನನ್ನು, ತನ್ನ ನಿಲುವನ್ನು ವಿರೋಧಿಸುವವರೆಡೆಗೆ ಒಂದು ಬಗ್ಗೆಯ ಅಸಹನೆಯನ್ನು ಇಟ್ಟುಕೊಂಡಿರುತ್ತದೆ. ಅದು ರಾಜಪ್ರಭುತ್ವವಾದರೂ ಸರಿ, ಪ್ರಜಾಪ್ರಭುತ್ವವಾದರೂ ಸರಿ ಅಥವಾ ಮಿಲಿಟರಿ ಆಡಳಿತವಾದರೂ ಕೂಡ. ಮಿಕ್ಕೆಲ್ಲ ರಾಜಕೀಯ ವ್ಯವಸ್ಥೆಗಳಿಗಿಂತ ಪ್ರಜಾಪ್ರಭುತ್ವ ಮೇಲು. ಯಾಕೆಂದರೆ ಇತರೆ ಆಡಳಿತ ವ್ಯವಸ್ಥೆಗಳ ಹಾಗೆ ಪ್ರಜಾಪ್ರಭುತ್ವದಲ್ಲಿ ಜನರ ಹೋರಾಟವನ್ನು ಅಷ್ಟು ಸುಲಭವಾಗಿ ಹತ್ತಿಕ್ಕಲು ಸಾಧ್ಯವಿರುವುದಿಲ್ಲ.
ಆದರೆ ಎಷ್ಟೋ ಸಂದರ್ಭಗಳಲ್ಲಿ ಆಳುವ ಸ್ಥಾನದಲ್ಲಿ ಕುಳಿತುಕೊಂಡ ರಾಜಕಾರಣಿಗಳು ಸರ್ವಾಧಿಕಾರಿಗಳ ಹಾಗೆಯೇ ವರ್ತಿಸುತ್ತಾರೆ. ತಮಗೆ ದಕ್ಕಿದ ಅಧಿಕಾರ ಶಾಶ್ವತವೆಂಬ ಭ್ರಮೆಯಲ್ಲೇ ಇರುತ್ತಾರೆ. ತಮ್ಮ ವಿರುದ್ಧ ಕೇಳಿಬರುವ ಯಾವುದೇ ಧ್ವನಿಯನ್ನು ಹತ್ತಿಕ್ಕುವ ದುಷ್ಟತನವನ್ನು ಕಾರ್ಯವನ್ನು ನಡೆಸುತ್ತಲೇ ಇರುತ್ತಾರೆ.

ಬೇರೆ ಕನ್ನಡ ಸಂಘಟನೆಗಳ ವಿಷಯ ಹಾಗಿರಲಿ, ನಾನು ಕರ್ನಾಟಕ ರಕ್ಷಣಾ ವೇದಿಕೆಗೆ ಸಂಬಂಧಿಸಿದಂತೆ ಇಡೀ ರಾಜ್ಯದಲ್ಲಿ ಹೂಡಲಾಗಿರುವ ಮೊಕದ್ದಮೆಗಳ ಸಂಖ್ಯೆಯನ್ನು ಹೇಳಿದರೆ ಯಾರಿಗಾದರೂ ಗಾಬರಿಯಾಗುತ್ತದೆ. ನನ್ನ ಮತ್ತು ನನ್ನ ಕಾರ್ಯಕರ್ತರ ಮೇಲೆ ಹೂಡಲಾಗಿರುವ ಒಟ್ಟು ಮೊಕದ್ದಮೆಗಳ ಸಂಖ್ಯೆ ಸಾವಿರದ ಇನ್ನೂರನ್ನು ಮೀರುತ್ತದೆ ಎಂದರೆ ನೀವು ನಂಬಲೇಬೇಕು. ನನ್ನ ಮೇಲೆ ನನ್ನ ಗಮನದಲ್ಲಿ ಇರುವ ಮೊಕದ್ದಮೆಗಳ ಸಂಖ್ಯೆಯೇ ಸುಮಾರು ನಲವತ್ತೆಂಟು. ಪೊಲೀಸರು ನಮ್ಮ ಮಹಿಳಾ ಕಾರ್ಯಕರ್ತೆಯರನ್ನೂ ಬಿಟ್ಟಿಲ್ಲ. ಅವರ ಮೇಲೂ ಸಾಕಷ್ಟು ಮೊಕದ್ದಮೆಗಳನ್ನು ಹೂಡಲಾಗಿದೆ.
ಇದೆಲ್ಲ ಯಾವ ರೀತಿಯ ಮೊಕದ್ದಮೆಗಳು? ಯಾವುದೋ ಚಳವಳಿಗೆ ನಾವು ಅನುಮತಿ ಪಡೆದಿರುವುದಿಲ್ಲ, ಚಳವಳಿಯ ಸಂದರ್ಭದಲ್ಲಿ ರಸ್ತೆ ತಡೆ ಮಾಡಿರುತ್ತೇವೆ, ಇನ್ನೆಲ್ಲೋ ಪೊಲೀಸರ ನೀತಿ ನಿಯಮಾವಳಿಗಳನ್ನು ಪಾಲಿಸಿರುವುದಿಲ್ಲ. ಇಂಥ ಸಂದರ್ಭದಲ್ಲಿ ನಮ್ಮ ಮೇಲೆ ಮೊಕದ್ದಮೆಗಳನ್ನು ಹೂಡಲಾಗಿರುತ್ತದೆ. ಕೆಲವೊಮ್ಮೆ ಎಲ್ಲ ನಿಯಮಗಳನ್ನು ಪಾಲಿಸಿಯೇ ಚಳವಳಿ ನಡೆಸಿದ್ದರೂ ನಮ್ಮ ಮೇಲೆ ಮೊಕದ್ದಮೆಗಳನ್ನು ಹೂಡಲಾಗಿರುತ್ತದೆ. ಎಷ್ಟೋ ಸಂದರ್ಭದಲ್ಲಿ ನಮ್ಮ ಮೇಲೆ ಮೊಕದ್ದಮೆ ಹೂಡಿರುವುದು ಗೊತ್ತಾಗಿರುವುದೇ ಇಲ್ಲ. ಪೊಲೀಸರು ನಮ್ಮ ಮನೆಯ ಬಾಗಿಲಿಗೆ ವಾರಂಟ್ ತಂದಾಗಲೇ ನಮ್ಮ ಮೇಲೆ ಮೊಕದ್ದಮೆ ಹೂಡಲಾಗಿದೆ ಎಂಬುದು ಗೊತ್ತಾಗುತ್ತದೆ.
ಕೆಲವು ಸಂದರ್ಭಗಳಲ್ಲಿ ನಾವು ಸರ್ಕಾರದ ವಿರುದ್ಧ ತೊಡೆ ತಟ್ಟಿ ನಿಂತಾಗ, ನಮ್ಮನ್ನು ಹಣಿಯಲು ಇಂಥ ಚಳವಳಿಗಳ ಸಂದರ್ಭವನ್ನೇ ಬಳಸಿಕೊಳ್ಳಲಾಗುತ್ತದೆ. ನಾವು ಕಂಡು ಕೇಳರಿಯದ ಸೆಕ್ಷನ್ಗಳನ್ನು ನಮ್ಮ ಮೇಲೆ ಹೇರಲಾಗುತ್ತದೆ. ನಮ್ಮ ಎಷ್ಟೋ ಕಾರ್ಯಕರ್ತರ ಮೇಲೆ ಪೊಲೀಸರು ಗೂಂಡಾ ಕಾಯ್ದೆ ತೆರೆದಿದ್ದಾರೆ. ಇವರ್ಯಾರೂ ಸಮಾಜಘಾತಕ ಚಟುವಟಿಕೆ ನಡೆಸಿದವರಲ್ಲ, ಚಳವಳಿಯ ಮೊಕದ್ದಮೆಗಳನ್ನು ಬಿಟ್ಟರೆ ಬೇರೆ ಯಾವ ರೀತಿಯ ಕ್ರಿಮಿನಲ್ ಕೇಸುಗಳಲ್ಲೂ ಇದ್ದವರಲ್ಲ, ಆದರೂ ಇವರ ಮೇಲೆ ಗೂಂಡಾ ಕಾಯ್ದೆಯನ್ನು ಹೂಡಲಾಗಿದೆ.
ನಮ್ಮ ದೇಶದಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಯಾವತ್ತಿಗೂ ಸುರಕ್ಷಿತರು. ಒಂದು ಪಕ್ಷದ ಅಧಿಕಾರವಿದ್ದಾಗ ಇನ್ನೊಂದು ಪಕ್ಷದ ಕಾರ್ಯಕರ್ತರ ಮೇಲೆ ಮೊಕದ್ದಮೆಗಳನ್ನು ಹೂಡಲಾಗಿರುತ್ತದೆ. ಆ ಇನ್ನೊಂದು ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ತನ್ನ ಕಾರ್ಯಕರ್ತರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುತ್ತದೆ. ಬಳ್ಳಾರಿಯಲ್ಲಿ ಗಡಿರೇಖೆಯನ್ನೇ ಬದಲಾಯಿಸಿ ನೂರಾರು ಕೋಟಿ ರೂ. ಗಣಿ ಸಂಪತ್ತನ್ನು ಲೂಟಿ ಮಾಡಿದವರ ಮೇಲೆ ಇದ್ದ ಕೇಸ್ಗಳನ್ನು ಹಿಂದೆ ಇದ್ದ ಬಿಜೆಪಿ ಸರ್ಕಾರ ಹಿಂದಕ್ಕೆ ಪಡೆಯಿತು. ಮಸೀದಿ, ಚರ್ಚ್ಗಳ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳ ಮೇಲೆ ಇದ್ದ ಕೇಸುಗಳನ್ನು ವಾಪಾಸು ತಗೊಂಡಿತು. ಆದರೆ ಯಾರು ಎಷ್ಟೇ ಹೇಳಿದರೂ ಕನ್ನಡಕ್ಕಾಗಿ ಹೋರಾಟ ಮಾಡಿದವರ ಮೇಲೆ ಇದ್ದ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಿಲ್ಲ.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮಾಡಿದ್ದೂ ಅದೇ ಕೆಲಸವನ್ನೇ. ತನಗೆ ಬೇಕಾದವರ ಮೇಲಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆಯಿತು. ಕಣ್ಣೊರೆಸಲು ಒಂದಷ್ಟು ರೈತರ ಮೇಲಿನ ಪ್ರಕರಣಗಳನ್ನೂ ಹಿಂದಕ್ಕೆ ಪಡೆಯಲಾಯಿತು. ಇತ್ತೀಚಿಗೆ ಕೋಮು ಗಲಭೆಗಳಲ್ಲಿ ಪಾಲ್ಗೊಂಡಿದ್ದ ಪಿಎಫ್ಐ ಎಂಬ ಸಂಘಟನೆಯ ಕಾರ್ಯಕರ್ತರ ಮೇಲಿದ್ದ ಮೊಕದ್ದಮೆಗಳನ್ನೂ ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಿತು.
ತಿರುವಳ್ಳುವರ್ ಪ್ರತಿಮೆ ಅನಾವರಣದ ಸಂದರ್ಭದಲ್ಲಿ ರಾತ್ರೋರಾತ್ರಿ ೧೮೦ ಕಾರ್ಯಕರ್ತರನ್ನು ಬಂಧಿಸಿದ್ದರು. ಬೆಂಗಳೂರಿನ ಒಟ್ಟು ೧೧ ಪೊಲೀಸ್ ಠಾಣೆಗಳಲ್ಲಿ ನನ್ನ ಮೇಲೆ ಕೇಸುಗಳನ್ನು ಹಾಕಲಾಯಿತು. ತಮಾಷೆ ನೋಡಿ, ಬೆಂಗಳೂರಿನಲ್ಲಿರುವ ನನ್ನ ಮೇಲೆ ಬೆಳಗಾವಿಯಲ್ಲಿ, ರಾಯಚೂರಿನಲ್ಲಿ ನಡೆದ ಪ್ರತಿಭಟನೆಯಲ್ಲೂ ಎ-೧ ಮಾಡಿ ಪ್ರಕರಣ ಹೂಡಲಾಯಿತು. ರೈಲ್ವೆ ಹೋರಾಟದ ಸಂದರ್ಭದಲ್ಲೂ ಅಷ್ಟೆ, ನಮ್ಮ ಕಾರ್ಯಕರ್ತರ ತಲೆಯ ಮೇಲೆ ಬಿದ್ದ ಮೊಕದ್ದಮೆಗಳಿಗೆ ಲೆಕ್ಕವೇ ಇಲ್ಲ. ನಾವು ದಿನಬೆಳಗಾದರೆ ಸಾಕು, ನ್ಯಾಯಾಲಯಗಳಲ್ಲಿ ಕೈಕಟ್ಟಿ ನಿಂತುಕೊಳ್ಳಬೇಕು. ಇನ್ನೆಷ್ಟು ದಿನ ಈ ಚಿತ್ರಹಿಂಸೆಯನ್ನು ಸಹಿಸಿಕೊಳ್ಳಬೇಕು? ಅಷ್ಟಕ್ಕೂ ನಾವೇನು ಕೊಲೆಗಡುಕರೇ? ದರೋಡೆಕೋರರೇ? ಸಮಾಜಘಾತಕರೇ?
ಮೊಕದ್ದಮೆಗಳ ಕಾರಣಕ್ಕೆ ನಾವು ಕೋರ್ಟು ಅಲೆದು ಅಲೆದು ಸಾಕಾಗಿದ್ದೇವೆ. ಬರೀ ನಮ್ಮ ಸಮಯ, ಶ್ರಮವಷ್ಟೇ ಇದರಿಂದ ವ್ಯಯವಾಗುತ್ತಿಲ್ಲ. ವಕೀಲರಿಗೆ ಫೀಜು ನೀಡಬೇಕಲ್ಲವೇ? ಅದರ ಖರ್ಚು ಯಾರು ನೋಡಿಕೊಳ್ಳುವುದು? ಚಳವಳಿಗಳ ಕೇಸುಗಳನ್ನು ನಿರ್ವಹಿಸಲೆಂದೇ ನಾವು ವಕೀಲರ ತಂಡವೊಂದನ್ನು ನೇಮಕ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಎಷ್ಟೋ ಕಾರ್ಯಕರ್ತರಿಗೆ ವಕೀಲರ ಫೀಜು ಕೊಡುವ ಶಕ್ತಿಯೂ ಇರುವುದಿಲ್ಲ. ಕೇಸು ನಡೆಸದಿದ್ದರೆ ಜೈಲು ಪಾಲಾಗಬೇಕು. ಇಂಥ ಪರಿಸ್ಥಿತಿಯಲ್ಲಿ ನಮ್ಮ ಕಾರ್ಯಕರ್ತರ ನೆರವಿಗೆ ಇನ್ಯಾರು ನಿಲ್ಲಲು ಸಾಧ್ಯ, ನಾವೇ ನಿಲ್ಲಬೇಕು. ತಿಂಗಳಿಗೆ ಲಕ್ಷಾಂತರ ರುಪಾಯಿಗಳನ್ನು ಹೊಂದಿಸುವುದಾದರೂ ಹೇಗೆ?
ನಮ್ಮ ಪ್ರಭುತ್ವದ ತಂತ್ರಗಳೇ ಹಾಗೆ. ಚಳವಳಿಗಾರರು ಕೋರ್ಟು, ಜೈಲು ಅಲೆಯುವಂತೆ ಮಾಡಿದರೆ ಅವರಿಂದ ತೊಂದರೆ ಕಡಿಮೆ. ಅವರ ಚಳವಳಿಗಳೂ ಸತ್ತು ಹೋಗುತ್ತವೆ. ಹೀಗಾಗಿ ಅವರ ಮೇಲೆ ಸುಳ್ಳು ಮೊಕದ್ದಮೆಯಾದರೂ ಸರಿ, ಮೊಕದ್ದಮೆಗಳನ್ನು ಹಾಕುತ್ತಲೇ ಇರಿ ಎಂಬ ಸೂಚನೆಗಳು ಪೊಲೀಸರಿಗೆ ಇರುತ್ತವೆ. ಹೀಗಾಗಿ ನಾಡಿನ ಎಲ್ಲ ಪೊಲೀಸ್ ಠಾಣೆಗಳಲ್ಲೂ ಚಳವಳಿಗಾರರ ಮೇಲೆ ಮೇಲಿಂದ ಮೇಲೆ ಮೊಕದ್ದಮೆಗಳು ದಾಖಲಾಗುತ್ತವೆ.
ಇವೆಲ್ಲ ಸರಿಯಲ್ಲವೆಂಬುದು ನಮ್ಮ ರಾಜಕಾರಣಿಗಳಿಗೂ ಚೆನ್ನಾಗಿ ಗೊತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸುವ ಎಷ್ಟೋ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜನಪ್ರತಿನಿಧಿಗಳು, ರಾಜಕಾರಣಿಗಳು ರಕ್ಷಣಾ ವೇದಿಕೆ ಕಾರ್ಯಕರ್ತರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಹೇಳುತ್ತಿರುತ್ತಾರೆ. ಬೇರೆ ಯಾರೂ ಬೇಡ, ನಮ್ಮ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಿಂದೆ ವಿರೋಧಪಕ್ಷದ ನಾಯಕರಾಗಿದ್ದ ಕರವೇ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತ, ಇವರ ಮೇಲಿರುವ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಿರಿ ಎಂದು ಆಗಿನ ಗೃಹ ಸಚಿವ ಆರ್.ಅಶೋಕ್ ಅವರಿಗೆ ಹೇಳಿದ್ದರು. ಇವತ್ತು ಸಿದ್ಧರಾಮಯ್ಯ ಅವರ ಸರ್ಕಾರವೇ ಅಸ್ತಿತ್ವದಲ್ಲಿದೆ, ಆದರೂ ನಮ್ಮ ಮೇಲಿನ ಮೊಕದ್ದಮೆಗಳು ಹಾಗೆಯೇ ಇವೆ. ಈಗ ವಿರೋಧಪಕ್ಷದಲ್ಲಿರುವವರು ನಮ್ಮ ಪರವಾಗಿ ಮಾತನಾಡುತ್ತಾರೆ, ಮುಂದೆ ಅಧಿಕಾರಕ್ಕೆ ಬಂದಾಗ ಅವರೂ ಸಹ ಸುಮ್ಮನಾಗುತ್ತಾರೆ. ತಮ್ಮ ಕಾರ್ಯಕರ್ತರು ಮತ್ತು ಪರಿವಾರದವರ ಮೇಲಿನ ಕೇಸುಗಳನ್ನು ಮಾತ್ರ ಹಿಂದಕ್ಕೆ ಪಡೆಯುತ್ತಾರೆ. ಇದೇ ಪರಿಪಾಠ ಮುಂದುವರೆಯುತ್ತ ಸಾಗುತ್ತದೆ.
ನಾವು ಯಾವುದೇ ತರಹದ ಕ್ರಿಮಿನಲ್ ಚಟುವಟಿಕೆ ನಡೆಸಿದ್ದರೆ ಸರ್ಕಾರ ಒಂದಲ್ಲ ಹತ್ತು ಮೊಕದ್ದಮೆಗಳನ್ನು ಹೂಡಲಿ, ಜೈಲಿಗೆ ಕಳುಹಿಸಲಿ. ಆದರೆ ಚಳವಳಿ ಮಾಡಿದರೆಂಬ ಕಾರಣಕ್ಕೆ ಹತ್ತಾರು ಮೊಕದ್ದಮೆಗಳನ್ನು ಹಾಕಿ ಹಿಂಸೆ ನೀಡುತ್ತ ಹೋದರೆ ರಾಜ್ಯದಲ್ಲಿ ಚಳವಳಿಗಳು ಸತ್ತೇ ಹೋಗುತ್ತವೆ. ಪ್ರತಿರೋಧದ ಧ್ವನಿಗಳು, ಭಿನ್ನ ಧ್ವನಿಗಳು ಅಡಗಿಹೋದರೆ ಪ್ರಭುತ್ವಕ್ಕೆ ಬಹಳ ಸಂತೋಷ. ಆದರೆ ಅದು ಪರಿಪೂರ್ಣವಾದ ಪ್ರಜಾಪ್ರಭುತ್ವವಾಗಲಾರದು. ಪ್ರಜಾಪ್ರಭುತ್ವದಲ್ಲಿ ಭಿನ್ನಧ್ವನಿಗಳಿಗೆ ಎಂದೆಂದಿಗೂ ಅವಕಾಶವಿರಲೇಬೇಕು. ಅದರಲ್ಲೂ ನಾಡು ನುಡಿಗಾಗಿ ನಡೆಸುವ ಚಳವಳಿಗಳನ್ನು ಸರ್ಕಾರವೇ ಬಲಿಹಾಕಿದರೆ ಮುಂದೆ ಈ ನಾಡು ನಮ್ಮ ಕೈ ತಪ್ಪಿ ಹೋಗುತ್ತದೆ. ಆ ಎಚ್ಚರವೂ ನಮ್ಮನ್ನು ಆಳುವ ಸರ್ಕಾರಕ್ಕೆ ಇರಬೇಕಾಗುತ್ತದೆ.
ಹಿಂದೆಯೂ ನಾನು ಈ ವಿಷಯವನ್ನು ಹಲವು ಸಂದರ್ಭಗಳಲ್ಲಿ ಹೇಳಿದ್ದುಂಟು. ನ್ಯಾಯಾಧೀಶರಿಗೆ ಇರುವ ಮಾನವೀಯತೆ, ಕನ್ನಡ ಕಾಳಜಿ ನಮ್ಮನಾಳುವ ನಾಯಕರಿಗೆ ಇಲ್ಲ. ಕೆಲ ನ್ಯಾಯಾಧೀಶರು ಕೇಳ್ತಾರೆ: ‘ಏನ್ರೀ ನಾರಾಯಣಗೌಡ್ರೇ, ದಿನಾ ಬಂದು ಕೋರ್ಟ್ನಲ್ಲಿ ನಿಂತುಕೊಳ್ಳುತ್ತೀರಲ್ಲ. ನಿಮಗೆ ಅಂತ ಒಂದು ಬದುಕಿಲ್ಲವೇ. ಯಾಕಿಷ್ಟು ಕೇಸ್ ಹಾಕಿದ್ದಾರೆ?
ಒಬ್ಬ ನ್ಯಾಯಾಧೀಶರ ಟೇಬಲ್ ಮೇಲೆ ೨೦-೩೦ ಕೇಸ್ ಇರುತ್ತೆ. ಒಂದು ಕೋರ್ಟಿನಿಂದ ಇನ್ನೊಂದು ಕೋರ್ಟಿಗೆ ಓಡಾಡಬೇಕು. ಒಂದು ಕೋರ್ಟಿನಲ್ಲಿ ಕೇಸ್ ನಡೆಯುವಾಗ ಇನ್ನೊಂದು ಕೋರ್ಟಿಗೆ ಹೋಗದೆ ಇದ್ದರೆ ಬೇಲ್ ಕ್ಯಾನ್ಸಲ್ ಆಗಿರುತ್ತೆ. ಅಥವಾ ವಾರೆಂಟ್ ಆಗಿರುತ್ತೆ. ಪೊಲೀಸ್ನವರು ಮನೆಗೆ ಹುಡುಕಿಕೊಂಡು ಬರ್ತಾರೆ.
ನನ್ನ ಮೊಕದ್ದಮೆ ಸಂಬಂಧ ವಿಚಾರಣೆ ನಡೆಯುವಾಗ ಒಂದು ದಿನ ಒಬ್ಬ ಗೌರವಾನ್ವಿತ ನ್ಯಾಯಾಧೀಶರು ಇನ್ಸ್ಪೆಕ್ಟರ್ ಒಬ್ಬರನ್ನು ಗದರಿದ್ದರು: ದಿನಾ ಬೆಳಗಾದರೆ ಇವರು ಕೋರ್ಟಿಗೆ ಬರ್ತಾರೆ. ತಲೆ ಮರೆಸಿಕೊಂಡು ಹೋಗಿದ್ದಾರೆ ಅಂತ ಸುಳ್ಳು ಹೇಳ್ತಿರಲ್ರಿ. ನಿಮ್ಮಂಥ ಇನ್ಸ್ಪೆಕ್ಟರ್ಗಳನ್ನು ಹುಚ್ಚಾಸ್ಪತ್ರೆಗೆ ಕಳುಹಿಸಬೇಕು.
ಕಡೆಯದಾಗಿ ಒಂದು ತಮಾಷೆ ವಿಷಯ. ಒಬ್ಬ ಇನ್ಸ್ಪೆಕ್ಟರ್ ನನ್ನ ಮೇಲೆ ಐಪಿಸಿ ೫೩೦ನೇ ಕಲಂ ಅನ್ವಯ ಕೇಸು ಹಾಕಿದ್ದ. ಐಪಿಸಿಯಲ್ಲಿ ೫೩೦ನೇಯ ಸೆಕ್ಷನ್ನೇ ಇಲ್ಲ! ಯಾಕೆ ಅವನು ಇಲ್ಲದ ಸೆಕ್ಷನ್ ಹಾಕಿದ್ದನೋ ಏನೋ? ಪಾಪ, ಅವನಿಗೆ ಯಾವ ಒತ್ತಡವಿತ್ತೋ ಏನೋ? ನ್ಯಾಯಾಧೀಶರು ಇದ್ಯಾವ ಸೆಕ್ಷನ್ ಹಾಕಿದ್ದೀರ್ರೀ ಎಂದು ದಬಾಯಿಸಿದಾಗ ಇನ್ಸ್ ಪೆಕ್ಟರ್ ಏನೋ ತಪ್ಪಾಗಿದೆ ಸ್ವಾಮಿ ಎಂದಿದ್ದರು.
ಚಳವಳಿಗಾರರನ್ನು ನಮ್ಮ ಸರ್ಕಾರಗಳು ಹೇಗೆ ನಡೆಸಿಕೊಳ್ಳುತ್ತವೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾಗಿಲ್ಲವೇನೋ? ಇಷ್ಟಾದರೂ ಕನ್ನಡ ನುಡಿ, ನಾಡು, ಪರಂಪರೆ, ಕನ್ನಡಿಗರ ಉದ್ಯೋಗಕ್ಕೆ ಧಕ್ಕೆಯಾದರೆ ನಾವು ಸುಮ್ಮನೆ ಕೂರುವವರಂತೂ ಅಲ್ಲ. ಸರ್ಕಾರ ಏನೇ ದರ್ಪ, ದಬ್ಬಾಳಿಕೆ ಪ್ರದರ್ಶಿಸಿದರೂ ನಾವು ಎದೆಗುಂದದೆ ಹೋರಾಡುತ್ತೇವೆ. ವಿಶೇಷವಾಗಿ ಕನ್ನಡ ಚಳವಳಿಯ ಕತ್ತುಹಿಚುಕಲು ನಾವಂತೂ ಬಿಡುವುದಿಲ್ಲ, ಕೊನೆ ಉಸಿರಿನವರೆಗೆ.
-ಟಿ.ಎ.ನಾರಾಯಣಗೌಡ,
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ